ಬೆಂಗಳೂರು: ತಾವು ಕೆಲಸ ಮಾಡುತ್ತಿದ್ದ ಮನೆಗೇ ಕನ್ನ ಹಾಕಿದ ನೇಪಾಳಿ ಕಳ್ಳ ದಂಪತಿಯನ್ನು ಬೆಂಗಳೂರು ಪೊಲೀಸರು ಬುಧವಾರ ಬಂಧಿಸಿದ್ದು, ಆರೋಪಿಗಳಿಂದ 25 ಲಕ್ಷ ರೂಪಾಯಿ ನಗದನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತ ಆರೋಪಿಗಳನ್ನು ಭುವನ್ ಬಿಸ್ತಾ ಅಲಿಯಾಸ್ ಪವನ್ ಬಿಸ್ತಾ(35) ಹಾಗೂ ಅವರ ಪತ್ನಿ ಸೀತಾ ಬಿಸ್ತಾ(33) ಎಂದು ಗುರುತಿಸಲಾಗಿದೆ.
ಅಮೃತಹಳ್ಳಿಯ ಗುತ್ತಿಗೆದಾರರೊಬ್ಬರ ಮನೆಯಲ್ಲಿ ಮನೆಗೆಲಸ ಹಾಗೂ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಈ ದಂಪತಿ 25 ಲಕ್ಷ ನಗದು ಕದ್ದು ಪರಾರಿಯಾಗಲು ಯತ್ನಿಸಿದ್ದರು. ಆದರೆ ಪ್ರಕರಣದ ಬೆನ್ನುಬಿದ್ದ ಪೊಲೀಸರು ಕೇವಲ ಒಂದೇ ದಿನದಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ್ದು, ಕಳುವಾಗಿದ್ದ ಸಂಪೂರ್ಣ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಮನೆ ಕೆಲಸಕ್ಕೆ ಸೇರಿದ್ದ ಈ ದಂಪತಿ, ಕೇವಲ ಒಂದು ತಿಂಗಳಲ್ಲೇ ಮನೆಯ ಮಾಲೀಕರು ಹಣ ಎಲ್ಲಿ ಇಡುತ್ತಾರೆ ಎಂಬ ಮಾಹಿತಿ ಕಲೆ ಹಾಕಿದ್ದರು. ಕಳ್ಳತನ ಮಾಡುವ ಉದ್ದೇಶದಿಂದಲೇ ಕಡಿಮೆ ಸಂಬಳಕ್ಕೆ ಕೆಲಸಕ್ಕೆ ಸೇರಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಅರ್ಕಾವತಿ ಲೇಔಟ್ ನಿವಾಸಿ ಹಾಗೂ ಗುತ್ತಿಗೆದಾರ ಸಿ.ಎಚ್. ಸುಬ್ಬಾರೆಡ್ಡಿ ಅವರು ತಮ್ಮ ಕೆಲಸಗಾರರಿಗೆ ಸಂಬಳ ನೀಡಲು ಬ್ಯಾಂಕ್ನಿಂದ 25 ಲಕ್ಷ ರೂಪಾಯಿ ಡ್ರಾ ಮಾಡಿ ಮನೆಯ ಕಬೋರ್ಡ್ನಲ್ಲಿ ಇಟ್ಟಿದ್ದರು. ಕಬೋರ್ಡ್ನ ಕೀಲಿಯನ್ನು ಮತ್ತೊಂದು ಕಬೋರ್ಡ್ನಲ್ಲಿ ಇಟ್ಟಿರುವ ವಿಚಾರವೂ ಆರೋಪಿಗಳಿಗೆ ಗೊತ್ತಾಗಿತ್ತು. ಮನೆಯ ಮಾಲೀಕರು ಇಲ್ಲದ ಸಮಯದಲ್ಲಿ ಕಬೋರ್ಡ್ ತೆರೆದು 25 ಲಕ್ಷ ರೂಪಾಯಿ ನಗದು ಇದ್ದ ಬ್ಯಾಗ್ ಸಮೇತ ದಂಪತಿ ಪರಾರಿಯಾಗಿದ್ದರು.
ಈ ಸಂಬಂಧ ಮೇ 28ರಂದು ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದ ಸಿ.ಎಚ್. ಸುಬ್ಬಾರೆಡ್ಡಿ ಅವರು, ಕಳೆದ ಒಂದು ತಿಂಗಳಿಂದ ನೇಪಾಳ ಮೂಲದ ದಂಪತಿ ತಮ್ಮ ಮನೆಯಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಗೃಹ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು ಎಂಬುದನ್ನು ಉಲ್ಲೇಖಿಸಿದ್ದರು. ಕೂಡಲೇ ಪ್ರಕರಣ ದಾಖಲಿಸಿಕೊಂಡ ಅಮೃತಹಳ್ಳಿ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಇನ್ಸ್ಪೆಕ್ಟರ್ ಬಾಲಾಜಿ ವಿ ನೇತೃತ್ವದ ತಂಡಕ್ಕೆ ದೊರೆತ ಖಚಿತ ಮಾಹಿತಿಯ ಮೇರೆಗೆ ಮೇ 28ರಂದು ಕೆಂಗೇರಿ ಸ್ಯಾಟಲೈಟ್ ಟೌನ್ನ ಶಿರ್ಕೆ ಲೇಔಟ್ನಲ್ಲಿರುವ ಆರೋಪಿಗಳ ಸಂಬಂಧಿಕರ ಮನೆಯಲ್ಲಿ ದಾಳಿ ನಡೆಸಿ ಕಳ್ಳ ದಂಪತಿಯನ್ನು ಬಂಧಿಸಲಾಗಿದೆ.