ಲಕ್ಕುಂಡಿ 
ರಾಜ್ಯ

ಲಕ್ಕುಂಡಿ ಭೂಗರ್ಭದ ರಹಸ್ಯ: ನೆಲದಡಿಯಲ್ಲಿರುವ 101 ದೇವಾಲಯ-101 ಬಾವಿಗಳಿಗಾಗಿ ಮುಂದುವರೆದ ಉತ್ಖನನ ಕಾರ್ಯ; ಕಲ್ಯಾಣ ಚಾಲುಕ್ಯರ ಸ್ವರ್ಣಯುಗ ಮತ್ತೆ ಹೊರಬರುತ್ತದೆಯೇ..?

ಶಿಲ್ಪಕಲೆಯ ದೃಷ್ಟಿಯಿಂದ ಮಾತ್ರವಲ್ಲದೆ, ಚಿನ್ನ, ಬೆಳ್ಳಿ, ವಜ್ರ ಮತ್ತು ನಿಧಿ ಸಂಪತ್ತಿನಿಂದ ಕೂಡಿದ ಕೇಂದ್ರವಾಗಿದ್ದ ಲಕ್ಕುಂಡಿ, ಆರ್ಥಿಕ ಮತ್ತು ಸಾಂಸ್ಕೃತಿಕವಾಗಿ ಪ್ರಬಲ ಕೇಂದ್ರವಾಗಿತ್ತು ಎಂಬುದು ಶಾಸನಗಳಿಂದ ತಿಳಿದುಬರುತ್ತದೆ.

ಲಕ್ಕುಂಡಿ (ಗದಗ): ಒಮ್ಮೆ ದಕ್ಷಿಣ ಭಾರತದ ವೈಭವಶಾಲಿ ನಗರವಾಗಿದ್ದ ಲಕ್ಕುಂಡಿ ಇಂದು ಮತ್ತೆ ಇತಿಹಾಸದ ಕೇಂದ್ರಬಿಂದುವಾಗಿ ಹೊರಹೊಮ್ಮುತ್ತಿದೆ. ಭೂಮಿಯೊಳಗೆ ಅಡಗಿರುವ 101 ದೇವಾಲಯಗಳು ಮತ್ತು 101 ಬಾವಿಗಳನ್ನು ಪತ್ತೆಹಚ್ಚುವ ಉದ್ದೇಶದಿಂದ ನಡೆಯುತ್ತಿರುವ ಉತ್ಖನನ ಕಾರ್ಯ ಪುರಾತತ್ವ ತಜ್ಞರು, ಇತಿಹಾಸಕಾರರು ಮತ್ತು ಸಂಶೋಧಕರ ಕುತೂಹಲವನ್ನು ಹೆಚ್ಚಿಸಿದೆ.

ಕರ್ನಾಟಕ ರಾಜ್ಯ ಪುರಾತತ್ವ, ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ, ಲಕ್ಕುಂಡಿ ಹೆರಿಟೇಜ್ ಏರಿಯಾ ಡೆವಲಪ್‌ಮೆಂಟ್ ಅಥಾರಿಟಿ (LHADA) ಹಾಗೂ ಗದಗ ಜಿಲ್ಲಾಡಳಿತದ ಜಂಟಿ ಪ್ರಯತ್ನದಿಂದ ಈ ಮಹತ್ವಾಕಾಂಕ್ಷಿ ಯೋಜನೆ ಆರಂಭವಾಗಿದೆ. ಇದರ ಹಿಂದೆ ಇರುವ ದೊಡ್ಡ ಗುರಿ – ಲಕ್ಕುಂಡಿಗೆ ಯುನೆಸ್ಕೋ ವಿಶ್ವ ಪರಂಪರೆ ಸ್ಥಾನಮಾನ ಪಡೆಯುವುದಾಗಿದೆ.

ಇತಿಹಾಸಕಾರರ ಪ್ರಕಾರ, ಲಕ್ಕುಂಡಿ ಒಂದು ಕಾಲದಲ್ಲಿ ದಕ್ಷಿಣ ಭಾರತದ ಪ್ರಮುಖ ನಗರವಾಗಿತ್ತು. ಕಲ್ಯಾಣ ಚಾಲುಕ್ಯರು, ರಾಷ್ಟ್ರಕೂಟರು, ಹೋಯ್ಸಳರು, ಕಲಚೂರಿಗಳು, ವಿಜಯನಗರ ಸಾಮ್ರಾಜ್ಯ ಮತ್ತು ದಾನ ಚಿಂತಾಮಣಿ ಅತ್ತಿಮಬ್ಬೆಯ ಕಾಲದಲ್ಲಿ ಈ ಪ್ರದೇಶ ವೈಭವದ ಶಿಖರದಲ್ಲಿತ್ತು.

