ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣದ ತಹಶೀಲ್ದಾರ್ ಬಿ.ಎನ್. ಗಿರೀಶ್ ಅವರ ಸರ್ಕಾರಿ ವಸತಿ ಗೃಹದಲ್ಲೇ ಪ್ರಜ್ಞೆ ತಪ್ಪಿಸಿ, ಬಟ್ಟಿ ಬಿಚ್ಚಿ ದೌರ್ಜನ್ಯ ನಡೆಸಿ, 10 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಮೈಸೂರು ಮೂಲದ ಅನುಷ್ ಎಂದು ಗುರುತಿಸಲಾಗಿದೆ. ಜೂನ್ 28 ರಂದು ಘಟನೆ ನಡೆದಿದ್ದು, ಜುಲೈ 1 ರಂದು ಚನ್ನಪಟ್ಟಣ ಟೌನ್ ಠಾಣೆಯಲ್ಲಿ ಗಿರೀಶ್ ದೂರು ದಾಖಲಿಸಿದ್ದರು.
ಆರೋಪಿ ಅನುಷ್ ಫೇಸ್ಬುಕ್ ಮೂಲಕ ತಹಶೀಲ್ದಾರ್ ಗಿರೀಶ್ಗೆ ಪರಿಚಯವಾಗಿದ್ದ. ಜೂನ್ 28ರಂದು ರಾತ್ರಿ ಅನುಷ್ ತನ್ನ ಸ್ನೇಹಿತರಾದ ಶೋಭರಾಜನ್ ಮತ್ತು ನವೀನ್ ಎಂಬುವವರ ಜೊತೆಗೆ ಚನ್ನಪಟ್ಟಣದಲ್ಲಿರುವ ತಹಶೀಲ್ದಾರ್ ಅವರ ಸರ್ಕಾರಿ ನಿವಾಸಕ್ಕೆ ಬಂದಿದ್ದ ಎನ್ನಲಾಗಿದೆ.
ಈ ವೇಳೆ ತಹಶೀಲ್ದಾರ್ ಅವರಿಗೆ ಜ್ಯೂಸ್ನಲ್ಲಿ ಮತ್ತು ಬರುವ ಮಾತ್ರೆ ಹಾಕಿ, ಪ್ರಜ್ಞೆ ತಪ್ಪಿಸಿ ಚಿನ್ನದ ಉಂಗುರ ಹಾಗೂ ಚೈನ್ ಕಸಿದುಕೊಂಡಿದ್ದಾರೆ. ಅಷ್ಟೇ ಅಲ್ಲದೆ, 10 ಲಕ್ಷ ರೂ. ಹಣ ನೀಡುವಂತೆ ಒತ್ತಾಯಿಸಿದ್ದು, ಹಣ ನೀಡಲು ನಿರಾಕರಿಸಿದಾಗ ಕೊಲೆಗೆ ಯತ್ನಿಸಿದ್ದಾರೆ. ಬಳಿಕ ವಿವಸ್ತ್ರಗೊಳಿಸಿ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಬೆಂಗಳೂರಿನ ಅನುಷ್ ಅಲಿಯನ್ ಅನುಷ್ ಶಿವಪ್ಪ, ಶೋಭರಾಜ್ ಹಾಗೂ ನವೀನ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಅನುಷ್ ನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.