ಕಲಬುರಗಿ: ರಾಜ್ಯದಲ್ಲಿ ಮಳೆ ಕೊರತೆಯಿದ್ದು, ಎಲ್ಲಾ ಕಡೆ ಬರಗಾಲದ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿರುವ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸರ್ಕಾರ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ತಿಳಿಸಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಈಗಿನ ಬರ ಪರಿಸ್ಥಿತಿ ಬಹಳ ದೀರ್ಘಕಾಲ ಮುಂದುವರಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಜಲ ಮೂಲಗಳು, ಜಲಾಶಯಗಳಲ್ಲಿನ ನೀರಿನ ಮಟ್ಟ ನೋಡಿಕೊಂಡು, ಮೊದಲಿಗೆ ಕುಡಿಯುವ ನೀರಿಗೆ ಹಾಗೂ ನಂತರ ಬೆಳೆಗಳಿಗೆ ನೀರು ಕೊಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ' ಎಂದು ಹೇಳಿದರು.
ಇಡೀ ರಾಜ್ಯದಲ್ಲಿ ಮಳೆ ಕೊರತೆಯಾಗಿದೆ. ಎಲ್ಲಾ ಕಡೆ ಬರ ಪರಿಸ್ಥಿತಿ ಆವರಿಸಿದೆ. ಮುಖ್ಯಮಂತ್ರಿ ಅವರು ಪ್ರತಿವಿಭಾಗ ಮಟ್ಟದಲ್ಲಿ ಸಭೆ ಮಾಡುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರೂ ತಮ್ಮ ತಮ್ಮ ಜಿಲ್ಲೆಯಲ್ಲಿ ಅವಲೋಕನ ಪರಿಸ್ಥಿತಿ ಮಾಡುತ್ತಿದ್ದಾರೆ. ಈಗಾಗಲೇ ಸಭೆಗಳನ್ನು ಮಾಡಿ ನೀರಿನ ಸಮಸ್ಯೆ ಆಲಿಸಲಾಗಿದೆ. ಬರ ನಿರ್ವಹಣೆಗೆ ಏನು ಕ್ರಮ ಕೈಗೊಳ್ಳಬೇಕು ಎಂಬುದನ್ನು ತೀರ್ಮಾನಿಸಿದ್ದೆವೆ ಎಂದರು.
ಎಲ್ಲೆಲ್ಲಿ ನೀರಿನ ಅಭಾವ ಇದೆಯೋ ಅಲ್ಲಿ ಕೊಳವೆ ಭಾವಿ ಕೊರೆಸಬೇಕು ಅಂತಾ ಸೂಚಿಸಿದ್ದೇವೆ. ಪ್ರತಿ ಕ್ಷೇತ್ರಕ್ಕೂ ಬರ ನಿರ್ವಹಣೆಗೆ ಮುಖ್ಯಮಂತ್ರಿ ತಲಾ ಒಂದು ಕೋಟಿ ರೂಪಾಯಿ ಹಣ ಕೊಟ್ಟಿದ್ದಾರೆ. ಬರ ಎದುರಿಸಲು ಏನು ಮಾಡಬೇಕು ಎಂಬ ಎಲ್ಲಾ ಸಿದ್ಧತೆಗಳು ಮಾಡಿಕೊಂಡಿದ್ದೇವೆ. ಉಜ್ಜನಿ ಜಲಾಶಯದಿಂದ ನೀರು ಬಿಡುಗಡೆ ವಿಚಾರವನ್ನು ಈ ಭಾಗದಲ್ಲಿನ ಉಸ್ತುವಾರಿ ನೋಡಿಕೊಳ್ಳುತ್ತಾರೆ ಎಂದರು.
ಸಚಿವ ಸಂಪುಟ ವಿಸ್ತರಣೆ ಯಾವಾಗ ಎಂಬುದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ತೀರ್ಮಾನಿಸುತ್ತಾರೆ. ಹೈ ಕಮಾಂಡ್ ಯಾವಾಗ ಕರೆಯುತ್ತಾರೋ ಆವಾಗ ರಾಜ್ಯ ನಾಯಕರು ಹೋಗಿ ತೀರ್ಮಾನ ಮಾಡ್ತಾರೆ' ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಅವರು ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಕುರಿತು ಚರ್ಚಿಸಲು ನಿರ್ಣಾಯಕ ಸಭೆಯನ್ನು ನಡೆಸಲಿದ್ದಾರೆ.