ಬೆಂಗಳೂರು: ಸಿಲಿಕಾನ್ ಸಿಟಿಯ ಜಯನಗರದಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ವಾಣಿಜ್ಯ ಸಂಸ್ಥೆಯೊಂದರ ಹಳೆಯ ಮಾದರಿಯ ಸರ್ವಿಸ್ ಲಿಫ್ಟ್ನಲ್ಲಿ ತಲೆ ಸಿಲುಕಿ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ.
ಮೃತನನ್ನು ಧಾರವಾಡ ಮೂಲದ ರಾಜೇಶ್ (22) ಎಂದು ಗುರುತಿಸಲಾಗಿದೆ. ಸ್ವಂತ ಹೋಟೆಲ್ ಆರಂಭಿಸುವ ಉದ್ದೇಶ ಹೊಂದಿದ್ದ ಮೃತ ರಾಜೇಶ್, ಹೋಟೆಲ್ ನಿರ್ವಹಣೆ ಬಗ್ಗೆ ತಿಳಿದುಕೊಳ್ಳಲು ತನ್ನ ಸ್ನೇಹಿತನಿಗೆ ಸೇರಿದ ಜಯನಗರದ 27ನೇ ಕ್ರಾಸ್, 4ನೇ ಟಿ ಬ್ಲಾಕ್ನಲ್ಲಿರುವ ದಕ್ಷಿಣ ಉಪಹಾರ್ ಹೋಟೆಲ್ಗೆ ತೆರಳಿದ್ದರು. ಹೋಟೆಲ್ನ ದೈನಂದಿನ ಕಾರ್ಯವೈಖರಿಯನ್ನು ಗಮನಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಬೆಳಗ್ಗೆ ಸುಮಾರು 8.30ರ ವೇಳೆಗೆ, ನೆಲ ಮಹಡಿಯಿಂದ ಮೊದಲ ಮಹಡಿಗೆ ಆಹಾರ ಪದಾರ್ಥಗಳನ್ನು ಹೋಟೆಲ್ನ ಸರಕು ಸಾಗಣೆ (ಸರ್ವಿಸ್) ಲಿಫ್ಟ್ ಮೂಲಕ ಕಳುಹಿಸಲಾಗುತ್ತಿತ್ತು. ಇದೇ ವೇಳೆ ಲಿಫ್ಟ್ನ ಬಾಗಿಲು ಏಕಾಏಕಿ ತೆರೆದಿದೆ.
ರಾಜೇಶ್ ಲಿಫ್ಟ್ನಿಂದ ಹೊರಬರಲು ಮುಂದಾದಾಗ, ಲಿಫ್ಟ್ ಏಕಾಏಕಿ ಚಲಿಸಲು ಆರಂಭಿಸಿದೆ. ಇದರಿಂದ ಅವರ ತಲೆ ಲಿಫ್ಟ್ನ ಮೇಲ್ಭಾಗದ ಅಂಚಿಗೆ (ಲಿಂಟೆಲ್) ಸಿಲುಕಿ ತೀವ್ರವಾಗಿ ಪೆಟ್ಟಾಗಿದೆ. ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಸಂಬಂಧ ಹೋಟೆಲ್ ಹಾಗೂ ಕಟ್ಟಡ ಮಾಲೀಕರ ವಿರುದ್ಧ ನಿರ್ಲಕ್ಷ್ಯದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆಯನ್ನು ಜಯನಗರ ಪೊಲೀಸರು ಮುಂದುವರಿಸಿದ್ದಾರೆ.