ಆರ್ಎಸ್ಎಸ್ ತನ್ನನ್ನು ಅಧಿಕೃತವಾಗಿ ನೋಂದಾಯಿಸಿಕೊಳ್ಳಬೇಕು, ತನ್ನ ಕಾನೂನುಬದ್ಧ ಸ್ಥಾನಮಾನವನ್ನು ಸ್ಪಷ್ಟಪಡಿಸಬೇಕು ಹಾಗೂ ತನ್ನ ನಿಧಿಗಳ ಮೂಲಗಳು, ಆದಾಯ, ವೆಚ್ಚ ಮತ್ತು ಆಸ್ತಿಗಳ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿದ್ದಾರೆ. ಪಾರದರ್ಶಕತೆ ಮತ್ತು ಸಂವಿಧಾನಾತ್ಮಕ ಜವಾಬ್ದಾರಿಯನ್ನು ಅದು ಪಾಲಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಆರ್ಎಸ್ಎಸ್ ತನ್ನ ಅಸ್ತಿತ್ವದ 100 ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಸಂದರ್ಭದಲ್ಲಿ, ಸಚಿವರು ಆರ್ಎಸ್ಎಸ್ ಮುಖ್ಯಸ್ಥರಾದ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದು ಸಂಸ್ಥೆಯ ಸಂಘಟನಾ ಸ್ಥಾನಮಾನದ ಕುರಿತು ಸ್ಪಷ್ಟನೆ ಕೋರಿದ್ದಾರೆ.
ನನ್ನ ನಿಲುವು ಸ್ಪಷ್ಟವಾಗಿದೆ
‘X’ ಸಾಮಾಜಿಕ ಜಾಲತಾಣದಲ್ಲಿ ಮೋಹನ್ ಭಾಗವತ್ ಅವರಿಗೆ ಬರೆದ ಪತ್ರವನ್ನು ಹಂಚಿಕೊಂಡ ಪ್ರಿಯಾಂಕ್ ಖರ್ಗೆ, ಭಾರತ ಹಾಗೂ ವಿದೇಶಗಳಲ್ಲಿ 60,000 ಕ್ಕೂ ಹೆಚ್ಚು ಶಾಖೆಗಳು ಮತ್ತು ಕೋಟ್ಯಂತರ ಸ್ವಯಂಸೇವಕರನ್ನು ಹೊಂದಿರುವುದಾಗಿ ಹೇಳಿಕೊಳ್ಳುವ ಸಂಸ್ಥೆಯು ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ಸಂವಿಧಾನಬದ್ಧ ಅನುಸರಣೆಯನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಆರ್ಎಸ್ಎಸ್ನ ಶತಮಾನೋತ್ಸವವು ಕೇವಲ ಸಂಭ್ರಮಾಚರಣೆಗೆ ಸೀಮಿತವಾಗದೆ, ಸಂವಿಧಾನಾತ್ಮಕ ಆತ್ಮಾವಲೋಕನಕ್ಕೂ ಅವಕಾಶವಾಗಬೇಕು ಎಂದು ಕರೆ ನೀಡಿದ ಅವರು, “ತನ್ನ 100ನೇ ವರ್ಷದಲ್ಲಿ ಭಾರತಕ್ಕೆ ಸಲ್ಲಿಸಬಹುದಾದ ಅತ್ಯುತ್ತಮ ಗೌರವವೆಂದರೆ ತನ್ನನ್ನು ನೋಂದಾಯಿಸಿಕೊಳ್ಳುವುದು, ತನ್ನ ಚಟುವಟಿಕೆಗಳು ಮತ್ತು ಹಣಕಾಸಿನ ವಿವರಗಳನ್ನು ಬಹಿರಂಗಪಡಿಸುವುದು, ಅನ್ವಯವಾಗುವ ಎಲ್ಲ ತೆರಿಗೆಗಳನ್ನು ಪಾವತಿಸುವುದು ಹಾಗೂ ಭಾರತೀಯ ಕಾನೂನು ಚೌಕಟ್ಟಿನೊಳಗೆ ಪಾರದರ್ಶಕ ಮತ್ತು ಉತ್ತರದಾಯಿ ಸಂಸ್ಥೆಯಾಗಿ ಕಾರ್ಯನಿರ್ವಹಿಸುವುದಾಗಿದೆ” ಎಂದು ಹೇಳಿದರು.
ನನ್ನ ನಿಲುವು ಸ್ಪಷ್ಟವಾಗಿದೆ, ಮೋಹನ್ ಭಾಗವತ್ ಮತ್ತು ಆರ್ ಎಸ್ ಎಸ್ ನವರು ನನ್ನ ಪತ್ರಕ್ಕೆ ಉತ್ತರ ಕೊಡಲಿ. ಅವರಿಗೆ ಏಕೆ ಪತ್ರ ಬರೆದೆ, ನಾನು ಏನು ಕೇಳುತ್ತಿದ್ದೇನೆ ಎಂದು ನಾನೇಕೆ ಉತ್ತರಿಸಲಿ ಎಂದು ಪ್ರಿಯಾಂಕ್ ಖರ್ಗೆ ಕೇಳಿದ್ದಾರೆ.