ಶಿಲ್ಪಕಲೆಯ ದೃಷ್ಟಿಯಿಂದ ಮಾತ್ರವಲ್ಲದೆ, ಚಿನ್ನ, ಬೆಳ್ಳಿ, ವಜ್ರ ಮತ್ತು ನಿಧಿ ಸಂಪತ್ತಿನಿಂದ ಕೂಡಿದ ಕೇಂದ್ರವಾಗಿದ್ದ ಲಕ್ಕುಂಡಿ, ಆರ್ಥಿಕ ಮತ್ತು ಸಾಂಸ್ಕೃತಿಕವಾಗಿ ಪ್ರಬಲ ಕೇಂದ್ರವಾಗಿತ್ತು ಎಂಬುದು ಶಾಸನಗಳಿಂದ ತಿಳಿದುಬರುತ್ತದೆ.

101 ದೇವಾಲಯಗಳು ಮತ್ತು 101 ಬಾವಿಗಳು: ಐತಿಹಾಸಿಕ ಸತ್ಯ?

ಲಕ್ಕುಂಡಿಯಲ್ಲಿ 101 ದೇವಾಲಯಗಳು ಮತ್ತು 101 ಬಾವಿಗಳು ಇದ್ದವು ಎಂಬುದನ್ನು ಅನೇಕ ಶಾಸನಗಳು ಮತ್ತು ದಾಖಲೆಗಳು ಉಲ್ಲೇಖಿಸುತ್ತವೆ.

ಈ ಕಾರಣದಿಂದಲೇ ಈಗ ನಡೆಯುತ್ತಿರುವ ಉತ್ಖನನ ಕಾರ್ಯವನ್ನು 10ನೇ ಶತಮಾನದ ಲಕ್ಕುಂಡಿಯನ್ನು ಪುನರ್‌ ಅನ್ವೇಷಿಸುವ ಪ್ರಯತ್ನ ಎಂದು ಪುರಾತತ್ವ ತಜ್ಞರು ಹೇಳುತ್ತಿದ್ದಾರೆ.

ಈ ಶೋಧ ಕಾರ್ಯವು ಖಜಾನೆ ಹುಡುಕಾಟವಲ್ಲ, ಸಂಪೂರ್ಣವಾಗಿ ಐತಿಹಾಸಿಕ ಅಧ್ಯಯನದ ಭಾಗವಾಗಿದ್ದು, “ಲಕ್ಕುಂಡಿಯ ಪುರಾತನ ವೈಭವವನ್ನು ಪುನಃ ಬೆಳಕಿಗೆ ತರುವ ಪ್ರಯತ್ನವಾಗಿದೆ ಎಂದು ಸಚಿವ ಹೆಚ್.ಕೆ.ಪಾಟೀಲ್ ಅವರು ಹೇಳಿದ್ದಾರೆ.

ಉತ್ಖನನ ಕಾರ್ಯ ವೇಳೆ ಪತ್ತೆಯಾದ ಅಮೂಲ್ಯ ವಸ್ತುಗಳು...

ಜನವರಿ 16 ರಂದು ಕೋಟೆ ವೀರಭದ್ರೇಶ್ವರ ದೇವಾಲಯದ ಆವರಣದಲ್ಲಿ ಪ್ರಾರಂಭವಾದ ಉತ್ಖನನ ಕಾರ್ಯವು ಫೆಬ್ರವರಿ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ.

ಉತ್ಖನನದ ಸಮಯದಲ್ಲಿ, ಪ್ರಾಚೀನ ದೇವಾಲಯದ ಅವಶೇಷಗಳು, ಶಿವಲಿಂಗ ಮತ್ತು ಕಲ್ಲಿನಿಂದ ಕೆತ್ತಿದ ನಾಗರಹಾವಿನ ತಲೆ, ನವಶಿಲಾಯುಗದ ಕಲ್ಲಿನ ಕೈಕೊಡಲಿ, ಕಂಬದ ಆಕಾರದ ಪೀಠ ಮತ್ತು ಸಣ್ಣ ಲೋಹದ ಗಂಟೆ, ಮುರಿದ ಮಣ್ಣಿನ ಮಡಕೆ ಆಕೃತಿ ಮತ್ತು ಜೈನ ಚಿತ್ರವಿರುವ ಪೀಠ ಮತ್ತು ಮಣ್ಣಿನ ಫಲಕ ಕಂಡುಬಂದಿವೆ.

