ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಶಾದಿಪುರ ಪ್ರದೇಶದಲ್ಲಿ ಬುಧವಾರ ವಿವಾದಿತ ಭೂಮಿಯ ಸಮೀಕ್ಷೆ ನಡೆಸುತ್ತಿದ್ದಾಗ ತೆಲಂಗಾಣ ಗಡಿಯ ಗ್ರಾಮಸ್ಥರು ಕರ್ನಾಟಕದ ಅಧಿಕಾರಿಗಳ ತಂಡದ ಮೇಲೆ ಕಲ್ಲು ತೂರಾಟ ನಡೆಸಿದ ನಂತರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಶಾದಿಪುರ ಗ್ರಾಮದ ಸರ್ವೆ ಸಂಖ್ಯೆ 126 ಮತ್ತು 127 ರಲ್ಲಿನ ವಿವಾದಿತ ಭೂಮಿಯ ಸಮೀಕ್ಷೆಗೆ ಸೇಡಂ ಸಹಾಯಕ ಆಯುಕ್ತ ಪ್ರಭು ರೆಡ್ಡಿ ಮತ್ತು ಭೂ ದಾಖಲೆ ಇಲಾಖೆಯ ಉಪ ನಿರ್ದೇಶಕ ಮಹೇಶ್ ನೇತೃತ್ವದ ಅಧಿಕಾರಿಗಳ ತಂಡ ಹೋಗಿತ್ತು ಎಂದು ಮೂಲಗಳು ತಿಳಿಸಿವೆ.
ಶಾದಿಪುರದ ಗಡಿಯಲ್ಲಿರುವ ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ತಂದೂರ್ ತಾಲ್ಲೂಕಿನ ಉಮ್ಲಾ ನಾಯಕ್ ಥಂಡಾದ ಪುರುಷರು ಮತ್ತು ಮಹಿಳೆಯರು ಸೇರಿದಂತೆ ಕೆಲವರು ಪ್ರತಿಭಟಿಸಿ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಅವರು ಹೇಳಿದರು.
ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ, ಪ್ರತಿಭಟನಾಕಾರರು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ವಿವಾದಿತ ಭೂಮಿಯಾಗಿರುವುದರಿಂದ ಎರಡೂ ರಾಜ್ಯಗಳ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಬೇಕೆಂದು ಒತ್ತಾಯಿಸಿದರು.
ಉದ್ವಿಗ್ನ ಪರಿಸ್ಥಿತಿಯಹಿನ್ನೆಲೆಯಲ್ಲಿ, ಅಧಿಕಾರಿಗಳ ತಂಡವು ಸರ್ವೆ ಕಾರ್ಯವನ್ನು ಸ್ಥಗಿತಗೊಳಿಸಿ ಸ್ಥಳದಿಂದ ಹಿಂತಿರುಗಿತು. ಕರ್ನಾಟಕ ಸರ್ಕಾರವು ಸುಮಾರು 24 ವರ್ಷಗಳ ಹಿಂದೆ ಭೂಹೀನ ರೈತರಿಗೆ ಮಂಜೂರು ಮಾಡಿದ ಈ ಭೂಮಿಯ ಗಡಿ ಮತ್ತು ಹಕ್ಕುಗಳ ವಿವಾದ ಮುಂದುವರೆದಿದೆ.
ಸಮೀಕ್ಷೆಯ ಸಮಯದಲ್ಲಿ ಚಿಂಚೋಳಿ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ಕುಂಚಾವರಂ ಪಿಎಸ್ಐ ವೆಂಕಟ ನಾಯಕ್, ಕಂದಾಯ ಇಲಾಖೆ ಇನ್ಸ್ಪೆಕ್ಟರ್ ಆರಿಫ್ ಮತ್ತು ಅವರ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಮತ್ತು ಶಾದಿಪುರ ಗ್ರಾಮಸ್ಥರು ಹಾಜರಿದ್ದರು.