ಬೆಂಗಳೂರು: ಎರಡು ಸಾವಿರ ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನ ಐದು ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆಗಳ ಮರು ಡಾಂಬರೀಕರಣಕ್ಕೆ ಚಾಲನೆ ನೀಡಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಗುರುವಾರ ಹೇಳಿದ್ದಾರೆ.
ಇಂದು GBA ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬೆಂಗಳೂರಿನ ಐದು ವಲಯ ಆಯುಕ್ತರು ಮತ್ತು ಕಸ ನಿರ್ವಹಣೆ ಇಲಾಖೆಯ ಅಧಿಕಾರಿಗಳ ಜೊತೆಗೆ ಸಭೆ ಮಾಡಿದ್ದೇನೆ. ಬೆಂಗಳೂರಿನಲ್ಲಿ ರಸ್ತೆ ಸುಧಾರಣೆ ಮಾಡಬೇಕು ಅನ್ನೋ ಉದ್ದೇಶವಿದೆ ಎಂದರು.
ಐದು ಮಹಾನಗರ ಪಾಲಿಕೆಯ ಆಂತರಿಕ ರಸ್ತೆಗಳನ್ನು ಸರಿ ಮಾಡಬೇಕು. ಎಲ್ಲೆಲ್ಲಿ ಆಂತರಿಕ ರಸ್ತೆಗಳು ಹಾಳಾಗಿದೆಯೋ ಅವುಗಳನ್ನ ಸರಿ ಮಾಡಲು ವಿಶೇಷವಾಗಿ 2000 ಕೋಟಿ ರೂ. ವೆಚ್ಚದಲ್ಲಿ ಮರು ಡಾಂಬರೀಕರಣಕ್ಕೆ ಚಾಲನೆ ನೀಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಆದೇಶವನ್ನ ಹೊರಡಿಸಿದೆ. ಮೊದಲು ಹದಗೆಟ್ಟಿರೋ ರಸ್ತೆಯನ್ನು ಗುರುತಿಸಿ, ನಂತರ ಅದಕ್ಕೆ ತಗಲುವ ವೆಚ್ಚವನ್ನ ಅಂದಾಜಿಸಬೇಕು. ಬಳಿಕ ಅಲ್ಪಾವಧಿ ಟೆಂಡರ್ ನೀಡಬೇಕು. ಶೀಘ್ರದಲ್ಲೇ ಕಾಮಗಾರಿ ಮಾಡಬೇಕು ಎಂದರು.
ರಸ್ತೆಗೆ ಕಸ ತಂದು ಹಾಕೋದನ್ನು ನಿಲ್ಲಿಸಬೇಕು
ರಾಜ್ಯ ಸರ್ಕಾರ ವಾರ್ಡ್ ರಸ್ತೆಗಳ ಬಗ್ಗೆ ವಿಶೇಷವಾದ ಅನುದಾನ ನೀಡಿದೆ. ಇದಕ್ಕೆ ಜನರ ಸಹಕಾರ ಬಹಳ ಮುಖ್ಯ. ಜನರು ಸಹಕಾರ ನೀಡಿದ್ರೇ ಕಸದ ಸಮಸ್ಯೆ ಕಡಿಮೆ ಆಗಲಿದೆ. ನಿಮ್ಮ ಮನೆಯ ಬಳಿ ಕಸದ ಗಾಡಿ ಬರದೇ ಇದ್ರೇ ಅದನ್ನ ನಮ್ಮ ಗಮನಕ್ಕೆ ತನ್ನಿ. ಕಸದ ವಾಹನ ಬರುವಂತೆ ಮಾಡೋದು ನಮ್ಮ ಕರ್ತವ್ಯ. ಅದನ್ನು ಮಾಡುತ್ತೇವೆ. ಕಸದ ಗಾಡಿ ಬಂದ್ರು ರಸ್ತೆ ಬದಿಗೆ ಹಾಕಿದ್ರೇ ಬೆಂಗಳೂರಿನ ಆರೋಗ್ಯಕ್ಕೂ ಮಾರಕ. ನಾವು ನಮ್ಮ ಸಿಸ್ಟಮ್ ಅನ್ನು ಬದಲಾವಣೆ ಮಾಡಲು ಸಿದ್ದರಾಗಿದ್ದೇವೆ. ರಸ್ತೆಗೆ ಕಸ ಹಾಕಿದ್ರೇ ಅದನ್ನ ತೆಗೆಯೋದು ಕಷ್ಟ ಸಾಧ್ಯವಾಗಿದೆ. ಹೀಗಾಗಿ ಜನರು ನಮಗೆ ಸಹಕಾರ ಕೊಡಿ. ನಾವು ನಮ್ಮ ಇಲಾಖೆಯ ಸುಧಾರಣೆ ಮಾಡುತ್ತೇವೆ ಎಂದು ಸಚಿವರು ಹೇಳಿದರು.
ಬರೋ ದಿನಗಳಲ್ಲಿ ನಾನು ಕೂಡ ಫೀಲ್ಡ್ಗೆ ಹೋಗುತ್ತೇನೆ. ಆಗ ಕಠಿಣ ಕ್ರಮಗಳನ್ನ ಕೈಗೊಳ್ಳುತ್ತೇವೆ. ಜನರು ಕೂಡ ಕಸವನ್ನು ರಸ್ತೆಗೆ ತಂದು ಹಾಕೋದನ್ನು ನಿಲ್ಲಿಸಬೇಕು. ನಮ್ಮ ಸಿಬ್ಬಂದಿ ಬೆಳಗ್ಗೆ ಹೋಗಿ ಕಸ ತೆಗೆಯುತ್ತಾರೆ. ಮಧ್ಯಾಹ್ನದ ವೇಳೆಗೆ ಮತ್ತೆ ಕಸ ತುಂಬಿರುತ್ತೆ. ಶೇ.10ರಷ್ಟು ಜನ ಕಸವನ್ನು ತಂದು ಹಾಕುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಸಭೆಯಲ್ಲಿ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ನಗರ ಪಾಲಿಕೆ ಆಯುಕ್ತಾದ ರಮೇಶ್ ಡಿ.ಎಸ್, ಪೊಮ್ಮಲ ಸುನೀಲ್ ಕುಮಾರ್, ಜಿ.ಜಗದೀಶ್, ರಮೇಶ್ ಕೆ.ಎನ್, ಡಾ. ರಾಜೇಂದ್ರ ಕೆ.ವಿ, ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಸಿಇಓ ಕರೀಗೌಡ, ಸಿಓಓ ರಮಾಮಣಿ, ಸಿಎಫ್ಓ ರಾಜು, ಸಿಜಿಎಂ ರಾಜೇಶ್, ಡಿಜಿಎಂ, ಎಜಿಎಂಗಳು ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ತಿತರಿದ್ದರು.