ಬೆಂಗಳೂರು: ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ವರದಿ (ಸಿಎಜಿ) ಕೇಂದ್ರ ಸರ್ಕಾರದ ಪ್ರಮುಖ ಯೋಜನೆ ಸ್ಮಾರ್ಟ್ ಸಿಟಿ ಮಿಷನ್ ಯೋಜನೆ ಅಡಿಯಲ್ಲಿ ಕರ್ನಾಟಕದಲ್ಲಾಗಿರುವ ಗಂಭೀರ ಲೋಪಗಳನ್ನು ಬಹಿರಂಗಪಡಿಸಿದೆ.
ಬೆಂಗಳೂರು ಹೊರತುಪಡಿಸಿದ ಉಳಿದನಗರಗಳಲ್ಲಿ ಸ್ಮಾರ್ಟ್ ರಸ್ತೆ ನಿರ್ಮಾಣದಲ್ಲಿ ಅಗತ್ಯವಿರುವ ನೀರು ಸರಬರಾಜು, ಒಳಚರಂಡಿ ಸಂಪರ್ಕ, ಮಳೆನೀರಿನ ಚರಂಡಿಗಳು, ಆಪ್ಟಿಕಲ್ ಫೈಬರ್ ಕೇಬಲ್ಗಳು ಮತ್ತು ಗ್ಯಾಸ್ ಪೈಪ್ಲೈನ್ಗಳಂತಹ ಸೇನಾ ನಾಳಿಗಳನ್ನು ಸಮರ್ಪಕವಾಗಿ ಒದಗಿಸದಿರುವುದರಿಂದ ಆಗಾಗ್ಗೆ ರಸ್ತೆಗಳನ್ನು ಅಗೆಯಬೇಕಾಗಿದೆ. ಇದು ರಸ್ತೆಗಳ ದೀರ್ಘಕಾಲಿಕ ಆಯುಷ್ಯಕ್ಕೂ ಮತ್ತು ಸಾರ್ವಜನಿಕ ಪ್ರಯಾಣಕ್ಕೆ ಹಾನಿಕರ ಎಂದು ವರದಿ ಹೇಳಿದೆ.
ಬೆಂಗಳೂರು, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಶಿವಮೊಗ್ಗ ಮತ್ತು ತುಮಕೂರು ಏಳು ನಗರಗಳನ್ನು ಸ್ಮಾರ್ಟ್ ಸಿಟಿಗಳಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಗುರ್ತಿಸಿದೆ. ಪ್ರದೇಶ ಆಧಾರಿತ ಅಭಿವೃದ್ಧಿ (ಎಬಿಡಿ) ಮತ್ತು ಪ್ಯಾನ್-ಸಿಟಿ ಸೇರಿದಂತೆ ಎರಡು ಘಟಕಗಳ ಅಡಿಯಲ್ಲಿ ಯೋಜನೆಗಳನ್ನು ಕಾರ್ಯಗತಗೊಳಿಸಬೇಕಾಗಿತ್ತು.
ಪ್ರತಿಯೊಂದು ನಗರವು ತನ್ನ ಸ್ಮಾರ್ಟ್ ಸಿಟಿ ಪ್ರಸ್ತಾವನೆಯನ್ನು (ಎಸ್ಸಿಪಿ) ಸಿದ್ಧಪಡಿಸಬೇಕಾಗಿತ್ತು, ಇದರಲ್ಲಿ ದೃಷ್ಟಿಕೋನ, ಸಂಪನ್ಮೂಲಗಳನ್ನು ಸಜ್ಜುಗೊಳಿಸುವ ಯೋಜನೆ ಮತ್ತು ಮೂಲಸೌಕರ್ಯ ನವೀಕರಣಗಳು ಮತ್ತು ಸ್ಮಾರ್ಟ್ ಅಪ್ಲಿಕೇಶನ್ಗಳ ವಿಷಯದಲ್ಲಿ ಉದ್ದೇಶಿತ ಫಲಿತಾಂಶಗಳು ಸೇರಿವೆ.
ನಿರೀಕ್ಷಿತ ಗುರಿ ಸಾಧಿಸುವಲ್ಲಿ ವಿಫಲ
ಸ್ಮಾರ್ಟ್ ಸಿಟಿ ಪ್ರಸ್ತಾವ (ಎಸ್ಸಿಪಿ)ಯಲ್ಲಿ ನಿರ್ದಿಷ್ಟಪಡಿಸಿದ 135 ಗುರಿ ಪೈಕಿ ಈ ನಗರಗಳು 68 ಗುರಿಗಳನ್ನು ಸಾಧಿಸಿದ್ದು, ಭಾಗಶಃ 43 ಮತ್ತು 24 ಗುರಿಗಳನ್ನು ಸಾಧಿಸಿಲ್ಲ ಎಂದು ವರದಿ ತಿಳಿಸಿವೆ.