ಇದಲ್ಲದೆ ಪುರಾತತ್ವ ಇಲಾಖೆಯ ಅಧಿಕಾರಿಗಳು ಇತರ ಅನೇಕ ಅವಶೇಷಗಳನ್ನು ಸಂಗ್ರಹಿಸಿದ್ದಾರೆ. ಉತ್ಖನನದ ಮೊದಲ 15 ದಿನಗಳಲ್ಲಿ, ಕೆಲವೇ ಪ್ರಾಚೀನ ಅವಶೇಷಗಳು ಕಂಡುಬಂದಿದ್ದವು. ಮುಂದಿನ 15 ದಿನಗಳಲ್ಲಿ ಯಾವುದೇ ಅವಶೇಷಗಳು ಕಂಡುಬಂದಿಲ್ಲವಾದರೂ, ಕೋಟೆಯಂತಹ ಗೋಡೆ ಕಂಡುಬಂದಿದೆ, ಪುರಾತತ್ವ ಇಲಾಖೆ ಅಧಿಕಾರಿಗಳು ಅದರ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ.

1185ರ ಕಲ್ಯಾಣ ಚಾಲುಕ್ಯ ಶಾಸನಗಳು ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಾಣ್ಯಶಾಲೆ ಇದ್ದುದನ್ನು ಸೂಚಿಸುತ್ತವೆ. ಇಲ್ಲಿ ಚಿನ್ನ ಮತ್ತು ಬೆಳ್ಳಿ ನಾಣ್ಯಗಳನ್ನು ತಯಾರಿಸಲಾಗುತ್ತಿತ್ತು ಎನ್ನಲಾಗಿದೆ. ಈ ನಾಣ್ಯಗಳನ್ನು ಪೊಂಗಡಾನ್ಯ, ಲೋಕಿಯ, ಲೋಕಿಗದನ್ಯ, ಲೋಕಿಯಾಪನ್ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ.

ಇತಿಹಾಸಕಾರರ ಪ್ರಕಾರ, ಲಕ್ಕುಂಡಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಚಿನ್ನದ ನಿಕ್ಷೇಪಗಳಿದ್ದವು ಎಂಬುದಕ್ಕೆ ದಾಖಲೆಗಳೂ ಕೂಡ ಸಾಕ್ಷಿಯಾಗಿವೆ.

ಇತ್ತೀಚೆಗೆ 14 ವರ್ಷದ ಪ್ರಜ್ವಲ್ ರಿಟ್ಟಿ ಎಂಬ ಬಾಲಕ ತನ್ನ ಮನೆಯ ಅಡಿಪಾಯದ ವೇಳೆ ತೋಡುವಿಕೆ ಕಾರ್ಯದ ವೇಳೆ ಸಿಕ್ಕ 466 ಗ್ರಾಂ ಚಿನ್ನವನ್ನು ಸರ್ಕಾರಕ್ಕೆ ಹಸ್ತಾಂತರಿಸಿದ್ದು, ಇದು ರಾಜ್ಯದ ಗಮನ ಸೆಳೆದಿತ್ತು.

ಸರ್ಕಾರ ಆ ಕುಟುಂಬಕ್ಕೆ ರೂ.5 ಲಕ್ಷ ನಗದು ಬಹುಮಾನ, 30×40 ಅಡಿಗಳ ನಿವೇಶನ ಮತ್ತು ಒಂದು ಸರ್ಕಾರಿ ಉದ್ಯೋಗವನ್ನು ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿದ್ಯಾರ್ಥಿಯ ಪ್ರಾಮಾಣಿಕತೆಯನ್ನು ಶ್ಲಾಘಿಸಿದ್ದಾರೆ.

ಪ್ರಸ್ತುತ ಲಕ್ಕುಂಡಿಯಲ್ಲಿ 16 ಸ್ಮಾರಕಗಳು ರಾಜ್ಯ ಸಂರಕ್ಷಿತ ಸ್ಮಾರಕಗಳಾಗಿ ಘೋಷಿತವಾಗಿವೆ. ಫೆಬ್ರವರಿ ಅಂತ್ಯದೊಳಗೆ ಇನ್ನೂ 8 ದೇವಾಲಯಗಳನ್ನು ಸಂರಕ್ಷಿತ ಸ್ಮಾರಕಗಳಾಗಿ ಘೋಷಿಸುವ ಯೋಜನೆ ಇದೆ.

