ಮೈಸೂರು: ಹುಣಸೂರು ಶಾಸಕ ಜಿ ಡಿ ಹರೀಶ್ ಗೌಡ ಪತ್ನಿ ವರ್ಷಾ ಗೌಡ ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಕಾಮೆಂಟ್ ಪೋಸ್ಟ್ ಮಾಡಿದ್ದ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಮಾಜಿ ಸಚಿವ ಮತ್ತು ಹಿರಿಯ ಜೆಡಿಎಸ್ ನಾಯಕ ಜಿ ಟಿ ದೇವೇಗೌಡ ಅವರ ಅಳಿಯ ವಿಶ್ವೇಶ್ವರಯ್ಯ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಈ ಮೂಲಕ ಜಿಟಿ ದೇವೇಗೌಡರ ಕೌಟುಂಬಿಕ ಕಲಹ ಬಹಿರಂಗ ಗೊಂಡಿದೆ.
ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಪೋಸ್ಟ್ ಮಾಡಲಾಗಿದೆ ಎಂದು ಆರೋಪಿಸಿ ವರ್ಷಾ ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ (ಸಿಇಎನ್) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಪ್ರಕರಣ ದಾಖಲಿಸಲಾಗಿತ್ತು. ತನಿಖೆಯ ಸಮಯದಲ್ಲಿ, ಪೊಲೀಸರು ಖಾತೆಯನ್ನು ಪತ್ತೆಹಚ್ಚಿದರು ಮತ್ತು ವಿಶ್ವೇಶ್ವರಯ್ಯ ಅವರನ್ನು ಆರೋಪಿ ಎಂದು ಗುರುತಿಸಿದರು.
ಬೆಂಗಳೂರಿನ ವಿಲ್ಸನ್ ಗಾರ್ಡನ್ನಲ್ಲಿ ಬಳಸಲಾಗುತ್ತಿದ್ದ ಮೊಬೈಲ್ ಮತ್ತು ಜಿಮೇಲ್ ಖಾತೆಗಳ ಐಪಿ ವಿಳಾಸವನ್ನು ಪತ್ತೆಹಚ್ಚಲಾಗಿದೆ. ಪೊಲೀಸ್ ತನಿಖೆಯಲ್ಲಿ ಈ ವಿಳಾಸ ವಿಶ್ವೇಶ್ವರಯ್ಯ ಅವರಿಗೆ ಸೇರಿದ್ದು, ಎಂದು ತಿಳಿದು ಬಂದಿದ್ದು, ತನಿಖೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಹರೀಶ್ ಗೌಡ, ಸಾಮಾಜಿಕ ಮಾಧ್ಯಮವನ್ನು ಬಳಸುವಾಗ ಜನರು ಸಂಯಮದಿಂದ ವರ್ತಿಸುವಂತೆ ತಿಳಿಸಿದ್ದಾರೆ. "ಆರೋಗ್ಯಕರ ಮತ್ತು ಸ್ಪರ್ಧಾತ್ಮಕ ರೀತಿಯಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದರಲ್ಲಿ ಅಥವಾ ಕಾಮೆಂಟ್ಗಳನ್ನು ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ.
ಆದರೆ, ಯಾವುದೇ ವ್ಯಕ್ತಿಯ ಮಾನಹಾನಿ, ಅವಮಾನ ಮಾಡಲು ಸಾಮಾಜಿಕ ಮಾಧ್ಯಮವನ್ನು ಬಳಸಬಾರದು ಎಂದು ಅವರು ಹೇಳಿದರು. ಘಟನೆಯಲ್ಲಿ ನಿಕಟ ಕುಟುಂಬದ ಸದಸ್ಯರ ಪಾತ್ರದ ಬಗ್ಗೆ ಹರೀಶ್ ಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಹರೀಶ್ ಗೌಡ ಅವರ ತಂದೆ ಜಿಟಿ ದೇವೇಗೌಡ ಅವರಿಂದ ದೂರವಾಗಿದ್ದಾರೆ ಎಂದು ವರದಿಯಾಗಿರುವುದರಿಂದ ಈ ಘಟನೆ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ. ಆಪಾದಿತ ಅಪರಾಧವನ್ನು ಕುಟುಂಬದೊಳಗಿನ ಬಿರುಕಿನ ಹಿನ್ನೆಲೆಯಲ್ಲಿ ನೋಡಲಾಗುತ್ತಿದೆ, ಆದರೂ ಪೊಲೀಸರು ಈ ಕೃತ್ಯದ ಹಿಂದಿನ ಯಾವುದೇ ಉದ್ದೇಶದ ಬಗ್ಗೆ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ವಿಶ್ವೇಶ್ವರಯ್ಯ ಅವರು ದೇವೇಗೌಡರ ಹಿರಿಯ ಮಗಳ ಪತಿಯಾಗಿದ್ದಾರೆ.