ಉತ್ತರ ಕನ್ನಡ: ಮುಂಗಾರು ಚುರುಕುಗೊಂಡ ಪರಿಣಾಮ ಪ್ರಮುಖ ಜಲಾಶಯಗಳಿಗೆ ಒಳಹರಿವು ನಿಧಾನವಾಗಿ ಏರಿಕೆಯಾಗತೊಡಗಿದೆ. ಜಿಲ್ಲೆಯ ಭಟ್ಕಳ, ಅಂಕೋಲಾ ತಾಲ್ಲೂಕಿನಲ್ಲಿ ಹಿಂದಿನ 24 ಗಂಟೆಗಳಲ್ಲಿ ಸರಾಸರಿ 9 ಸೆಂ.ಮೀ, ಕಾರವಾರದಲ್ಲಿ 7 ಸೆಂ.ಮೀ, ಹೊನ್ನಾವರದಲ್ಲಿ 6.2 ಸೆಂ.ಮೀನಷ್ಟು ಮಳೆ ದಾಖಲಾಗಿದೆ. ಸೂಪಾ, ಕದ್ರಾ, ಕೊಡಸಳ್ಳಿ ಜಲಾಶಯಗಳಿಗೆ ಒಳಹರಿವು ಏರಿಕೆಯಾಗತೊಡಗಿದೆ.
ಕಾರವಾರ ಸೇರಿದಂತೆ ಜಿಲ್ಲೆಯ ಕರಾವಳಿ ಭಾಗದಲ್ಲಿ ಅಬ್ಬರದ ಮಳೆ ಸುರಿಯಿತು. ಕಾರವಾರದಲ್ಲಿ ತಡರಾತ್ರಿಯಿಂದ ಹಲವು ತಾಸು ಸತತವಾಗಿ ಮಳೆ ಸುರಿದಿದ್ದರಿಂದ ನಗರ ವ್ಯಾಪ್ತಿಯ ಹಲವೆಡೆ ರಸ್ತೆಗಳಲ್ಲಿ ನೀರು ನಿಂತಿದ್ದವು. ಖುರ್ಸಾವಾಡಾ, ಕೆಎಚ್ಬಿ ಕಾಲೊನಿ, ಸಂಕ್ರಿವಾಡಾ ಸೇರಿದಂತೆ ಕೆಲವೆಡೆ ರಸ್ತೆ ಜಲಾವೃತಗೊಂಡಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು.
ಕಾರವಾರ ತಾಲ್ಲೂಕಿನ ಅಂಗನವಾಡಿ, ಶಾಲೆ, ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ನಸುಕಿನ ಜಾವ ತಹಶೀಲ್ದಾರ್ ಆದೇಶಿಸಿದ್ದರು. ಅಂಕೋಲಾ ತಾಲ್ಲೂಕಿನಲ್ಲೂ ಮುನ್ನೆಚ್ಚರಿಕೆಯಾಗಿ ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿತ್ತು. ಆದರೆ, ಬೆಳಿಗ್ಗೆ ಬಳಿಕ ಮಳೆ ಪ್ರಮಾಣ ಇಳಿಮುಖ ಕಂಡಿತ್ತು.
ಹೊನ್ನಾವರ ಪಟ್ಟಣದ ರಾಮತೀರ್ಥ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗುಡ್ಡದ ಒಂದು ಭಾಗ ಕುಸಿದಿದ್ದು, ಜನನಿಬಿಡ ಪ್ರದೇಶದಲ್ಲಿ ಸಂಚಾರಕ್ಕೆ ಅಡ್ಡಿಯಾಯಿತು. ಮಣ್ಣು ಕುಸಿತದಿಂದಾಗಿ ಹೆದ್ದಾರಿಯನ್ನು ಏಕಮುಖ ಸಂಚಾರಕ್ಕೆ ಇಳಿಸಲಾಯಿತು. ಅಧಿಕಾರಿಗಳು ಮಣ್ಣು ಮತ್ತು ಅವಶೇಷಗಳನ್ನು ತೆರವುಗೊಳಿಸಿದರು ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಹಾನಿಗೊಳಗಾದ ಭಾಗವನ್ನು ಸಂಚಾರಕ್ಕೆ ಮುಚ್ಚಲಾಯಿತು.