ಬೆಂಗಳೂರು: ವಿದ್ಯಾರ್ಥಿಗಳ ಹೋರಾಟದ ನೆಪದಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಉಮರ್ ಖಲೀದ್ ಅಂತಾ ಘೋಷಣೆ ಕೂಗುತ್ತಿದ್ದಾರೆ. ನಾಲಾಯಕ್ ಗೃಹ ಸಚಿವ ಎಲ್ಲಿ ಮಲಗಿಕೊಂಡಿದ್ದಾರೆ ಅವ್ರನ ಕೇಳಿ ಎಂಬ ಹೇಳಿಕೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಪ್ರಿಯಾಂಕ್ ಖರ್ಗೆ ಭಾನುವಾರ ತಿರುಗೇಟು ನೀಡಿದ್ದಾರೆ.
ಬಿ.ವೈ. ವಿಜಯೇಂದ್ರ ಅವರ ಹೇಳಿಕೆಯ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಪೋಸ್ಟ್ ಮಾಡಿದ್ದು, ಗೃಹ ಸಚಿವನಾಗಿ ಅಧಿಕಾರ ಸ್ವೀಕರಿಸಿ ಕೆಲವೇ ವಾರಗಳಾಗಿವೆ. ಅಷ್ಟರಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಭಯ ಹಾಗೂ ಹತಾಶೆ ಶುರುವಾಗಿರುವುದು ಅವರ ಘನತೆಗೆ ತಕ್ಕದ್ದೇ? ಎಂಬದನ್ನ ನಾನು ಪ್ರಶ್ನಿಸಲು ಹೋಗುವುದಿಲ್ಲ. ಪಾಪ ಪಿಎಸ್ಐ ನೇಮಕಾತಿ ಹಗರಣದಲ್ಲಿ ಸಿಕ್ಕಿಬಿದ್ದ ನೋವು ಅವರಲ್ಲಿ ಇನ್ನೂ ಮಾಸಿದಂತೆ ಕಾಣುತ್ತಿಲ್ಲ ಎಂದು ಕುಟುಕಿದ್ದಾರೆ.
ವಿಜಯೇಂದ್ರ ನನಗಿಂತ ಮೂರ್ನಾಲ್ಕು ವರ್ಷ ಹಿರಿಯರಾಗಿರಬಹುದು. ಆದರೆ ವಯಸ್ಸಿನಲ್ಲಿ ಹಿರಿಯನಾದ ತಕ್ಷಣ ಬಾಯಿಗೆ ಬಂದಂತೆ ಮಾತನಾಡುವ ಪರವಾನಗಿ ಸಿಕ್ಕಂತಲ್ಲ. ನಿಷ್ಪ್ರಯೋಜಕ ಅಥವಾ ಅಸಮರ್ಥ ಎಂದು ಕೈಲಾಗದ ವಿರೋಧ ಪಕ್ಷದಿಂದ ಟೀಕೆ ಕೇಳುವುದು POCSO ಪ್ರಕರಣದ ಆರೋಪಿ ಆಗಿರುವುದಕ್ಕಿಂತ ಸಾವಿರ ಪಟ್ಟು ಮೇಲು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ಸಾಮಾನ್ಯ ಜ್ಞಾನ ಎಲ್ಲರ ಮನೆಯಲ್ಲಿ ಅರಳುವ ಹೂವಲ್ಲ ಎಂಬ ವಾಸ್ತವಕ್ಕೆ ತಾವೂ ಸಾಕ್ಷಿಯಾಗುತ್ತಿರುವಂತಿದೆ. ಮಾತುಗಳಿಗೆ ಸ್ವಯಂ ಮಿತಿ ಇರಬೇಕು. ಇಲ್ಲವಾದರೆ ಹೇಗೆ ಮಾತನಾಡಬೇಕೆಂಬುದನ್ನ ಕಲಿಸಬೇಕಾದ ಪರಿಸ್ಥಿತಿ ಬರುತ್ತದೆ ಎಚ್ಚರಿಕೆ ನೀಡಿದ್ದಾರೆ.