ಬೆಂಗಳೂರು: ಬೆಂಗಳೂರಿಗರಿಗೆ ಹುಷಾರ್ ! ಇನ್ಮುಂದೆ ಎಲ್ಲೆಂದರೆ ಹಾಕುವಂತಿಲ್ಲ. ಹಾಕಿದರೆ ದುಪ್ಪಟ್ಟು ದಂಡ ಬೀಳಲಿದೆ. ಅಷ್ಟೇ ಅಲ್ಲದೇ ಕಸ ಸುರಿದವರಿಂದಲೇ ತೆರವುಗೊಳಿಸಲಾಗುತ್ತದೆ.
ಹೌದು. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಜಿಬಿಎ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿತ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಜನ ರಸ್ತೆಯಲ್ಲಿ ಕಸ ಎಸೆಯುವುದು ಕಂಡರೆ ದುಪ್ಪಟ್ಟು ದಂಡ ಹಾಕಿ ಅವರಿಂದಲೇ ಶುಚಿಗೊಳಿಸುವಂತಾಗಬೇಕು. ಜನ ಕಸ ಎಸೆಯುವ ರಸ್ತೆಗಳಲ್ಲಿ ಮಾರ್ಷಲ್ ಗಳ ಬೀಟ್ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ.
ಹಸಿ ತ್ಯಾಜ್ಯಗಳನ್ನು ಎರೆಗೊಬ್ಬರವನ್ನಾಗಿ ಪರಿವರ್ತಿಸಬೇಕು. ಟೆರೆಸ್ ಗಾರ್ಡನಿಂಗ್ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಅವರ ಮನೆ ಕಸವನ್ನು ಅವರೇ ಕಾಂಪೋಸ್ಟ್ ಗೊಬ್ಬರವನ್ನಾಗಿಸಿಕೊಳ್ಳಲು ಅರಿವು ಕಾರ್ಯಕ್ರಮ ನಡೆಸಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಕಸದ ಗಾಡಿಗಳು ನಗರದ ಪ್ರತಿ ಮನೆಯನ್ನೂ ತಲುಪುವಂತೆ ನೋಡಿಕೊಳ್ಳಬೇಕು. ಜನರಿಂದ ಹಸಿಕಸ ಒಣಕಸವನ್ನು ಕಡ್ಡಾಯವಾಗಿ ಬೇರ್ಪಡಿಸಿಯೇ ಪಡೆಯಬೇಕು. ಬೇರ್ಪಡಿಸಿದ ಕಸವನ್ನೇ ಕಸ ವಿಲೇವಾರಿ ಘಟಕಕ್ಕೆ ತಲುಪಿಸಬೇಕು ಎಂಬ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ.
ಅಲ್ಲದೇ ಮುಖ್ಯ ರಸ್ತೆಗಳಲ್ಲಿ ಇರುವ ಕಸ, ಕಟ್ಟಡ ಅವಶೇಷಗಳು (ಡೆಬ್ರಿಸ್) ಹಾಗೂ ಕಳೆಗಳನ್ನು ವಿಶೇಷ ಅಭಿಯಾನದಡಿ ಒಂದು ಬಾರಿ ಸಂಪೂರ್ಣವಾಗಿ ತೆರವುಗೊಳಿಸುವ ನಿರ್ಣಯವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ಬೆಳಗ್ಗೆಯಿಂದ ಮುಖ್ಯ ಆಯುಕ್ತರು, ಐದು ಪಾಲಿಕೆಗಳ ಆಯುಕ್ತರು ಸೇರಿ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ. ಕಸ ನಿರ್ವಹಣೆ ಹಾಗೂ ಕಸ ಸಂಗ್ರಹಣೆ ಕುರಿತಾಗಿ ಚರ್ಚಿಸಲಾಗಿದೆ. ಸಿಎಂ ನಿರ್ದೇಶನದ ಪ್ರಕಾರ ಸಭೆ ನಡೆಸಲಾಗಿದೆ ಎಂದು ತಿಳಿಸಿದರು.
ನಗರದಲ್ಲಿ ರಸ್ತೆಗಳ ಸುಧಾರಣೆ ಮಾಡ್ಬೇಕಿದೆ. ಕಸ ನಿರ್ವಹಣೆ ಬಗ್ಗೆ ಹೆಚ್ಚು ಚರ್ಚೆ ಮಾಡಲಾಗಿದೆ. ಸಮಸ್ಯೆ ಬಗ್ಗೆ ಪ್ರತಿನಿತ್ಯ ಚರ್ಚೆ ಆಗ್ತಿದೆ. ಬೆಂಗಳೂರಿನಲ್ಲಿ 33 ಪ್ಯಾಕೇಜ್ ಮಾಡಲಾಗಿದೆ, 33 ಟೆಂಡರ್ ಕರೆಯಲಾಗಿದ್ದು, ಕೆಲವರದ್ದು ಕೋರ್ಟ್ನಲ್ಲಿದೆ, ಹೀಗಾಗಿ ಇದೀಗ ಹಾಲಿ ವ್ಯವಸ್ಥೆಯಲ್ಲಿ ಏನೆಲ್ಲಾ ವ್ಯವಸ್ಥೆ ಮಾಡ್ಬೇಕು ಅಂತ ಸೂಚಿಸಲಾಗಿದೆ ಎಂದು ಹೇಳಿದರು.
ಕೆಲ ಸಾರ್ವಜನಿಕರು ಮನೆ ಬಳಿ ಕಾರ್ಪೊರೇಷನ್ ವಾಹನ ಬಂದ್ರೂ ರೋಡಲ್ಲಿ ಕಸ ಬಿಸಾಡುತ್ತಾರೆ. ಹೀಗೆ ಮಾಡಿದ್ರೆ ಕಷ್ಡ, ಬೆಂಗಳೂರಿನ ಆರೋಗ್ಯ ಕೆಡುತ್ತೆ, ಸೌಂದರ್ಯ ಕೂಡಾ ಕೆಡುತ್ತೆ, ಕಸದ ವಾಹನ ಮನೆ ಹತ್ರ ಬರದಿದ್ದಾಗ ದೂರು ಕೊಡಿ, ಬೆಂಗಳೂರು ಸುಧಾರಣೆ ಆಗಬೇಕು, ಬೆಂಗಳೂರು ಸೌಂದರ್ಯ ಸುಧಾರಣೆ ಆಗ್ಬೇಕು, ಆಡಳಿತಕ್ಕೆ ಚುರುಕು ಮುಟ್ಟಿಸ್ತೇವೆ, ಇದ್ರಲ್ಲಿ ಜನ ಸಹಕಾರ ಕೊಡ್ಬೇಕು ಎಂದು ಅವರು ಮನವಿ ಮಾಡಿದರು.
ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ ವಾರ್ಡ್ ರಸ್ತೆಗಳನ್ನು ಸುಧಾರಿಸಿ ಅಭಿವೃದ್ಧಿಪಡಿಸಲು 2000 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದೆ. ಹಾಳಾಗಿರುವ ವಾರ್ಡ್ ರಸ್ತೆಗಳನ್ನು ಗುರುತಿಸಿ ಅಲ್ಪಾವಧಿಯ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲು ಸೂಚನೆ ನೀಡಲಾಗಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ತಿಳಿಸಿದರು.