ದಾವಣಗೆರೆ: ಶ್ರೀರಾಮ ಜನ್ಮದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ವಿವಾದಾತ್ಮಕ ಪ್ರೊ. ಕೆಎಸ್ ಭಗವಾನ್ (KS Bhagavan) ವಿರುದ್ಧ ದಾವಣಗೆರೆ (davanagere) ಜಿಲ್ಲೆಯ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಲಗಳ ಪ್ರಕಾರ ಇದೇ ಜೂನ್ 9 ರಂದು ಹರಿಹರದ ‘ಪ್ರೊ. ಬಿ. ಕೃಷ್ಣಪ್ಪ ಮೈತ್ರಿವನ’ದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪ್ರೊ. ಕೆ.ಎಸ್. ಭಗವಾನ್, ಶ್ರೀರಾಮನ ಜನನದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದರು.
“ನೀವು ಪೂಜೆ ಮಾಡುವ ಶ್ರೀರಾಮ ತನ್ನ ತಂದೆಗೆ ಹುಟ್ಟಿದವನಲ್ಲ. ರಾಜ ದಶರಥ ಪುತ್ರಕಾಮೇಷ್ಟಿ ಯಾಗ ಮಾಡಿದಾಗ, ರಾಣಿ ಪುರೋಹಿತರ ಜೊತೆ ರಾತ್ರಿ ಮಲಗಬೇಕಿತ್ತು. ರಾಣಿ ಪುರೋಹಿತರೊಂದಿಗೆ ರಾತ್ರಿ ಕಳೆದಿದ್ದಾಳೆ ಎಂದರೆ ಅರ್ಥ ಮಾಡಿಕೊಳ್ಳಿ, ನಿಮ್ಮ ದೇವರು ಅಪ್ಪನಿಗೆ ಹುಟ್ಟಿದ ಮಗ ಅಲ್ಲ”. ಹೀಗೆ ವಿವಾದಾತ್ಮಕವಾಗಿ ಮಾತನಾಡಿದ್ದರು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ದೂರು ದಾಖಲು
ಇದೇ ಹೇಳಿಕೆ ಹಿಂದೂ ಧಾರ್ಮಿಕ ಭಾವನೆಗಳಿಗೆ ತೀವ್ರ ಧಕ್ಕೆ ತಂದಿದೆ ಎಂದು ಆರೋಪಿಸಿ, ಹಿಂದೂ ಜಾಗರಣ ವೇದಿಕೆಯ ಹರಿಹರ ತಾಲೂಕು ಪ್ರಧಾನ ಕಾರ್ಯದರ್ಶಿ ದಿನೇಶ್ ದೂರು ನೀಡಿದ್ದಾರೆ. ಈ ಸಂಬಂಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಿಂದೂ ಸಂಘಟನೆಯ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಸದ್ಯ ಹರಿಹರ ಗ್ರಾಮಾಂತರ ಪೊಲೀಸರು ಪ್ರೊ. ಕೆ.ಎಸ್. ಭಗವಾನ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಲಂ 196(1)(a) ಮತ್ತು 299ರ ಅನ್ವಯ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಮಾಜಿ ಸಂಸದ ವಿಎಸ್ ಉಗ್ರಪ್ಪ ಕೂಡ ಕೆಂಡಾಮಂಡಲ
ಇನ್ನು ಈ ವಿಚಾರವಾಗಿ ಮಾಜಿ ಸಂಸದ ವಿಎಸ್ ಉಗ್ರಪ್ಪ ಕೆಂಡಾಮಂಡಲರಾಗಿದ್ದು, ಬಾಗಲಕೋಟೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ಭಗವಾನ್ ವಯಸ್ಸಿನ ಕಾರಣವೊ, ತಿಕ್ಕಲುತನವೊ ಗೊತ್ತಿಲ್ಲ. ಏನೇನೋ ಬಾಯಿಗೆ ಬಂದ ಹಾಗೆ ಮಾತನಾಡುತ್ತಾನೆ. ಅವರನ್ನು ನಾನು ಅನೇಕ ಸಾರಿ ಇಗ್ನೋರ್ ಮಾಡಬೇಕು ಅಂತಿದ್ದೆ. ಆದರೆ ಮಹರ್ಷಿ ವಾಲ್ಮೀಕಿ ರಾಮಾಯಣ ಬಗ್ಗೆ ಕೆಟ್ಟ ರೀತಿ ಮಾತಾಡಿದ್ದಾನೆ. ಇವರಿಗೆ ರಾಮಾಯಣದ ಬಗ್ಗೆ ಅರಿವು ಇಲ್ಲ. ಭಗವಾನ್ ಅಂತ ಹೆಸರು ಇಟ್ಟುಕೊಂಡು ಮನಸೋ ಇಚ್ಛೆ ಮಾತಾಡುತ್ತಾನೆ ಎಂದು ವಾಗ್ದಾಳಿ ಮಾಡಿದ್ದಾರೆ.
ಗಾಂಧೀಜಿ ಬಯಸಿದ್ದು ಗಾಂಧಿ ರಾಜ್ಯವಲ್ಲ, ರಾಮರಾಜ್ಯ. ಗಾಂಧಿಗಿಂತ ದೊಡ್ಡ ಮನುಷ್ಯನಾ ನೀನು? ಸೋ ಕಾಲ್ಡ್ ಇಂಟಲೆಕ್ಚುವಲ್ ಅಂತ ತೋರಿಸಿಕೊಳ್ಳುತ್ತಿರುವ ಭಗವಾನ್ ಈ ರೀತಿ ಮಾತಾಡಬಾರದು. ವಾಲ್ಮೀಕಿ ಸಮಾಜದ ಮೇಲೆ ಸಿಟ್ಟಿದ್ದರೆ ಈ ರೀತಿ ಮಾತನಾಡುವುದು ಶೋಭೆ ತರುವುದಿಲ್ಲ. ನಮ ಭಾವನೆಗೆ ಧಕ್ಕೆ ಮಾಡಿದ್ದೀರಿ ಈ ದೇಶದ ಜನರ ಬಳಿ ಕ್ಷಮೆ ಕೇಳಬೇಕು ಎಂದು ಉಗ್ರಪ್ಪ ಆಗ್ರಹಿಸಿದ್ದಾರೆ.