ಬೆಂಗಳೂರು: ಬೆಂಗಳೂರು ನಗರವನ್ನು ಸ್ವಚ್ಛ, ಸುಂದರ ಹಾಗೂ ವಾಸಯೋಗ್ಯ ನಗರವಾಗಿರಿಸುವ ಉದ್ದೇಶದಿಂದ ಆಗಸ್ಟ್-2026 ಮಾಹೆಯಲ್ಲಿ "ತ್ಯಾಜ್ಯದಿಂದ ಸ್ವಾತಂತ್ರ" ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಈ ಅಭಿಯಾನದಡಿಯಲ್ಲಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿಯಲ್ಲಿ ಆಡಳಿತ ಹೊಂದಿರುವ ಎಲ್ಲಾ ನಗರ ಪಾಲಿಕೆಗಳು ಹಾಗೂ ಇತರೇ ಸಂಸ್ಥೆಗಳ ವತಿಯಿಂದ ನಗರದ ರಸ್ತೆಗಳಲ್ಲಿ ಕಪ್ಪುಚುಕ್ಕೆಗಳು, ಕಟ್ಟಡ ಮತ್ತು ಭಗ್ನಾವಶೇಷ ತ್ಯಾಜ್ಯ, ಮರದ ಕೊಂಬೆಗಳು, ವಿದ್ಯುತ್ ಕಂಬಗಳು, ಪೈಪುಗಳನ್ನು ಸಾಮೂಹಿಕವಾಗಿ ತೆರವುಗೊಳಿಸಲು ಉದ್ದೇಶಿಸಲಾಗಿದೆ.
ಘನತ್ಯಾಜ್ಯ ನಿರ್ವಹಣಾ ಉಪವಿಧಿಗಳು-2020ರ ಉಪವಿಧಿ 18(1)(ಬಿ) ರನ್ವಯ ಖಾಲಿ ನಿವೇಶನಗಳನ್ನು ಸ್ವಚ್ಛ ಹಾಗೂ ನೈರ್ಮಲ್ಯಯುತ ಸ್ಥಿತಿಯಲ್ಲಿ ನಿರ್ವಹಿಸುವುದು ಮಾಲೀಕರ ಕಡ್ಡಾಯ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ, ನಗರದ ಎಲ್ಲಾ ಖಾಲಿ ನಿವೇಶನಗಳ ಮಾಲೀಕರಿಗೆ ಈ ಕೆಳಕಂಡ ಸೂಚನೆಗಳನ್ನು ನೀಡಲಾಗಿದೆ.
ನಗರದಲ್ಲಿನ ಖಾಲಿ ನಿವೇಶನಗಳ ಮಾಲೀಕರು ತಮ್ಮ ನಿವೇಶನಗಳಲ್ಲಿ ಶೇಖರಣೆಯಾಗಿರುವ ತ್ಯಾಜ್ಯ/ಡೆಬ್ರಿಸ್ ಅನ್ನು ಆಗಸ್ಟ್ 15ರೊಳಗೆ ತಪ್ಪದೇ ಸ್ವಚ್ಚಗೊಳಿಸತಕ್ಕದ್ದು. ಒಂದು ವೇಳೆ ಸ್ವಚ್ಛಗೊಳಿಸದಿದ್ದಲ್ಲಿ, ನಗರಪಾಲಿಕೆಯ ವತಿಯಿಂದ ತ್ಯಾಜ್ಯ/ಡೆಬಿಸ್ ಅನ್ನು ತೆರವುಗೊಳಿಸಿ, ತಗುಲುವ ವೆಚ್ಚವನ್ನು ನಿವೇಶನದ ವಿಸ್ತೀರ್ಣ ಹಾಗೂ ತೆರವುಗೊಳಿಸಿದ ತ್ಯಾಜ್ಯದ ಪ್ರಮಾಣಕ್ಕೆ ಅನುಗುಣವಾಗಿ ಘನತ್ಯಾಜ್ಯ ನಿರ್ವಹಣಾ ಉಪವಿಧಿಗಳು-2020ರ ಉಪವಿಧಿ 18(1)(ಡಿ) (ii) ಹಾಗೂ ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ, 2024ರ ಕಲಂ 285(2) ರನ್ವಯ ಆಸ್ತಿ ತೆರಿಗೆಯೊಂದಿಗೆ ವಸೂಲಿ ಮಾಡಲಾಗುವುದು.
ತೆರಿಗೆ ಬಾಕಿಯನ್ನು ಕರ್ನಾಟಕ ಭೂಕಂದಾಯ ಕಾಯ್ದೆ 1964 ರ ಅನುಸಾರ ವಸೂಲಾತಿ ಕ್ರಮ ಜರುಗಿಸಲಾಗುವುದು. ನಂತರದ ಪ್ರಕರಣಗಳಲ್ಲಿ ಉಪವಿಧಿ 18(1)(ಡಿ) (iii) ರನ್ವಯ ಮೊದಲ ಉಲ್ಲಂಘನೆಗೆ ರೂ.25,000/- ಹಾಗೂ ನಂತರದ ಉಲ್ಲಂಘನೆಗಳಿಗೆ ರೂ.50,000/- ರಿಂದ ರೂ.1,00,000/- ವರೆಗೆ ದಂಡ ವಿಧಿಸಲಾಗುವುದು.
ಖಾಲಿ ನಿವೇಶನಗಳನ್ನು ಆಗಸ್ಟ್ 15 ರೊಳಗೆ ಸ್ವಚ್ಛಗೊಳಿಸದಿದ್ದಲ್ಲಿ, ಸಾರ್ವಜನಿಕರು ಅಂತಹ ನಿವೇಶನಗಳ ಫೋಟೋ ಸಹಿತ GPS Co-ordinates ನೊಂದಿಗೆ ದೂರನ್ನು ವಾಟ್ಸ್ ಆಪ್ ಚಾಟ್-ಬಾಟ್ ಸಂಖ್ಯೆ: +91-9448197197 ಗೆ ಸಲ್ಲಿಸಬಹುದು. ದೂರುದಾರರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು.
ನಿವೇಶನಗಳ ಮಾಲೀಕರು ಸ್ವಚ್ಛಗೊಳಿಸಿದ ನಿವೇಶನಗಳ ಸುತ್ತಮುತ್ತ ಬೇಲಿ/ಕಾಂಪೌಂಡ್ ಗೋಡೆಯನ್ನು ನಿರ್ಮಿಸಿಕೊಂಡು, ಅನಧಿಕೃತ ತ್ಯಾಜ್ಯ ವಿಲೇವಾರಿಯಾಗದಂತೆ ವ್ಯವಸ್ಥೆ ಕಲ್ಪಿಸಿಕೊಳ್ಳುವುದು. ಸ್ವಚ್ಛ, ಸುಂದರ ಮತ್ತು ವಾಸಯೋಗ್ಯ ಬೆಂಗಳೂರು ನಿರ್ಮಾಣಕ್ಕಾಗಿ ಸಹಕರಿಸಿ, ಕೈಜೋಡಿಸಿ ಎಂದು GBA ಮುಖ್ಯ ಆಯುಕ್ತರು ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.