ಬೆಂಗಳೂರು: ಗಣಿ ಪ್ರದೇಶವನ್ನು ಹರಾಜು ಮೂಲಕ ಪಡೆದುಕೊಂಡ ಬಳಿಕ ನಿಗದಿತ ಕನಿಷ್ಠ ಅವಧಿಯೊಳಗೆ ಗಣಿಗಾರಿಕೆ ಆರಂಭಿಸುವ ಕುರಿತು ಸ್ಪಷ್ಟ ನಿಯಮ ರೂಪಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬುಧವಾರ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಪ್ರಸ್ತುತ ಗಣಿ ನೀತಿಯ ಜೊತೆಗೆ ಇತರ ರಾಜ್ಯಗಳ ಗಣಿ ನೀತಿ, ನಿಯಮಗಳು ಹಾಗೂ ಕಾನೂನುಗಳ ಸಮಗ್ರ ಅಧ್ಯಯನ ನಡೆಸಿ ಸೂಕ್ತ ನಿಯಮಾವಳಿ ರೂಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇದೇ ವೇಳೆ ಹರಾಜಿನ ಮೂಲಕ ಗಣಿ ಪ್ರದೇಶಗಳನ್ನು ಪಡೆದುಕೊಂಡು ವರ್ಷಗಳಾದರೂ ಗಣಿಗಾರಿಕೆ ಆರಂಭಿಸದವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದ ಅವರು, ರಾಜ್ಯದಲ್ಲಿ ಗಣಿಗಾರಿಕೆಗಾಗಿ ಭೂಮಿ ಪಡೆದಿರುವವರ ಸಂಖ್ಯೆ, ಪ್ರಸ್ತುತ ಅವರ ಸ್ಥಿತಿ, ಇನ್ನೂ ಗಣಿಗಾರಿಕೆ ಆರಂಭಿಸದವರ ಪಟ್ಟಿ, ಅದಕ್ಕೆ ಕಾರಣಗಳು, ಅರಣ್ಯ ಇಲಾಖೆಯಿಂದ ಅನುಮತಿ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆ ಹಾಗೂ ವಿಳಂಬಕ್ಕೆ ಕಾರಣಗಳ ಕುರಿತು ಸಮಗ್ರ ವರದಿ ಸಿದ್ಧಪಡಿಸುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಇಲಾಖೆಯ ಆದಾಯ ಸಂಗ್ರಹದ ಮಾಹಿತಿ ಕೂಡ ಪರಿಶೀಲಿಸಲಾಯಿತು. 2025-26ನೇ ಸಾಲಿನಲ್ಲಿ ಇಲಾಖೆಗೆ ನಿಗದಿಪಡಿಸಿದ್ದ ಆದಾಯ ಗುರಿಯ ಶೇ.98ರಷ್ಟು ಸಾಧನೆಯಾಗಿದ್ದು, ಒಟ್ಟು ರೂ.8,845.39 ಕೋಟಿ ಆದಾಯ ಸಂಗ್ರಹಿಸಲಾಗಿದೆ. 2026-27ನೇ ಸಾಲಿನಲ್ಲಿ ಇದುವರೆಗೆ 1,164.11 ಕೋಟಿ ರೂ. ಆದಾಯ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಇದೇ ವೇಳೆ, 2025-26ರಲ್ಲಿ ಅಕ್ರಮ ಹಾಗೂ ಅನಧಿಕೃತ ಗಣಿಗಾರಿಕೆಗೆ ಸಂಬಂಧಿಸಿದ 6,301 ಪ್ರಕರಣಗಳು ಪತ್ತೆಯಾಗಿದ್ದು, ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣಗಳಲ್ಲಿ 31.26 ಕೋಟಿ ರೂ.ದಂಡ ವಸೂಲಿ ಮಾಡಲಾಗಿದ್ದು, 268 ಎಫ್ಐಆರ್ಗಳು ದಾಖಲಾಗಿವೆ ಎಂದು ಸಭೆಯಲ್ಲಿ ತಿಳಿಸಲಾಯಿತು.