ಬೆಂಗಳೂರು: ರಾಜ್ಯದಲ್ಲಿ 2026ರ ಮುಂಗಾರು ವೈಪರೀತ್ಯದಿಂದ ಒಂದೆಡೆ ಭಾರಿ ಮಳೆ-ಪ್ರವಾಹದಿಂದ ಅಪಾರ ಹಾನಿಯಾಗಿದ್ದರೆ, ಮತ್ತೊಂದೆಡೆ ಶೇ. 40 ರಿಂದ 43 ರಷ್ಟು ಮಳೆ ಕೊರತೆಯಿಂದ ಬರಗಾಲದ ಛಾಯೆ ಆವರಿಸಿದೆ. ಕೆಲವು ಜಿಲ್ಲೆಗಳಲ್ಲಿ ಮಳೆ ಕೊರತೆಯಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ.
ರಾಜ್ಯದಲ್ಲಿನ ನೆರೆ ಮತ್ತು ಬರ ಪೀಡಿತ ಪ್ರದೇಶಗಳಿಗೆ ಜೆಡಿಎಸ್ ಅಧ್ಯಯನ ತಂಡಗಳು ನಾಳೆಯಿಂದ ಪ್ರವಾಸ ಕೈಗೊಳ್ಳಲಿವೆ. ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಜುಲೈ 13 ರಿಂದ 15 ರವರೆಗೆ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ನಿಖಿಲ್ ಕುಮಾರಸ್ವಾಮಿ ಮಾಹಿತಿ ಹಂಚಿಕೊಡಿದ್ದು, ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ಜನತಾದಳ (ಜಾತ್ಯತೀತ) ಪಕ್ಷದಿಂದ ವಿಶೇಷ ಅಧ್ಯಯನ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಜುಲೈ 14ರಂದು ವಿಜಯಪುರ ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಅಲ್ಲಿಯೇ ಸುದ್ದಿಗೋಷ್ಠಿ ನಡೆಸಲಿದ್ದಾರೆ. ನಂತರ ಜುಲೈ 15ರಂದು ಬಾಗಲಕೋಟೆ ಬಾದಾಮಿಯಲ್ಲಿ ರೈತರನ್ನು ಭೇಟಿ ಮಾಡಲಿದ್ದಾರೆ.
ನಮ್ಮ ತಂಡಗಳು ನೆರೆ ಹಾಗೂ ಬರ ಪೀಡಿತ ಪ್ರದೇಶಗಳಿಗೆ ನೇರವಾಗಿ ಭೇಟಿ ನೀಡಿ, ಸಂತ್ರಸ್ತ ರೈತ ಕುಟುಂಬಗಳನ್ನು ಸಂಪರ್ಕಿಸಿ ಅವರ ಸಂಕಷ್ಟಗಳನ್ನು ಆಲಿಸಲಿವೆ. ರೈತರಿಗೆ ಅರ್ಹ ಪರಿಹಾರ ಸಿಗುವವರೆಗೂ ನಾವು ಹೋರಾಡಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಅವರೊಂದಿಗೆ, ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಅಧ್ಯಯನ ತಂಡದ ಅಧ್ಯಕ್ಷರಾದ ಬಂಡೆಪ್ಪ ಕಾಶಂಪೂರ್, ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ, ಶಾಸಕರಾದ ಶರಣಗೌಡ ಕಂದಕೂರ್, ಭೀಮನಗೌಡ ಬಸನಗೌಡ ಪಾಟೀಲ್, ಕೆ. ನೇಮಿರಾಜ್ ನಾಯ್ಡು, ಶ್ರೀಮತಿ ಕರೆಮ್ಮ ನಾಯ್ಡು,ರಾಜಾ ವೆಂಕಟಪ್ಪ ನಾಯಕ್, ದೊಡ್ಡಪ್ಪಗೌಡ ಪಾಟೀಲ್, ಸೋಮನಗೌಡ ಪಾಟೀಲ್ ಸೇರಿ ಒಟ್ಟು 21 ಜನರ ತಂಡ ಭಾಗಿಯಾಗಲಿದ್ದಾರೆ