ಬೆಂಗಳೂರು: ಐಟಿ ಕಂಪನಿ ಆವರಣದೊಳಗಿನ ಡೇಕೇರ್ ಕೇಂದ್ರದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಬಯಲಾದ ನಂತರ, ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಗುರುವಾರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಪೊಲೀಸರು ಇತರ ಡೇಕೇರ್ ಕೇಂದ್ರಗಳಿಗೆ ಭೇಟಿ ನೀಡಿ, ನಿಗದಿತ ನಿಯಮಗಳಿಗೆ ಅನುಸಾರವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂದು ಖಚಿತಪಡಿಸಿಕೊಳ್ಳುತ್ತಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಬ್ರೂಕ್ಫೀಲ್ಡ್ನಲ್ಲಿರುವ ಐಟಿ ಕಂಪನಿ ಕ್ಯಾಪ್ಜೆಮಿನಿ ಒಳಗಿನ ಡೇಕೇರ್ ಕೇಂದ್ರದ ಐದು ಮಹಿಳಾ ಉದ್ಯೋಗಿಗಳ ವಿರುದ್ಧ ಮಕ್ಕಳ ಮೇಲೆ ದೈಹಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಕ್ಯಾಂಪಸ್ನಲ್ಲಿರುವ ಈ ಡೇಕೇರ್ ಸೌಲಭ್ಯವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗುತ್ತಿದೆ ಎಂದು ಕ್ಯಾಪ್ಜೆಮಿನಿ ಪ್ರಕಟಣೆಯಲ್ಲಿ ತಿಳಿಸಿದೆ.
ಮಕ್ಕಳ ಮೇಲಿನ ದೌರ್ಜನ್ಯದ ವಿಡಿಯೋಗಳನ್ನು ವಾಟ್ಸಾಪ್ ಮೂಲಕ ಹಂಚಿಕೊಂಡ ನಂತರ ಮತ್ತು ಮಕ್ಕಳ ಸಹಾಯವಾಣಿಗೆ ವರದಿ ಮಾಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತರು, ಎಚ್ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಐಟಿ ಕಂಪನಿಯೊಳಗಿನ ಡೇಕೇರ್ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಐದು ಮಹಿಳಾ ಸಿಬ್ಬಂದಿ ವಿರುದ್ಧ ಮಕ್ಕಳ ರಕ್ಷಣಾ ಅಧಿಕಾರಿಯಿಂದ ದೂರು ಸ್ವೀಕರಿಸಲಾಗಿದೆ ಎಂದು ಹೇಳಿದರು.
"ನಾವು ದೂರನ್ನು ಮತ್ತು ಸಾಕ್ಷಿಯಾಗಿ ಸಲ್ಲಿಸಲಾದ ವಿಡಿಯೋಗಳನ್ನು ಪರಿಶೀಲಿಸುತ್ತಿದ್ದೇವೆ. ಪೂರ್ವ ಜಂಟಿ ಪೊಲೀಸ್ ಆಯುಕ್ತರು ಮತ್ತು ವೈಟ್ಫೀಲ್ಡ್ ಉಸ್ತುವಾರಿ ಡಿಸಿಪಿ ಪ್ರಸ್ತುತ ಸ್ಥಳದಲ್ಲಿದ್ದು, ಪರಿಶೀಲಿಸುತ್ತಿದ್ದಾರೆ" ಎಂದು ತಿಳಿಸಿದರು.
ಘಟನೆಯನ್ನು ಬಹಳ ಗಂಭೀರ ಪರಿಗಣಿಸಿದ್ದು, ಸಾಧ್ಯವಾದಷ್ಟು ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಇದಲ್ಲದೆ, ಈ ರೀತಿ ನಡೆಯುತ್ತಿರುವ ಯಾವುದೇ ಇತರ ಡೇ ಕೌರ್ ಗಳನ್ನು ನಾವು ಪರಿಶೀಲಿಸುತ್ತೇವೆ" ಎಂದು ಅವರು ಹೇಳಿದರು.