ಬೆಂಗಳೂರು: ರಾಜ್ಯ ವಿಧಾನಮಂಡಲದ ಅಧಿವೇಶನವನ್ನು ಫೆಬ್ರವರಿ 4 ರವರೆಗೆ, ಅಂದರೆ ಇನ್ನೂ ನಾಲ್ಕು ದಿನಗಳವರೆಗೆ ವಿಸ್ತರಿಸಲಾಗುವುದು ಎಂದು ಸ್ಪೀಕರ್ ಯು ಟಿ ಖಾದರ್ ಗುರುವಾರ ಪ್ರಕಟಿಸಿದ್ದಾರೆ.
ಜನವರಿ 22 ರಿಂದ ಪ್ರಾರಂಭವಾದ ವಿಶೇಷ ಜಂಟಿ ಅಧಿವೇಶನ ಜನವರಿ 31 ರಂದು ಮುಕ್ತಾಯಗೊಳ್ಳಬೇಕಿತ್ತು. ಆದರೆ ನಿನ್ನೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮನರೇಗಾ ಕಾಯ್ದೆ ಕುರಿತು ಸಮಗ್ರ ಚರ್ಚೆ ನಡೆಸಲು ಅಧಿವೇಶನವನ್ನು ವಿಸ್ತರಿಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಒಲವು ವ್ಯಕ್ತಪಡಿಸಿದ್ದರು.
"ಜನವರಿ 22 ರಿಂದ ಪ್ರಾರಂಭವಾದ ಒಂಬತ್ತನೇ ಅಧಿವೇಶನ ಜನವರಿ 31 ರ ಬದಲಿಗೆ ಫೆಬ್ರವರಿ 4 ರವರೆಗೆ ಮುಂದುವರಿಸಲು ಇಂದು ನಡೆದ ಸದನ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ" ಎಂದು ಯುಟಿ ಖಾದರ್ ತಿಳಿಸಿದ್ದಾರೆ.
ಗುರುವಾರ ಮತ್ತು ಜನವರಿ 30 ರಂದು ವಿಧಾನಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣದ ಕುರಿತು ಚರ್ಚೆ ನಡೆಯಲಿದೆ ಎಂದು ಸ್ಪೀಕರ್ ಹೇಳಿದ್ದಾರೆ.
ಜನವರಿ 31 ರಂದು ಅಧಿವೇಶನ ಇರುವುದಿಲ್ಲ. ಫೆಬ್ರವರಿ 2 ರಂದು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರಿಸಲಿದ್ದಾರೆ ಎಂದು ಖಾದರ್ ಸದನಕ್ಕೆ ತಿಳಿಸಿದರು.