ಉಡುಪಿ: ಬ್ರಹ್ಮಾವರ ತಾಲೂಕಿನ ಕೋಡಿಬೆಂಗ್ರೆಯಲ್ಲಿ ದೋಣಿ ಮುಳುಗಿ ಮೂವರು ಯುವಕರು ಸಾವನ್ನಪ್ಪಿದ ದುರಂತ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಉಡುಪಿಯ ಬ್ರಹ್ಮಾವರ ತಾಲೂಕಿನ ಕೋಡಿ ಗ್ರಾಮದ ಸುಹಾಸ್ ಶ್ರೀಯಾನ್ (23), ಸುಫಿಯಾನ್ (20) ಮತ್ತು ವಾಸು ಮೆಂಡನ್(52) ಎಂದು ಗುರುತಿಸಲಾಗಿದೆ.
ನಿರ್ಲಕ್ಷ್ಯ ಮತ್ತು ಸುರಕ್ಷತಾ ನಿಯಮಗಳ ಉಲ್ಲಂಘನೆಯಿಂದಾಗಿ ಪ್ರವಾಸಿ ದೋಣಿ ಪಲ್ಟಿಯಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಜನವರಿ 26 ರಂದು ಬೆಳಗ್ಗೆ 10.45 ರ ಸುಮಾರಿಗೆ ದೂರುದಾರ ಮೈಸೂರಿನ ಜಿ ಗುರುಪ್ರಸಾದ್(34) ಮತ್ತು ಇತರ 28 ಜನ ಆರೋಪಿ ಸುಹಾಸ್ ಜೊತೆ ದೋಣಿ ವಿಹಾರಕ್ಕೆ ತೆರಳಿದ್ದರು. ಪ್ರವಾಸಿಗರನ್ನು ಎರಡು ಪ್ರತ್ಯೇಕ ದೋಣಿಗಳಲ್ಲಿ ಕಳುಹಿಸಲಾಗಿತ್ತು. ಒಂದು ದೋಣಿಯಲ್ಲಿ 14 ಜನ ಮತ್ತು ಇನ್ನೊಂದು ದೋಣಿಯಲ್ಲಿ 15 ಜನ ತೆರಳಿದ್ದರು.
ಬೆಳಗ್ಗೆ 11.15 ರ ಸುಮಾರಿಗೆ, ದೂರುದಾರ ಗುರು ಪ್ರಸಾದ್ ಮತ್ತು ಇತರರು ಸ್ವರ್ಣ ನದಿಯಲ್ಲಿ ದೋಣಿ ವಿಹಾರ ಮಾಡುತ್ತಿದ್ದಾಗ, 'ದಿ ವೇವ್ ರೈಡರ್' ಹೆಸರಿನ ದೋಣಿಯ ನಿರ್ವಾಹಕರಾದ ಸುಫಿಯಾನ್ ಮತ್ತು ವಾಸು ದೋಣಿಯನ್ನು ಇದ್ದಕ್ಕಿದ್ದಂತೆ ನಿರ್ಲಕ್ಷ್ಯದಿಂದ ಎಡಕ್ಕೆ ತಿರುಗಿಸಿದ್ದರಿಂದ ಅದು ಮಗುಚಿತು. ಪರಿಣಾನ ದೋಣಿಯಲ್ಲಿದ್ದ ಎಲ್ಲಾ 14 ಜನ ನೀರಿನಲ್ಲಿ ಬಿದ್ದರು.
ಘಟನೆಯಲ್ಲಿ, ಶಂಕರಪ್ಪ (27), ಸಿಂಧು ಪಿ (23) ಮತ್ತು ದಿಶಾ (26) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದರು, ಉಳಿದ ಪ್ರಯಾಣಿಕರನ್ನು ಕೂದಲೆಳೆ ಅಂತರದಲ್ಲಿ ಪಾರು ಮಾಡಿ ದಡಕ್ಕೆ ತರಲಾಯಿತು.
ಗುರು ಪ್ರಸಾದ್ ನೀಡಿದ ದೂರಿನ ಆಧಾರದ ಮೇಲೆ, ಮಲ್ಪೆ ಪೊಲೀಸರು ಬಿಎನ್ಎಸ್ನ ಸೆಕ್ಷನ್ 284, 125(ಎ) ಮತ್ತು 106 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತನಿಖೆಯ ಸಮಯದಲ್ಲಿ, ಆರೋಪಿಗಳು ಪ್ರವಾಸೋದ್ಯಮ ಇಲಾಖೆಯಿಂದ ಯಾವುದೇ ಪರವಾನಗಿ ಅಥವಾ ಅನುಮತಿ ಪಡೆಯದೆ ದೋಣಿ ವಿಹಾರ ಚಟುವಟಿಕೆಯನ್ನು ನಡೆಸುತ್ತಿರುವುದು ಮತ್ತು ಸುರಕ್ಷತಾ ನಿಯಮಗಳನ್ನು ಉಲ್ಲಂಘಸಿರುವುದು ಕಂಡುಬಂದಿದೆ ಎಂದು ಉಡುಪಿ ಎಸ್ಪಿ ಹರಿರಾಮ್ ಶಂಕರ್ ಅವರು ತಿಳಿಸಿದ್ದಾರೆ.