ಪ್ರಿಯಾಂಕ್ ಖರ್ಗೆ ವಾದವೇನು?
ಆರ್ಎಸ್ಎಸ್ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ಅಥವಾ ಇತರ ಯಾವುದೇ ಕಾನೂನುಬದ್ಧ ಚಟುವಟಿಕೆಗಳನ್ನು ನಡೆಸುವುದಕ್ಕೆ ಯಾವುದೇ ತಡೆಯಿಲ್ಲ. ಅದು ಬಯಸಿದರೆ ಶಾಲೆಗಳು, ಸೇವಾ ಸಂಸ್ಥೆಗಳು, ಚಿಂತನಾ ಕೇಂದ್ರಗಳು (ಥಿಂಕ್ ಟ್ಯಾಂಕ್ಗಳು) ಅಥವಾ ಸಂಗೀತ ಅಕಾಡೆಮಿಯನ್ನೂ ನಡೆಸಬಹುದು. ನಮ್ಮ ನಿರೀಕ್ಷೆಯೆಂದರೆ, ಈ ದೇಶದ ಇತರ ಎಲ್ಲಾ ಸಂಘಟಿತ ಸಂಸ್ಥೆಗಳಂತೆ ಅದು ಪಾರದರ್ಶಕವಾಗಿ ಹಾಗೂ ಕಾನೂನಿನ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಬೇಕು. ಇದೇ ತತ್ವದ ಆಧಾರದ ಮೇಲೆ ಲಿಖಿತ ರೂಪದಲ್ಲಿ ಅಧಿಕೃತ ಉತ್ತರವನ್ನು ಕೋರಲಾಗಿದೆ ಎಂದು ಸಚಿವರು ಹೇಳಿದರು.
ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತಮ್ಮ ಪ್ರಶ್ನೆಗಳಿಗೆ ಉತ್ತರಿಸುವ ಅಗತ್ಯವಿಲ್ಲ ಎಂದು ಹೇಳಿರುವ ಮಾತು ಅತ್ಯಂತ ಕಳವಳಕಾರಿ ಎಂದರು. ಎಲ್ಲಕ್ಕಿಂತ ಮುಖ್ಯವಾಗಿ, ಆರ್ಎಸ್ಎಸ್ಗೆ ಯಾವುದೇ ಪ್ರಶ್ನೆಗಳಿಗೆ ಉತ್ತರಿಸುವ ಬಾಧ್ಯತೆ ಇಲ್ಲ ಎಂಬ ಮೋಹನ್ ಭಾಗವತ್ ಅವರ ತಕ್ಷಣದ ಪ್ರತಿಕ್ರಿಯೆಯೇ ಅತ್ಯಂತ ಕಳವಳಕಾರಿ (ಆದರೆ ಅವರು ತೆರಿಗೆದಾರರ ಹಣದಲ್ಲಿ ದೊರೆಯುವ ಎಲ್ಲಾ ಅಧಿಕೃತ ಸೌಲಭ್ಯಗಳನ್ನು ಅನುಭವಿಸುತ್ತಾರೆ).
ಇದು ಸಾರ್ವಜನಿಕ ಉತ್ತರದಾಯಿತ್ವ ಐಚ್ಛಿಕ ಎಂಬ ಹಾಗೂ ಸಂಸ್ಥೆಯು ಕಾನೂನು ಪರಿಶೀಲನೆಗಿಂತ ಮೇಲಿರುವಂತೆ ಭಾವಿಸುವ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಸಂವಿಧಾನಬದ್ಧ ಪ್ರಜಾಪ್ರಭುತ್ವದಲ್ಲಿ, ಎಷ್ಟೇ ಹಳೆಯದಾಗಲಿ ಅಥವಾ ಪ್ರಭಾವಶಾಲಿಯಾಗಿರಲಿ, ಯಾವುದೇ ಸಂಸ್ಥೆಗೆ ಅಂತಹ ವಿಶೇಷಾಧಿಕಾರ ಇರುವುದಿಲ್ಲ ಎಂದು ಅವರು ಹೇಳಿದರು.
ಕಾನೂನು ಸಂಬಂಧಿತ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸುವಂತೆ ಆರ್ಎಸ್ಎಸ್ ನಾಯಕತ್ವಕ್ಕೆ ಸವಾಲು ಹಾಕಿದರು. “ಅಹಂಕಾರವನ್ನು ಬಿಟ್ಟು, ಕಾನೂನನ್ನು ಪಾಲಿಸಿ. ನಿಮ್ಮ ‘ಪದಾಧಿಕಾರಿಗಳು’ ಅಥವಾ ‘ಕಾನೂನು ಮುಖ್ಯಸ್ಥರು’ ಬಂದು ನನಗೆ ವಿವರಣೆ ನೀಡಲಿ. ಜಯ ಸಂವಿಧಾನ. ಜಯ ಹಿಂದೂ,” ಎಂದು ಹೇಳಿದರು.