ಬೆಂಗಳೂರು: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಅವರು ಹೊಸದಾಗಿ ಜಾರಿಯಾಗಲಿರುವ ವಿಕಸಿತ ಭಾರತ ಗ್ರಾಮ ಜೀವನ ಮಿಷನ್ (VBGJM) ಯೋಜನೆಯಡಿ ಕೂಲಿ ವೆಚ್ಚದ ಹಂಚಿಕೆ ಅನುಪಾತವನ್ನು ಕನಿಷ್ಠ 80:20ಕ್ಕೆ ಹೆಚ್ಚಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಪ್ರಸ್ತುತ ಕೇಂದ್ರವು 60:40 ಅನುಪಾತವನ್ನು ಪ್ರಸ್ತಾಪಿಸಿದ್ದು, ಇದು ರಾಜ್ಯ ಸರ್ಕಾರಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಉಂಟುಮಾಡಲಿದೆ ಎಂದು ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಖಂಡ್ರೆ, 2006ರಲ್ಲಿ ಯುಪಿಎ ಸರ್ಕಾರ ಜಾರಿಗೆ ತಂದ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ(MNREGA) ಯೋಜನೆಯಡಿ ಕೂಲಿ ವೆಚ್ಚದ ಶೇ.90ರಷ್ಟನ್ನು ಕೇಂದ್ರ ಸರ್ಕಾರವೇ ಭರಿಸುತ್ತಿತ್ತು ಮತ್ತು ರಾಜ್ಯಗಳ ಪಾಲು ಕೇವಲ ಶೇ.10ರಷ್ಟಿತ್ತು.
ಆದರೆ ಜುಲೈ 1ರಿಂದ ಜಾರಿಯಾಗಲಿರುವ ಹೊಸ ವಿಬಿಜಿಜೆಎಂ ಯೋಜನೆಯಲ್ಲಿ ಕೇಂದ್ರವು 60:40 ಅನುಪಾತವನ್ನು ಪ್ರಸ್ತಾಪಿಸಿರುವುದು ರಾಜ್ಯಗಳ ಮೇಲೆ ಹೆಚ್ಚುವರಿ ಹೊರೆ ಉಂಟುಮಾಡಲಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರವು ಹಿಂದಿನ 90:10 ಅನುಪಾತವನ್ನೇ ಮುಂದುವರಿಸಬೇಕು. ಇಲ್ಲವಾದರೆ ಕನಿಷ್ಠ 80:20 ಅನುಪಾತವನ್ನು ಜಾರಿಗೆ ತರಬೇಕು ಎಂದು ಖಂಡ್ರೆ ಒತ್ತಾಯಿಸಿದರು.
ಇದಲ್ಲದೆ, ವರ್ಷಕ್ಕೆ 60 ದಿನಗಳ ಕಾಲ ಉದ್ಯೋಗ ನೀಡದಿರುವ ಪ್ರಸ್ತಾವನೆಯನ್ನೂ ಅವರು ಟೀಕಿಸಿದರು. ಇದು ಸಮಂಜಸವೂ ಅಲ್ಲ, ನ್ಯಾಯಸಮ್ಮತವೂ ಅಲ್ಲ ಎಂದು ಹೇಳಿದರು.
ಕೃಷಿ ಕ್ಷೇತ್ರದಲ್ಲಿ ಯಾಂತ್ರೀಕರಣ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳ ಕಾರ್ಮಿಕರಿಗೆ ಉದ್ಯೋಗ ಸಿಗುವುದು ಕಷ್ಟವಾಗುತ್ತಿದೆ. ತಮ್ಮ ಜೀವನೋಪಾಯಕ್ಕಾಗಿ ಅವರು ಇಂತಹ ಉದ್ಯೋಗ ಖಾತರಿ ಯೋಜನೆಗಳನ್ನೇ ಅವಲಂಬಿಸಿದ್ದಾರೆ ಎಂದು ಖಂಡ್ರೆ ಹೇಳಿದರು.
ಈ ವಿಷಯಗಳ ಕುರಿತು ಜೂನ್ 28 ಮತ್ತು 29ರಂದು ನಡೆಯಲಿರುವ ರಾಜ್ಯಗಳ ಗ್ರಾಮೀಣಾಭಿವೃದ್ಧಿ ಸಚಿವರ ಸಭೆಯಲ್ಲಿ ಪ್ರಸ್ತಾಪಿಸುವುದಾಗಿ ಅವರು ತಿಳಿಸಿದರು. ಈ ಸಭೆಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅಧ್ಯಕ್ಷತೆ ವಹಿಸಲಿದ್ದಾರೆ.
ಹೊಸ ಯೋಜನೆಯಡಿ ರಾಜ್ಯಗಳನ್ನು ನಿರ್ದಿಷ್ಟ ರೀತಿಯ ಕಾಮಗಾರಿಗಳಿಗೆ ಮಾತ್ರ ಸೀಮಿತಗೊಳಿಸಬಾರದು. ಕಾಮಗಾರಿಗಳ ಆಯ್ಕೆಯಲ್ಲಿ ರಾಜ್ಯಗಳಿಗೆ ಹೆಚ್ಚಿನ ಸ್ವಾಯತ್ತತೆ ನೀಡಬೇಕು ಎಂದು ಖಂಡ್ರೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.