ಬೆಂಗಳೂರು: ನಗರಾಭಿವೃದ್ದಿ ಇಲಾಖೆಯಲ್ಲಿ ಬಿಡಿಎ ಮತ್ತು ಬಿಎಂಆರ್ಡಿಎ ಇಲಾಖೆಗಳನ್ನು ಸೇರಿಸದೆ ಇದ್ದರೆ ಅಧಿಕಾರ ಸ್ವೀಕಾರ ಮಾಡುವುದಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಪಟ್ಟು ಹಿಡಿದಿದ್ದಾರೆ.
ಈ ಸಂಬಂಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಬಳಿ ನಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ಬೆಂಗಳೂರು ಅಭಿವೃದ್ದಿ ಇಲಾಖೆಗೆ ರಾಮಲಿಂಗಾ ರೆಡ್ಡಿ ಆಕಾಂಕ್ಷಿಯಾಗಿದ್ದರು. ಆದರೆ ಕೃಷ್ಣ ಬೈರೇಗೌಡ ಅವರಿಗೆ ನೀಡಲಾಗಿತ್ತು. ಇದೀಗ ಖಾತೆಯಲ್ಲಿ ಬಿಡಿಎ ಮತ್ತು ಬಿಎಂಆರ್ಡಿಎ ಇಲ್ಲದೆ ಇರುವುದು ಬೈರೇಗೌಡ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಕೃಷ್ಣ ಬೈರೇಗೌಡ ಅಧಿಕಾರ ಸ್ವೀಕರಿಸಲು ನಿರಾಕರಿಸಿದ್ದಾರೆ.
ಬೆಂಗಳೂರು ನಗರಾಭಿವೃದ್ಧಿ ಖಾತೆಯು ಬಿಡಿಎ ಮತ್ತು ಬಿಎಂಆರ್ಡಿಎ ಇಲ್ಲದೆ ಪರಿಪೂರ್ಣವಲ್ಲ ಎಂಬುವುದು ಅವರ ವಾದವಾಗಿದೆ. ಈ ಎರಡನ್ನೂ ಹೊರತುಪಡಿಸಿದರೆ ನನಗೆ ನೀಡಿದ ಖಾತೆ ಕೇವಲ ಕಾರ್ಪೊರೇಷನ್ ವಿಷಯಗಳಿಗೆ ಸೀಮಿತವಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.
ಖಾತೆಯಲ್ಲಿ ಇವರೆಡು ಪ್ರಾಧಿಕಾರವನ್ನು ಸೇರಿಸದೆ ಇದ್ದರೆ ನಾನು ಅಧಿಕಾರ ಸ್ವೀಕಾರ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಹೈಕಮಾಂಡ್ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಅವರು ಪಟ್ಟು ಹಿಡಿದಿದ್ದಾರೆ. ಒಂದು ವೇಳೆ ಇದು ಸಾಧ್ಯವಾಗದೆ ಇದ್ದರೆ ಗೊಂದಲ ಬಗೆಹರಿಯುವ ವರೆಗೂ ನಾನು ಇಲಾಖೆಯ ಜವಾಬ್ದಾರಿಯನ್ನು ವಹಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.