ಕಲಬುರಗಿ: ಕಲಬುರಗಿಯ 5ನೇ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಹಾಯಕ ಸರ್ಕಾರಿ ಅಭಿಯೋಜಕ(ಎಪಿಪಿ) ಸಂತೋಷ್ ಕುಮಾರ್ ಲೋಖಂಡೆ ಅವರನ್ನು ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ರೆಡ್ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಲಂಚಕ್ಕಾಗಿ ವಿಚಿತ್ರ ಬೇಡಿಕೆ ಇಟ್ಟಿದ್ದ ಸಂತೋಷ್ ಕುಮಾರ್, ಇಂದು ಕೋರ್ಟ್ ಆವರಣದಲ್ಲೇ 10,000 ರೂ. ನಗದು, 9 ಸೀರೆಗಳು, 4 ಶರ್ಟ್, 4 ಲಂಡನ್ ಜಿನ್ಸ್ ಪ್ಯಾಂಟ್, 1 ಜೊತೆ ಶೂ, 4 ಮಹಿಳೆಯರ ಡ್ರೆಸ್, 6 ಜೊತೆ ಮಹಿಳೆಯರ ಚಪ್ಪಲ್ ಅನ್ನು ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಪ್ರಕರಣವೊಂದರಲ್ಲಿ ಕೋರ್ಟ್ಗೆ ರಾಜಿ ಅರ್ಜಿ ಸಲ್ಲಿಸುವುದಕ್ಕಾಗಿ ರಾಹುಲ್ ಹೈದರಾಬಾದ್ ಎಂಬವರ ಬಳಿ ಸಂತೋಷ್ ಕುಮಾರ್ ಅವರು ಈ ವಿಚಿತ್ರ ಬೇಡಿಕೆಗಳನ್ನು ಇಟ್ಟಿದ್ದರು. ಹೀಗಾಗಿ ರಾಹುಲ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದರಂತೆ ದೂರುದಾರರಿಂದ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ಇಂದು ದಾಳಿ ನಡೆಸಿ, ಅವರನ್ನು ಬಂಧಿಸಿದ್ದಾರೆ.
ಲೋಕಾಯುಕ್ತ ಇನ್ಸ್ಪೆಕ್ಟರ್ ಅರುಣ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ.
ಆರೋಪಿಯ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.