ಅಂತರರಾಷ್ಟ್ರೀಯ ವಾಣಿಜ್ಯ ಮೇಳ - 2026ರ ಪೂರ್ವಭಾವಿಯಾಗಿ ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಲಾದ ಸಾಂಪ್ರದಾಯಿಕ ಆಹಾರ ಮೇಳ ಮತ್ತು ಸ್ಪರ್ಧೆ – ಸಂಸ್ಕೃತಿ ಸ್ವಾದ ಕಾರ್ಯಕ್ರಮ 
ರಾಜ್ಯ

ಮಕ್ಕಳಿಗೆ ಆರೋಗ್ಯಕರ ಆಹಾರ ಸೇವನೆ ಮತ್ತು ಕೃಷಿಯಲ್ಲಿ ಆಸಕ್ತಿ ಹೆಚ್ಚಿಸಿ: ಸಚಿವ ಎನ್ ಚಲುವರಾಯಸ್ವಾಮಿ

ಇಂದಿನ ಮಕ್ಕಳಿಗೆ ಪೌಷ್ಟಿಕ ಆಹಾರ ಬೆಳೆಗಳ ಪರಿಚಯ ನೀಡುವ ಅಗತ್ಯವನ್ನು, ವಿಶೇಷವಾಗಿ ಸಿರಿಧಾನ್ಯಗಳ ಮಹತ್ವವನ್ನು ಮತ್ತು ಬೆಳೆಯಿಂದ ಊಟದ ತಟ್ಟೆಯವರೆಗೆ ಸಂಪೂರ್ಣ ಪಯಣವನ್ನು ತಿಳಿಸುವುದು ಮುಖ್ಯ ಎಂದು ಹೇಳಿದರು.

ಬೆಂಗಳೂರು: ಆಹಾರದಲ್ಲಿ ಪೌಷ್ಟಿಕತೆ ಮತ್ತು ಕೃಷಿಗೆ ಸಮಗ್ರ ದೃಷ್ಟಿಕೋನವನ್ನು ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದ್ದು, ಮಕ್ಕಳು, ರೈತರು, ವಿಶ್ವವಿದ್ಯಾಲಯಗಳು ಹಾಗೂ ಮಾರುಕಟ್ಟೆ ಉಪಕ್ರಮಗಳನ್ನು ಒಂದೇ ವೇದಿಕೆಯಲ್ಲಿ ಜೋಡಿಸುವ ಮೂಲಕ ಶಿಕ್ಷಣ, ನಾವೀನ್ಯತೆ ಮತ್ತು ಸ್ಥಿರ ಆರ್ಥಿಕ ಬೆಳವಣಿಗೆಯನ್ನು ಒಗ್ಗೂಡಿಸಿದ ಮಾದರಿಯನ್ನು ರೂಪಿಸುತ್ತಿದೆ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಬೆಂಗಳೂರಿನ ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯ(Kristu Jayanti Deemed to be University ) ಸಹಯೋಗದಲ್ಲಿ ಆಯೋಜಿಸಲಾದ ಸಾಂಪ್ರದಾಯಿಕ ಆಹಾರ ಮೇಳ ಮತ್ತು ಸ್ಪರ್ಧೆ – ಸಂಸ್ಕೃತಿ ಸ್ವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಮಕ್ಕಳಿಗೆ ಪೌಷ್ಟಿಕ ಆಹಾರ ಬೆಳೆಗಳ ಪರಿಚಯ ನೀಡುವ ಅಗತ್ಯವನ್ನು, ವಿಶೇಷವಾಗಿ ಸಿರಿಧಾನ್ಯಗಳ ಮಹತ್ವವನ್ನು ಮತ್ತು ಬೆಳೆಯಿಂದ ಊಟದ ತಟ್ಟೆಯವರೆಗೆ ಸಂಪೂರ್ಣ ಪಯಣವನ್ನು ತಿಳಿಸುವುದು ಮುಖ್ಯ ಎಂದು ಹೇಳಿದರು.

