ಬೆಂಗಳೂರು: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಅವರ ಪುತ್ರ ಮೊಹಮ್ಮದ್ ಹ್ಯಾರಿಸ್ ನಲಪಾಡ್ ವಿರುದ್ಧ ಬಿಟ್ಕಾಯಿನ್ ಹಗರಣ ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ.
ನಿನ್ನೆ ಬುಧವಾರ ಗೃಹ ಸಚಿವ ಪ್ರಿಯಾಂಕ್ ಖರ್ಗೆ , ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸುತ್ತಿದ್ದು, ತನಿಖೆಯ ವೇಳೆ ಬಿಜೆಪಿ ನಾಯಕರ ಹೆಸರುಗಳೂ ಹೊರಬರುವ ಸಾಧ್ಯತೆ ಇದೆ ಎಂದು ಹೇಳಿದರು.
ವಿಶೇಷ ತನಿಖಾ ದಳ (SIT) ಮೇ 20ರಂದು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ. ಇದರಲ್ಲಿ ನಲಪಾಡ್, ಸರಣಿ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಹಾಗೂ ರಾಬಿನ್ ಖಂಡೇಲ್ವಾಲ್ ಅವರನ್ನು ಆರೋಪಿಗಳಾಗಿ ಹೆಸರಿಸಲಾಗಿದೆ. ಆದರೆ ಈ ಆರೋಪಪಟ್ಟಿಗೆ ಇನ್ನೂ ಕ್ರಿಮಿನಲ್ ಪ್ರಕರಣ ಸಂಖ್ಯೆ (ಸಿಸಿಎನ್) ಹಂಚಿಕೆ ಆಗಿಲ್ಲ.
ಎಸ್ಐಟಿ ವರದಿಯ ಪ್ರಕಾರ, ಶ್ರೀಕಿ ಕಳವು ಮಾಡಿದ್ದ ಎನ್ನಲಾದ ಸುಮಾರು 60 ಬಿಟ್ಕಾಯಿನ್ಗಳ ಪ್ರಮುಖ ಫಲಾನುಭವಿಗಳಲ್ಲಿ ನಲಪಾಡ್ ಒಬ್ಬರಾಗಿದ್ದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಜಾರಿ ನಿರ್ದೇಶನಾಲಯ (ED) ನಲಪಾಡ್ ಅವರಿಗೆ ಸಮನ್ಸ್ ನೀಡಿದೆ. ಅವರು ಇಂದು ಅಥವಾ ಇನ್ನೊಂದು ದಿನ ವಿಚಾರಣೆಗೆ ಹಾಜರಾಗಬಹುದು. ಇಲ್ಲದಿದ್ದರೆ ಕಾನೂನಿನ ಪ್ರಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಬಿಜೆಪಿ ನಾಯಕರನ್ನು ಒಳಗೊಂಡಂತೆ ಇನ್ನೂ ಹಲವರ ಹೆಸರುಗಳು ಹೊರಬರುವ ಸಾಧ್ಯತೆ ಇದೆ. ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿದ್ದಾರೆ. ಆದರೆ ಕೇಂದ್ರ ತನಿಖಾ ಸಂಸ್ಥೆಗಳು ಕೆಲವರನ್ನೇ ಗುರಿಯಾಗಿಸಿಕೊಂಡಿವೆ. ತಪ್ಪು ಮಾಡಿದವರು ಯಾರು ಆಗಿದ್ದರೂ ಶಿಕ್ಷೆಗೆ ಒಳಗಾಗಬೇಕು ಎಂದು ಹೇಳಿದರು.
ಈ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ED) ನಲಪಾಡ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಮೂರನೇ ಬಾರಿಗೆ ಸಮನ್ಸ್ ನೀಡಿದೆ. ಆದರೆ ಅವರು ಇದುವರೆಗೆ ಹಾಜರಾಗಿಲ್ಲ.
ಇತ್ತೀಚೆಗೆ ಇಡಿ ಅಧಿಕಾರಿಗಳು ನಲಪಾಡ್ ಅವರ ನಿವಾಸದ ಮೇಲೆ ಶೋಧ ಕಾರ್ಯಾಚರಣೆ ನಡೆಸಿದ್ದರು. ಹಗರಣದ ಪ್ರಮುಖ ಆರೋಪಿ ಶ್ರೀಕಿ, ರಾಬಿನ್ ಖಂಡೇಲ್ವಾಲ್ ಹಾಗೂ ಸುನೀಶ್ ಹೆಗ್ಡೆ ಅವರನ್ನು ಕಳೆದ ತಿಂಗಳು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.