ಬಾಗಲಕೋಟೆ: ನಾಲ್ಕು ದಿನಗಳ ಹಿಂದೆ ಸಂತೆಗೆ ಹೋಗಿದ್ದ ವಿವಾಹಿತ ಮಹಿಳೆಯೊಬ್ಬರು ಕಬ್ಬಿನ ಗದ್ದೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಕೊಲೆಯಾದ ವಿವಾಹಿತ ಮಹಿಳೆಯನ್ನು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಬದನೂರು ಗ್ರಾಮದ ನಿವಾಸಿ ಅನಸೂಯ ಎಂದು ಗುರುತಿಸಲಾಗಿದೆ. 14 ವರ್ಷದ ಹಿಂದೆ ಲಕ್ಷಣ ಅನ್ನೋರ ಜೊತೆ ಮದ್ವೆಯಾಗಿದ್ದ ಅನಸೂಯಗೆ ಇಬ್ಬರು ಮಕ್ಕಳಿದ್ದಾರೆ.
ಗಂಡ ಹಾಗೂ ಇಬ್ಬರು ಮಕ್ಕಳೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಆದ್ರೆ ಇತ್ತೀಚಿಗೆ ಅನುಸೂಯಾಗೆ ಪಕ್ಕದೂರಿನ ವ್ಯಕ್ತಿಯ ಜೊತೆ ಸ್ನೇಹ ಬೆಳೆದಿದ್ದು, ಹಲಗಲಿಯ ಸೋಮಣ್ಣ ಎಂಬುವವರ ಜೊತೆ ಕದ್ದು ಮುಚ್ಚಿ ಸುತ್ತಾಡುತ್ತಿದ್ದಳು ಎಂಬ ಆರೋಪ ಕೇಳಿಬಂದಿದೆ. ಇದೇ ಈಗ ಈಕೆಯ ಜೀವಕ್ಕೆ ಕುತ್ತು ತಂದಿದೆ ಅನ್ನೋ ಆರೋಪ ಸಹ ಕೇಳಿ ಬರ್ತಿದೆ.
ಅನಸೂಯ ಅವರು ಕಳೆದ ಜುಲೈ 7ರಂದು ಸಂತೆಗೆ ಎಂದು ಲೋಕಾಪುರಕ್ಕೆ ಹೋಗಿದ್ದರು. ಅವತ್ತು ಮನೆ ಬಿಟ್ಟು ಹೋಗಿದ್ದ ಅನಸೂಯ, ನಾಲ್ಕು ದಿನ ಆದ್ರೂ ವಾಪಸ್ ಬಂದಿರ್ಲಿಲ್ಲ. ಊರೆಲ್ಲಾ ಹುಡುಕಾಡಿದ್ದ ಮನೆಯವ್ರು ಬಳಿಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಲ್ಲದೆ ಸೋಮಣ್ಣನ ಮೇಲೆ ಅನುಮಾನ ಇದೆ ಅಂತಾನೂ ಮನೆಯವರು ದೂರು ಕೊಟ್ಟಿದ್ರು. ಯಾಕಂದ್ರೆ, ಅನುಸೂಯ ಸಂತೆಗೆ ಹೋಗಿದ್ದ ದಿನ ಇದೇ ಸೋಮಣ್ಣ ಜೊತೆಗಿದ್ದಳು ಎನ್ನಲಾಗಿದೆ. ಈ ವಿಷ್ಯ ಮನೆಯವ್ರಿಗೆ ಗೊತ್ತಾಗ್ತಿದ್ದಂತೆ ಪೊಲೀಸರ ಗಮನಕ್ಕೆ ತಂದಿದ್ದರು. ಆದರೆ ಪೊಲೀಸರು ಮಾತ್ರ ನಿಗಾ ವಹಿಸಿರ್ಲಿಲ್ಲ ಅನ್ನೋ ಆರೋಪ ಕೇಳಿ ಬರ್ತಿದೆ. ಇದರ ಬೆನ್ನಲ್ಲೇ ಈಗ ವರ್ಚುಗಲ್ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಹೆಣವಾಗಿ ಪತ್ತೆಯಾಗಿದ್ದಾಳೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಬಾಗಲಕೋಟೆ ಎಸ್ಪಿ ಸಿದ್ದಾರ್ಥ್ ಗೋಯಲ್ ಅವರು, ಆದಷ್ಟು ಬೇಗ ಆರೋಪಿಗಳನ್ನ ಬಂಧಿಸುವುದಾಗಿ ಭರವಸೆ ನೀಡಿದ್ದಾರೆ. ಕೊಲೆಯ ಹಿಂದೆ ಪ್ರಿಯಕರನ ಕೈವಾಡ ಇದೆಯೇ ಅಥವಾ ಬೇರೆ ಕಾರಣಾನಾ ಅನ್ನೋದು ಕುರಿತು ಲೊಕಾಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.