ಬೆಂಗಳೂರು: ಅನ್ನ ನೀಡಿದ ಕಂಪನಿಯಲ್ಲಿಯೇ 91.76 ಲಕ್ಷ ರೂಪಾಯಿ ಹಣವನ್ನು ಕಳ್ಳತನ ಮಾಡಿದ ಖದೀಮ ಉದ್ಯೋಗಿ ಹಾಗೂ ಆತನ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ.
ಕಂಪನಿಯಲ್ಲಿ ಕ್ಯಾಷಿಯರ್ ಆಗಿದ್ದ ಬೆಂಗಳೂರಿನ ಆರ್ಟಿ ನಗರದ ನಿವಾಸಿ ಧನಂಜಯ್ (28) ಮತ್ತು ಆತನ ಸ್ನೇಹಿತನಾದ ಶಿವಮೊಗ್ಗ ಜಿಲ್ಲೆಯ ಮಲವಗೊಪ್ಪ ಮೂಲದ ಪ್ರವೀಣ್ (29) ಬಂಧಿತ ಆರೋಪಿಯಾಗಿದ್ದಾರೆ. ಬಂಧಿತರಿಂದ 81. 66 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಫೆ. 20ರಂದು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಿಇಎಲ್ ರಸ್ತೆಯಲ್ಲಿರುವ ಖಾಸಗಿ ಕಂಪನಿಯೊಂದರಲ್ಲಿ ಕಳ್ಳತನ ಆಗಿತ್ತು.
ಫೆಬ್ರವರಿ 19 ರ ರಾತ್ರಿ ಮುಖ್ಯ ಬಾಗಿಲಿಗೆ ಬೀಗ ಹಾಕಿ ಕಚೇರಿಯಿಂದ ತೆರಳಿದ್ದೆ. ಮರುದಿನ ಬೆಳಗ್ಗೆ ಕಚೇರಿಯ ಗಾಜು ಒಡೆದಿರುವುದನ್ನು ಅಕ್ಕಪಕ್ಕದ ಅಂಗಡಿ ಸಿಬ್ಬಂದಿ ದೂರವಾಣಿ ಮೂಲಕ ತಿಳಿಸಿದರು. ಕಚೇರಿಗೆ ತೆರಳಿ ಪರಿಶೀಲಿಸಿದಾಗ ಡ್ರಾಯರ್ನಲ್ಲಿಟ್ಟಿದ್ದ 1.76 ಕೋಟಿ ರೂ.ಗಳಲ್ಲಿ 91.76 ಲಕ್ಷ ರೂ.ಗಳನ್ನು ಅಪರಿಚಿತ ವ್ಯಕ್ತಿಗಳು ಕದ್ದೊಯ್ದಿರುವುದು ಪತ್ತೆಯಾಗಿದೆ ಎಂದು ಕಂಪನಿ ಮಾಲೀಕರು ದೂರಿನಲ್ಲಿ ಆರೋಪಿಸಿದ್ದರು.
ತನಿಖೆಯ ನಂತರ, ಆರೋಪಿಗಳಲ್ಲಿ ಒಬ್ಬನಾದ ಪ್ರವೀಣ್ನನ್ನು ಶಿವಮೊಗ್ಗದಲ್ಲಿ ಅಪರಾಧ ಮಾಡಲು ಬಳಸಿದ ಕಾರಿನೊಂದಿಗೆ ಬಂಧಿಸಲಾಯಿತು. ವಿಚಾರಣೆ ವೇಳೆ ಆತ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದು, ದೂರುದಾರರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮತ್ತೋರ್ವ ವ್ಯಕ್ತಿ ಕಳ್ಳತನಕ್ಕೆ ಸಹಕರಿಸಿದ ಬಗ್ಗೆ ಮಾಹಿತಿ ನೀಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಕಚೇರಿಯಲ್ಲಿಟ್ಟಿದ್ದ ಹಣವನ್ನು ಕದ್ದಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ತಲೆಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳ ಪತ್ತೆಗೆ ಪ್ರಯತ್ನ ಮುಂದುವರಿದಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.