ಇನ್ನೂ 20 ದೇವಾಲಯಗಳು ಮತ್ತು ಬಾವಿಗಳು ರಾಜ್ಯ ಸರ್ಕಾರದ ಮೇಲ್ವಿಚಾರಣೆಗೆ ಬರಲಿದ್ದು, ಅಭಿವೃದ್ಧಿಗೆ ಹೆಚ್ಚುವರಿ ಅನುದಾನ ಬಿಡುಗಡೆಯಾಗಲಿದೆ.

ಯುನೆಸ್ಕೋ ಸ್ಥಾನಮಾನ ದೊರೆತರೆ ಲಕ್ಕುಂಡಿ ಹಂಪಿ ನಂತರದ ಪ್ರಮುಖ ಪುರಾತತ್ವ ಪ್ರವಾಸಿ ಕೇಂದ್ರವಾಗುವ ಸಾಧ್ಯತೆ ಇದೆ.

ಲಕ್ಕುಂಡಿ ಈ ಹಿಂದೆ ದೊಡ್ಡನಗರವಾಗಿತ್ತು. ಇಲ್ಲಿ ದೇವಾಲಯಗಳು ಮತ್ತು ಬಾವಿಗಳು ಇದ್ದವು ಎಂಬ ನಂಬಿಕೆ ಇದೆ. ಲಕ್ಕುಂಡಿ ಹೊರಭಾಗದಲ್ಲಿ ಉತ್ಖನನ ಕಾರ್ಯ ನಡೆಸಿದರೆ ಇನ್ನಷ್ಟು ಅವಶೇಷಗಳು ಸಿಗಬಹುದು. ನಮ್ಮ ಗ್ರಾಮದಲ್ಲಿ ಮತ್ತೆ ದೇವಾಲಯಗಳು ಕಾಣಿಸಿಕೊಳ್ಳಲಿ ಎಂಬುದು ನಮ್ಮ ಆಸೆ ಎಂದು ಲಕ್ಕುಂಡಿಯ ನಿವಾಸಿ ಬಸವರಾಜ ಗರ್ಜಪ್ಪನವರ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತೀವ್ರ ಕುತೂಹಲ ಘಟ್ಟಕ್ಕೆ ತಲುಪಿದ ಪಶ್ಚಿಮ ಏಷ್ಯಾ ಸಂಘರ್ಷ: ಇಂದು ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ಇರಾನ್-ಅಮೆರಿಕ ನಡುವೆ ಸಂಧಾನ ಮಾತುಕತೆ-Video

5 ದಶಕಗಳ ಬಳಿಕ ದಾಖಲೆ ನಿರ್ಮಿಸಿದ ಚಂದ್ರಯಾನ: ಯಶಸ್ವಿಯಾಗಿ ಭೂಮಿಗೆ ಮರಳಿದ Artemis II ಗಗನ ಯಾತ್ರಿಗಳು-Video

'ಹಸಿರು ಲ್ಯಾಂಬೊರ್ಗಿನಿ ಕಾರಲ್ಲಿ ಹೋಗಿ, ರಸ್ತೆ ಕಸ ಗುಡಿಸಿ ಬನ್ನಿ': ಸಂಚಾರ ನಿಯಮ ಉಲ್ಲಂಘಿಸಿ ದರ್ಪ ತೋರಿದ ಚಾಲಕನಿಗೆ ಹೈಕೋರ್ಟ್‌ ಶಿಕ್ಷೆ!

ಉಪಚುನಾವಣೆ ಗೆಲ್ಲುವ ಉಮೇದು: ಪ್ರಚಾರದಲ್ಲಿ ನಿರತರಾದ ಸಿಎಂ -ಡಿಸಿಎಂ; ನಿಯಂತ್ರಣ ಕಳೆದುಕೊಂಡ ಆಡಳಿತ ಯಂತ್ರ!

'ನನ್ನ ಹಣೆಬರಹ ಎಲ್ಲಿದೆಯೋ, ಜನ ಎಲ್ಲಿ ಗೆಲ್ಲಿಸ್ತಾರೋ ನೋಡೋಣ: ನಮ್ಮ ಸಂಖ್ಯೆ ನೋಡಿ ಅಪಹಾಸ್ಯ ಮಾಡಿದ್ದಾರೆ, 2028 ರಲ್ಲಿ ಸರ್ಕಾರ ರಚಿಸ್ತಿವಿ'

SCROLL FOR NEXT