ಬೆಂಗಳೂರು: ಯಲಹಂಕದ ಕೋಗಿಲು ಬಡಾವಣೆಯಲ್ಲಿ ಮನೆಗಳ ಧ್ವಂಸ ಮಾಡಿ ನಿರಾಶ್ರಿತರಾದವರಿಗೆ ಹೊಸ ವರ್ಷಕ್ಕೆ ರಾಜ್ಯ ಸರ್ಕಾರ ಫ್ಲ್ಟಾಟ್ ಹಂಚಿಕೆ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ಬಂಡೆ ಹೊಸೂರಿನ ಬೈಯಪ್ಪನಹಳ್ಳಿಯಲ್ಲಿರೋ ಅಪಾರ್ಟ್ಮೆಂಟ್ನಲ್ಲಿ ಮನೆ ನೀಡಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ. 1 ಸಾವಿರಕ್ಕೂ ಹೆಚ್ಚು 1 BHK ಫ್ಲ್ಯಾಟ್ಗಳು ಈ ಅಪಾರ್ಟ್ಮೆಂಟ್ನಲ್ಲಿವೆ. ಇಲ್ಲಿ ಮನೆಗಳ ಹಂಚಿಕೆಯಾಗಲಿವೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿರಾಶ್ರಿತರು, ಸರ್ಕಾರ ವಿರುದ್ಧ ಟೀಕೆ
ಸರ್ಕಾರ ಕೋಗಿಲು ನಿವಾಸಿಗಳಿಗೆ ಸೂರು ಕಲ್ಪಿಸಿಕೊಡುತ್ತಿದ್ದು, ಮನೆ ಕಳೆದುಕೊಂಡು ದಶಕಗಳೇ ಉರುಳಿದರೂ ರಾಜ್ಯದ ಅನೇಕ ಕಡೆಗಳಲ್ಲಿ ಅರ್ಹ ಸಂತ್ರಸ್ತರತ್ತ ಸರ್ಕಾರ ಗಮನ ಹರಿಸಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಲಿಂಗನಮಕ್ಕಿ ಜಲಾಶಯಕ್ಕಾಗಿ ಭೂಮಿ ಕಳೆದುಕೊಂಡವರಿಗೆ 65 ವರ್ಷದಿಂದ ಹಕ್ಕುಪತ್ರ ನೀಡಿಲ್ಲ.
ಬೆಳಗಾವಿ ನೆರೆ ಸಂತ್ರಸ್ತರ ಗೋಳನ್ನೂ ಹೇಳುವವರಿಲ್ಲ. ಎರಡು ವರ್ಷಗಳಿಂದ 500 ಕುಟುಂಬಗಳು ಬೀದಿಗೆ ಬಿದ್ದಿದ್ದರೂ ಸೂರೇ ಇಲ್ಲದ ಪರಿಸ್ಥತಿ ಉಂಟಾಗಿದೆ. ಹೀಗಿರುವಾಗ ರಾಜ್ಯ ಸರ್ಕಾರ ಕೋಗಿಲು ನಿವಾಸಿಗಳಿಗೆ ಇಷ್ಟು ಬೇಗನೆ ಫ್ಲ್ಯಾಟ್ ಗಳ ಹಂಚಿಕೆ ಮಾಡುತ್ತಿರುವುದಕ್ಕೆ ಸಮಾಜದ ಒಂದು ವರ್ಗದಿಂದ ತೀವ್ರ ಟೀಕೆ ವ್ಯಕ್ತವಾಗಿದೆ.
ಡಿಜೆ ಹಳ್ಳಿಯಲ್ಲಿ ರೈಲ್ವೆ ಇಲಾಖೆ ಜಾಗ ಎಂದು ಯಾವುದೇ ನೋಟೀಸ್ ಇಲ್ಲದೆ, ಸೂಚನೆ ಕೂಡಾ ಇಲ್ಲದೆ ಏಕಾಏಕಿ ಮನೆಗಳನ್ನು ನೆಲಸಮ ಮಾಡಲಾಗಿತ್ತು. 150 ವರ್ಷಗಳಿಂದ ವಾಸವಾಗಿದ್ದ 29 ಕುಟುಂಬಗಳ ಮನೆ ನೆಲಸಮ ಮಾಡಲಾಗಿತ್ತು.
ಕೆಜೆ ಹಳ್ಳಿಯ ಸರ್ವೆ ನಂಬರ್ 71 ರಲ್ಲಿ 1 ಎಕರೆ 37 ಗುಂಟೆ ಜಾಗದಲ್ಲಿ ಚೂನಾ ಲೈನ್ ಜನರಿಗಾಗಿ 1984 ರಲ್ಲಿ 1 ಎಕರೆ 28 ಗುಂಟೆ ಸರ್ಕಾರಿಂದಲೇ ನೀಡಿದ ಜಾಗ ಇದಾಗಿದೆ. ತದನಂತರ ಒಂಟಿ ಮನೆ ಯೋಜನೆಯಡಿಯಲ್ಲಿ 2015 ರಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರದಿಂದಲೇ ಮನೆ ಒಂಟಿ ಮನೆಗಳ ನಿರ್ಮಾಣ ಕೂಡಾ ಮಾಡಿಕೊಡಲಾಗಿತ್ತು.
ಸತ್ಯಶೋಧನೆಗೆ ಸಮಿತಿ ರಚನೆ
ಕೋಗಿಲು ಲೇಔಟ್ನಲ್ಲಿ ಬಿಜೆಪಿ ಸತ್ಯ ಶೋಧನೆಗೆ ಮುಂದಾಗಿದೆ. ಯಲಹಂಕ ಶಾಸಕ ವಿಶ್ವನಾಥ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಶಾಸಕ ಮುನಿರಾಜು, ಪರಿಷತ್ ಸದಸ್ಯ ನವೀನ್ ಸೇರಿ 7 ನಾಯಕರನ್ನು ಒಳಗೊಂಡ ಸತ್ಯಶೋಧನಾ ಸಮಿತಿ ರಚನೆ ಮಾಡಿರುವ ರಾಜ್ಯಾಧ್ಯಕ್ಷ ವಿಜಯೇಂದ್ರ, ಒಂದು ವಾರದಲ್ಲಿ ವರದಿ ನೀಡುವಂತೆ ಸೂಚಿಸಿದ್ದಾರೆ.
ಕೋಗಿಲು ಲೇಔಟ್ನಲ್ಲಿ ಅಕ್ರಮ ಜಾಗ ಒತ್ತುವರಿ ತೆರವು
ಇದೇ ಡಿಸೆಂಬರ್ 20ರಂದು ಬೆಂಗಳೂರಿನ ಉತ್ತರ ತಾಲೂಕಿನ ಯಲಹಂಕ ಬಳಿಯ ಕೋಗಿಲು ಲೇಔಟ್ನಲ್ಲಿ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಮನೆಗಳು ಮತ್ತು ಶೆಡ್ಗಳ ಒತ್ತುವರಿ ತೆರವು ಕಾರ್ಯಾಚರಣೆಯ ನಡೆಸಲಾಗಿತ್ತು. ಇದೇ ವಿವಾದಕ್ಕೆ ಕಾರಣವಾಗಿದ್ದು, ರಾಜಕೀಯ ತಿರುವು ಪಡೆದಿದೆ.