ಬೆಂಗಳೂರು: ಯಲಹಂಕ ನ್ಯೂಟೌನ್ನ ಹೊಯ್ಸಳ ಗ್ರೌಂಡ್ ರಸ್ತೆಯಲ್ಲಿ ಗುರುವಾರ ಬೆಳಿಗ್ಗೆ ನೀರಿನ ಟ್ಯಾಂಕರ್ ಸಾಗಿಸುವ ವಾಹನ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ವೃದ್ಧರೊಬ್ಬರು ಮೃತಪಟ್ಟಿದ್ದಾರೆ.
ಮೃತರನ್ನು ನ್ಯಾಯಾಂಗ ಬಡಾವಣೆ ನಿವಾಸಿ ವೆಂಕಣ್ಣ (70) ಎಂದು ಗುರುತಿಸಲಾಗಿದ್ದು, ವೆಂಕಣ್ಣ ಅವರ ಮೊಮ್ಮಕ್ಕಳಾದ ಶ್ರಾವಣಿ (12) ಹಾಗೂ ಚರಿತ್ (5) ಕೂದಲೆಳೆ ಅಂತರದಲ್ಲಿ ಪ್ರಾಣಾಯದಿಂದ ಪಾರಾಗಿದ್ದಾರೆ.
ಮೂಲಗಳ ಪ್ರಕಾರ ವೆಂಕಣ್ಣ ಅವರು ಮೊಮ್ಮಕ್ಕಳನ್ನು ಶಾಲೆಗೆ ಬಿಡಲು ದ್ವಿಚಕ್ರ ವಾಹನದಲ್ಲಿ ಶುಕ್ರವಾರ ಬೆಳಿಗ್ಗೆ ಹೋಗುತ್ತಿದ್ದರು. ಈ ವೇಳೆ ದುರ್ಘಟನೆ ನಡೆದಿದೆ.
ರಸ್ತೆ ತಿರುವಿನಲ್ಲಿ ವೆಂಕಣ್ಣ ಮತ್ತು ಅವರ ಮೊಮ್ಮಕ್ಕಳು ಸಾಗುತ್ತಿದ್ದ ದ್ವಿಚಕ್ರವಾಹನ ಟ್ಯಾಂಕರ್ ಹಿಂದಿಕ್ಕಿ ಮುಂದಕ್ಕೆ ಸಾಗಲು ಯತ್ನಿಸಿದಾಗ ಹಿಂದಿನಿಂದ ಬಂದ ನೀರಿನ ಟ್ಯಾಂಕರ್ ದ್ವಿಚಕ್ರವಾಹನಕ್ಕೆ ಢಿಕ್ಕಿಯಾಗಿದೆ.
ಈ ವೇಳೆ ವೆಂಕಣ್ಣ ಮತ್ತು ಅವರ ಮೊಮ್ಮಕ್ಕಳು ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ. ಅದೇ ಸಂದರ್ಭದಲ್ಲಿ ವೆಂಕಣ್ಣ ಅವರ ಮೇಲೆ ನೀರಿನ ಟ್ಯಾಂಕರ್ ಹರಿದಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ವೆಂಕಣ್ಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಅಲ್ಲಿ ಅವರು ಮೃತಪಟ್ಟಿದ್ದಾರೆ. ಮೊಮ್ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ವಾಹನದಲ್ಲಿದ್ದ ವೆಂಕಣ್ಣ ಅವರ ಇಬ್ಬರು ಮೊಮ್ಮಕ್ಕಳು ಪವಾಡ ಸದೃಶ ಪರಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.