ಬೆಳಗಾವಿ: ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಧರ್ಮಟ್ಟಿ ಗ್ರಾಮದಲ್ಲಿ ಸೋಮವಾರ ಹೃದಯ ವಿದ್ರಾವಕ ಘಟನೆಯೊಂದು ನಡೆದಿದ್ದು, ಈಜಲು ಹಳ್ಳಕ್ಕೆ ಇಳಿದಿದ್ದ ಅಣ್ಣ- ತಮ್ಮ ಇಬ್ಬರೂ ನೀರುಪಾಲಾಗಿದ್ದಾರೆ.
ಮೃತ ಬಾಲಕರನ್ನು ಧರ್ಮಟ್ಟಿ ಗ್ರಾಮದ ಸಾಗರ್ ಮಾದರ(15), ಪ್ರವೀಣ್ ಮಾದರ(13) ಎಂದು ಗುರುತಿಸಲಾಗಿದ್ದು, ಇಬ್ಬರೂ ಹಳ್ಳದಲ್ಲಿ ಈಜಲು ತೆರಳಿದ್ದರು. ಈ ವೇಳೆ ನೀರಿಗಿಳಿದಾಗ ಪ್ರವೀಣ್ ಮುಳುಗಿದ್ದಾನೆ. ಇದನ್ನು ಗಮನಿಸಿ ಆತನ ರಕ್ಷಣೆಗೆ ಸಾಗರ್ ತೆರಳಿದ್ದು, ಆತನೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಮೃತದೇಹವನ್ನು ಸ್ಥಳೀಯರು ಹಾಗೂ ಪೊಲೀಸರು ನೀರಿನಿಂದ ಹೊರತೆಗೆದಿದ್ದಾರೆ. ಇಬ್ಬರು ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಸಂಬಂಧ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.