“ಕೃಷಿ, ಪೌಷ್ಠಿಕ ಆಹಾರ ಬೆಳೆಗಳು ಮತ್ತು ಅವುಗಳ ಸೇವನೆ ಬಗ್ಗೆ ಆಸಕ್ತಿ ಮಕ್ಕಳಿಂದಲೇ ಆರಂಭವಾಗುತ್ತದೆ. ಮಕ್ಕಳು ಪೌಷ್ಟಿಕ ಆಹಾರದ ಮಹತ್ವವನ್ನು ಅರಿತುಕೊಂಡಾಗ, ಅವರು ತಮ್ಮ ಕುಟುಂಬ ಮತ್ತು ಸಮುದಾಯವನ್ನು ಪ್ರಭಾವಿತಗೊಳಿಸಬಲ್ಲರು. ಅವರು ಆರೋಗ್ಯಕರ ಜೀವನಶೈಲಿಯ ರಾಯಭಾರಿಗಳಾಗುತ್ತಾರೆ. ಮಕ್ಕಳು ಆಹಾರದ ರುಚಿಯಷ್ಟೇ ಅಲ್ಲ, ಅದರ ಮೌಲ್ಯವನ್ನೂ ಅರಿಯಬೇಕು ಎಂದು ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಅಧಿಕಾರಿಗಳನ್ನುದ್ದೇಶಿಸಿ ಹೇಳಿದರು.

ಸಿರಿಧಾನ್ಯಗಳನ್ನು ಬೆಳೆಯುವುದರಿಂದ ಹಿಡಿದು ಅವುಗಳನ್ನು ಸಂಸ್ಕರಣೆ, ಬ್ರಾಂಡಿಂಗ್ ಮತ್ತು ಮಾರುಕಟ್ಟೆಗೆ ತಲುಪಿಸುವವರೆಗೂ ಪ್ರತಿಯೊಂದು ಹಂತವೂ ಸೂಕ್ತವಾಗಿ ನಿರ್ವಹಿಸಬೇಕು. ಸರಿಯಾದ ಬ್ರಾಂಡಿಂಗ್ ಮಾಡಿದ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತದೆ, ಇದರಿಂದ ರೈತರಿಗೆ ಹೆಚ್ಚಿನ ಆದಾಯ ದೊರೆಯುತ್ತದೆ ಎಂದು ಹೇಳಿದರು.

ನಾವು ಕೇವಲ ಬೆಳೆ ಬೆಳಸಿ ನೇರವಾಗಿ ಮಾರುಕಟ್ಟೆಗೆ ಕೊಂಡೊಯ್ಯುವುದರಿಂದ ರೈತರಿಗೆ ಸಿಗುವ ಲಾಭ ಸೀಮಿತವಾಗುತ್ತದೆ. ಮೌಲ್ಯವರ್ಧನೆಯ ಮೂಲಕ ರೈತರಿಗೆ ಹೆಚ್ಚು ಬೆಲೆ ಸಿಗುವ ಅವಕಾಶ ಸಿಗುತ್ತದೆ. ಜೊತೆಗೆ ಗ್ರಾಹಕರಿಗೂ ಪೌಷ್ಟಿಕ ಹಾಗೂ ಗುಣಮಟ್ಟದ ಆಹಾರ ದೊರೆಯುತ್ತದೆ ಎಂದರು.

ಕೋವಿಡ್-19 ಮಹಾಮಾರಿಯಿಂದ ಕಲಿತ ಪಾಠವೇನೆಂದು ಸಚಿವರು ಹೇಳಿದರು. ಕೋವಿಡ್ ಮಹಾಮಾರಿಯ ಸಮಯದಲ್ಲಿ ಆಹಾರದ ಕೊರತೆ ಎದುರಾದಾಗ, ಬೆಳೆಗಳನ್ನು ಪರಿಣಾಮಕಾರಿಯಾಗಿ ಬೆಳೆಯುವುದು ಮತ್ತು ಸರಿಯಾದ ವಿತರಣೆಯ ಅಗತ್ಯ ಎಷ್ಟು ಮಹತ್ವದ್ದೆಂಬುದು ನಮಗೆಲ್ಲಾ ಗೊತ್ತಾಯಿತು ಎಂದರು.