ವೆಚ್ಚ-ಸ್ಥಳದ ಕೊರತೆಯಿಂದ ಯೋಜನೆ ರದ್ದು
544 ಯೋಜನೆಗಳ ಪೈಕಿ 160 (30%) ಯೋಜನೆಗಳನ್ನು ಈ ನಗರಗಳು ಕೈಬಿಟ್ಟಿವೆ. ಬಹು ಉಪಯೋಗ ಬಸ್ ಟರ್ಮಿನಲ್, ಫ್ಲೈಓವರ್, ಪಿಯು ಕಾಲೇಜುಗಳಲ್ಲಿ ಸ್ಮಾರ್ಟ್ ಕ್ಲಾಸ್ ವಿಸ್ತರಣೆ, ಸುರಂಗ ಮಾರ್ಗ ನಿರ್ಮಾಣದಂತಹ ಯೋಜನೆಗಳನ್ನು ಹೆಚ್ಚಿನ ವೆಚ್ಚ ಮತ್ತು ಸ್ಥಳದ ಕೊರತೆಯ ಕಾರಣದಿಂದ ರದ್ದು ಮಾಡಲಾಗಿದೆ.
ಅನುದಾನ ವಿನಿಯೋಗ
ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಶಿವಮೊಗ್ಗ ಮತ್ತು ತುಮಕೂರು ನಗರಗಳಲ್ಲಿ 2015–16ರಿಂದ ಸ್ಮಾರ್ಟ್ಸಿಟಿ ಯೋಜನೆಗಾಗಿ 817 ಕೋಟಿ ರೂ. ಅನುದಾನ ಮೀಸಲಿಡಲಾಗಿತ್ತು. ಆದರೆ, 1,462 ಕೋಟಿ ರೂ. ಮೊತ್ತದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಮಾದರಿಯಾಗಿ ಆಯ್ಕೆ ಮಾಡಲಾದ ನಾಲ್ಕು ವಿಶೇಷ ಘಟಕಗಳಿಗೆ ರೂ.200 ಕೋಟಿ ನಿಗದಿ ಮಾಡಿದ್ದರೂ ನೈಜ ಬಂಡವಾಳ 10 ಲಕ್ಷ ರೂ.ಇತ್ತು. ಇತರೆ ಕಾಮಗಾರಿಗಳೂ ಸರ್ಕಾರದ ಮೇಲೆ ಅವಲಂಬಿತವಾದವು. ಹಾಗಾಗಿ 645 ಯೋಜನೆಗಳಲ್ಲಿ 45 ಯೋಜನೆಗಳಷ್ಟೇ ನಿಗದಿತ ಅವಧಿಯ ಒಳಗೆ ಪೂರ್ಣಗೊಂಡಿವೆ. ರೂ.186.79 ಕೋಟಿ ಮೊತ್ತದ ಯೋಜನೆಗಳು ನಿರ್ದಿಷ್ಟಪಡಿಸಿದ ಗುರಿಗಳೊಂದಿಗೆ ಹೊಂದಿಕೆಯಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಶಿಫಾರಸುಗಳು...
ಸ್ಮಾರ್ಟ್ ನಗರಗಳು ಕೈಗೊಂಡಿರುವ ಯೋಜನೆಗಳು ದೀರ್ಘಕಾಲ ಉಳಿಯಲು ಸರ್ಕಾರದ ಅನುದಾನ ಹೊರತಾದ ಸಂಪನ್ಮೂಲಗಳನ್ನು ಬಳಕೆ ಮಾಡಬೇಕು.
ಪೂರ್ಣಾವಧಿಯ ಸಿಇಒಗಳನ್ನು ನೇಮಕ ಮಾಡಬೇಕು. ಟೆಂಡರ್ ಪ್ರಕ್ರಿಯೆ ವಿಳಂಬ ತಪ್ಪಿಸಬೇಕು. ತಂತ್ರಜ್ಞಾನ ಬಳಕೆಯಲ್ಲಿ ಎಚ್ಚರ ವಹಿಸಬೇಕು,
ತಜ್ಞರ ಶಿಫಾರಸುಗಳನ್ನು ಪಾಲಿಸಬೇಕು. ಅಗತ್ಯ ಕಾಮಗಾರಿಗಳ ಮೇಲ್ವಿಚರಣೆಯಲ್ಲಿ ಸ್ಥಳೀಯ ಸಂಸ್ಥೆಗಳ ಪ್ರಾತಿನಿಧ್ಯ ಇರಬೇಕು.
ಗುಣಮಟ್ಟ ಪರಿಶೀಲನೆಗೆ ಮೇಲ್ವಿಚಾರಣಾ ಸಲಹೆಗಾರರನ್ನು ರಾಜ್ಯ ಸರ್ಕಾರ ನೇಮಿಸಬೇಕು. ಸ್ಥಳೀಯ ಅಗತ್ಯಕ್ಕೆ ತಕ್ಕಂತೆ ಕೆಲ ಮಾರ್ಪಾಡು ಮಾಡಲು ಅವಕಾಶ ನೀಡಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.