ಬೆಂಗಳೂರು: ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಬೆದರಿಕೆ ಹಾಗೂ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಮನನೊಂದ ವ್ಯಕ್ತಿಯೊಬ್ಬ ಬಿಯರ್'ಗೆ ವಿಷ ಬೆರೆಸಿ ಕುಡಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಬಿ. ಲಕ್ಷ್ಮೀನಾರಾಯಣ (58) ಎಂದು ಗುರ್ತಿಸಲಾಗಿದೆ. ಇವರು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಂಡಿಗಾನಾಳ ಗ್ರಾಮದ ನಿವಾಸಿಯಾಗಿದ್ದರು. ಅವರ ಮೃತದೇಹವು ಶುಕ್ರವಾರ ಬೆಳಗ್ಗೆ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆಯ ಸಮೀಪದ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ.
ಮೃತ ವ್ಯಕ್ತಿಯ ಪುತ್ರ ಮೋಹಂತಿ ನೀಡಿದ ದೂರಿನ ಮೇರೆಗೆ ರಾಜಕುಮಾರ್, ರಾಜು ಗೌಡ, ವೆಂಕಟರಮಣಪ್ಪ ಹಾಗೂ ಜಯಸುಧಾ ವಿರುದ್ಧ ಪ್ರಕರಣ ದಾಖಲಾಗಿದೆ.
ಸುಮಾರು ಆರು ತಿಂಗಳ ಹಿಂದೆ ಲಕ್ಷ್ಮೀನಾರಾಯಣ ಅವರು ತಮ್ಮ ಒಂದು ಎಕರೆ ಜಮೀನನ್ನು ರಾಜಕುಮಾರ್ ಅವರಿಗೆ ರೂ.2.4 ಕೋಟಿಗೆ ಮಾರಾಟ ಮಾಡಿದ್ದರು. ನೋಂದಣಿಗೂ ಮುನ್ನ ರೂ.1.4 ಕೋಟಿ ಮುಂಗಡ ನೀಡಲಾಗಿದ್ದರೂ, ಉಳಿದ ರೂ.1 ಕೋಟಿ ಹಣವನ್ನು ಪಾವತಿಸದೇ ವಿಳಂಬ ಮಾಡಲಾಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದೇ ವೇಳೆ, ವೆಂಕಟರಮಣಪ್ಪ ಮತ್ತು ಅವರ ಪತ್ನಿ ಜಯಸುಧಾ ಕೂಡ ಲಕ್ಷ್ಮೀನಾರಾಯಣ ಅವರಿಂದ ಸುಮಾರು ರೂ.1 ಕೋಟಿ ಹಣ ಪಡೆದಿದ್ದರು ಎನ್ನಲಾಗಿದ್ದು, ಹಣವನ್ನು ಮರಳಿ ಕೇಳಿದಾಗ ಬೆದರಿಕೆ ಹಾಕಲಾಗುತ್ತಿತ್ತು ಎಂದು ಆರೋಪಿಸಿದ್ದಾರೆ.
ಒಟ್ಟಾರೆ ಸುಮಾರು ರೂ.2 ಕೋಟಿ ಹಣವನ್ನು ವಾಪಸ್ ಪಡೆಯಲು ಸಾಧ್ಯವಾಗದೆ, ನಿರಂತರ ಒತ್ತಡ ಮತ್ತು ಬೆದರಿಕೆಗಳಿಂದ ಲಕ್ಷ್ಮೀನಾರಾಯಣ ಮಾನಸಿಕವಾಗಿ ನೊಂದಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಗುರುವಾರ ಮನೆಯಿಂದ ಹೊರಟಿದ್ದ ಲಕ್ಷ್ಮೀನಾರಾಯಣ ಬಳಿಕ ಸಂಪರ್ಕಕ್ಕೆ ಸಿಗಲಿಲ್ಲ. ನಂತರ ಅವರ ಮೃತದೇಹ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿರುವ ಪೊಲೀಸರು, ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿ ಅವರಿಂದ ಸ್ಪಷ್ಟನೆ ಪಡೆಯಲು ಮುಂದಾಗಿದ್ದಾರೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಾಗಿದ್ದು, ಘಟನೆ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
ಗಮನಿಸಿ...
ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ. ನೀವು ಅಥವಾ ನಿಮ್ಮ ಪರಿಚಿತರು ಯಾವುದೇ ರೀತಿಯ ಮಾನಸಿಕ ಒತ್ತಡ ಎದುರಿಸುತ್ತಿದ್ದರೆ, ಭಾರತ ಸರ್ಕಾರದ ಉಚಿತ ಸಹಾಯವಾಣಿ 'Tele-MANAS' ಸಂಖ್ಯೆ 14416 ಅಥವಾ 1800-891-4416 ಗೆ ಕರೆ ಮಾಡಿ 24 ಗಂಟೆಯೂ ಉಚಿತ ಆಪ್ತಸಮಾಲೋಚನೆ ಪಡೆಯಬಹುದು.