ರೈತರು ಆರ್ಥಿಕ ಸವಾಲುಗಳನ್ನು ಎದುರಿಸುತ್ತಾರೆ. ಸರ್ಕಾರವು ವಿಶ್ವವಿದ್ಯಾಲಯಗಳು ಮತ್ತು ರೈತರೊಂದಿಗೆ ಕೈಜೋಡಿಸಿ ಈ ಅಂತರವನ್ನು ಕಡಿಮೆ ಮಾಡಲು ಕಾರ್ಯನಿರ್ವಹಿಸುತ್ತಿದೆ. ಕೃಷಿ, ಶಿಕ್ಷಣ ಮತ್ತು ಮಾರುಕಟ್ಟೆ ನಡುವಿನ ಬಲವಾದ ಸಂಪರ್ಕದಿಂದ ನಮ್ಮ ಆಹಾರ ವ್ಯವಸ್ಥೆ ಸ್ಥಿರವಾಗುತ್ತದೆ, ರೈತರಿಗೆ ಬೆಂಬಲ ಸಿಗುತ್ತದೆ ಮತ್ತು ಮಕ್ಕಳು ಪೌಷ್ಟಿಕತೆಯ ಮಹತ್ವವನ್ನು ಅರಿತು ಬೆಳೆಯುತ್ತಾರೆ ಎಂದರು

ಪ್ರಾಯೋಗಿಕ ಕಲಿಕೆ ಅತ್ಯಗತ್ಯ

ಇಂದು ಮಕ್ಕಳಿಗೆ ಪ್ರಾಯೋಗಿಕವಾಗಿ ಕಲಿಕೆ ಅಗತ್ಯ. ಇದರಿಂದ ಮಕ್ಕಳು ಆರೋಗ್ಯಕರವಾಗಿರುವ ಜೊತೆಗೆ ಸ್ಥಳೀಯ ಕೃಷಿಗೆ ಸಹಕಾರ ನೀಡುವ ವಿಧಾನವನ್ನು ತಿಳಿದುಕೊಳ್ಳುತ್ತಾರೆ. ಬೆಳೆಗಳು ಹೇಗೆ ಬೆಳೆಯುತ್ತವೆ, ಸಂಸ್ಕರಿಸಲಾಗುತ್ತವೆ ಮತ್ತು ಮಾರುಕಟ್ಟೆಗೆ ತಲುಪುತ್ತವೆ ಎಂಬುದನ್ನು ಅರಿತುಕೊಂಡಾಗ ಅವರ ಜ್ಞಾನವು ಕುಟುಂಬ ಮತ್ತು ಭವಿಷ್ಯದ ಸಮುದಾಯವನ್ನು ಪ್ರಭಾವಿಸುತ್ತದೆ ಎಂದರು.

ಮೇಳದಲ್ಲಿ ವಿದ್ಯಾರ್ಥಿಗಳು ಹಾಗೂ ರೈತರ ಉದ್ಯಮಶೀಲತೆಯನ್ನೂ ಪ್ರದರ್ಶಿಸಲಾಯಿತು. ಸಾಂಪ್ರದಾಯಿಕ ಬೆಳೆಗಳಿಂದ ತಯಾರಿಸಿದ ಮೌಲ್ಯವರ್ಧಿತ ಉತ್ಪನ್ನಗಳು ನವೀನತೆ ಮತ್ತು ಪರಂಪರೆಯ ಸಂಯೋಜನೆಯನ್ನು ತೋರಿಸಿವೆ.

ಸ್ಥಳೀಯ ಪರಂಪರೆ ಬೆಳೆಗಳನ್ನು ಉತ್ತೇಜಿಸುತ್ತಾ ವಿದ್ಯಾರ್ಥಿಗಳು ಮತ್ತು ಯುವ ಉದ್ಯಮಿಗಳು ನಾವೀನ್ಯತೆ ತರುವಂತೆ ಪ್ರೋತ್ಸಾಹಿಸುವುದು ನಮ್ಮ ಗುರಿ, ಕೃಷಿಯ ಸಂಪೂರ್ಣ ವ್ಯವಸ್ಥೆಯನ್ನು ಮಕ್ಕಳು ಮತ್ತು ಯುವ ಸಮುದಾಯ ಅರಿತುಕೊಂಡರೆ, ಅವರು ಬದಲಾವಣೆಯ ಏಜೆಂಟರಾಗಬಹುದು ಎಂದು ಕೃಷಿ ಸಚಿವರು ವಿವರಿಸಿದರು.

ಮಕ್ಕಳು ಪಡೆದ ಜ್ಞಾನವನ್ನು ಕುಟುಂಬ ಮತ್ತು ಸಮುದಾಯದಲ್ಲಿ ಹಂಚಿಕೊಳ್ಳಬೇಕು. ಮಕ್ಕಳಿಗೆ ಪೌಷ್ಟಿಕತೆ, ಕೃಷಿ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ಸಂಪೂರ್ಣ ಮಾಹಿತಿ ದೊರೆಯಬೇಕು. ಕುಟುಂಬಗಳು ಇದನ್ನು ಸ್ನೇಹಿತರು, ನೆರೆಹೊರೆಯವರು ಮತ್ತು ಸಂಬಂಧಿಕರಿಗೆ ಹಂಚಬೇಕು. ಜಾಗೃತಿ ಬೆಳೆ ಬೆಳೆಯುವುದರಷ್ಟೇ ಮಹತ್ವದ್ದು ಎಂದು ಹೇಳಿದರು.

ಶಿಕ್ಷಣ, ನಾವೀನ್ಯತೆ ಮತ್ತು ಮಾರುಕಟ್ಟೆ ಕ್ಷೇತ್ರಗಳಲ್ಲಿ ನಿರಂತರ ಪ್ರಯತ್ನಗಳು ಆರೋಗ್ಯ ಮತ್ತು ಪೌಷ್ಟಿಕತೆಯನ್ನು ಸುಧಾರಿಸಲು, ರೈತರಿಗೆ ಆರ್ಥಿಕ ಬೆಂಬಲ ನೀಡಲು ಮತ್ತು ನಮ್ಮ ಕೃಷಿ ವ್ಯವಸ್ಥೆಯನ್ನು ಬಲಪಡಿಸಲು ಅಗತ್ಯ. ಇಲ್ಲಿ ಎಲ್ಲರ ಪಾತ್ರವೂ ಇದೆ. ಒಟ್ಟಾಗಿ ನಾವು ಬೆಳೆಗಳು ಜನರಿಗೆ ಪರಿಣಾಮಕಾರಿಯಾಗಿ ತಲುಪುವಂತೆ, ರೈತರಿಗೆ ನ್ಯಾಯಸಮ್ಮತ ಆದಾಯ ಸಿಗುವಂತೆ ಮತ್ತು ಮಕ್ಕಳು ಬಾಲ್ಯದಿಂದಲೇ ಪೌಷ್ಟಿಕತೆಯ ಮಹತ್ವ ಅರಿಯುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಹಾ ನೂತನ DCM ಸುನೇತ್ರಾ ಪವಾರ್‌ಗೆ ಕಂದಾಯ ಸೇರಿ ಮೂರು ಖಾತೆ ಹಂಚಿಕೆ; ಕೈತಪ್ಪಿದ ಹಣಕಾಸು

ನಂ. 1 ಆಟಗಾರ್ತಿ ಅರಿನಾ ಮಣಿಸಿದ ಎಲೆನಾ ರೈಬಾಕಿನಾ ಮುಡಿಗೆ Australian Open ಕಿರೀಟ

'ಮನ ಮೆಚ್ಚಿದ ಅಪ್ಪ': ಮಗನ ಜೀವ ಉಳಿಸಲು ಜೀವನ್ಮರಣ ಹೋರಾಟ, ಚಿರತೆಯನ್ನು ಬಡಿದು ಕೊಂದ ತಂದೆ

"ನಾವು ಭಿಕ್ಷೆ ಬೇಡುತ್ತೇವೆ, ನಾಚಿಕೆಯಿಂದ ತಲೆ ಬಾಗುತ್ತೇವೆ": ಪಾಕ್ ಪ್ರಧಾನಿ

'ಅಮ್ಮನ ಜೊತೆ ಮಾತಾಡಬೇಕು ಎಂದಿದ್ದರು': ಉದ್ಯಮಿ ಸಿಜೆ ರಾಯ್ ಅಂತಿಮ ಕ್ಷಣದ ಕುರಿತು MD ಮಾತು!

SCROLL FOR NEXT