ನ್ಯಾಯಾಲಯ (ಸಂಗ್ರಹ ಚಿತ್ರ) online desk
ರಾಜ್ಯ

ಆನೇಕಲ್ ಕೋರ್ಟ್‌ನಲ್ಲಿ ಭದ್ರತಾ ಲೋಪ: 28 ಪ್ರಮುಖ ಕೇಸ್ ಫೈಲ್ಸ್ ನಾಪತ್ತೆ, ಕದ್ದವರು ಯಾರು..?

ನ್ಯಾಯಾಲಯದ ಸಿಬ್ಬಂದಿ ಹಲವು ಬಾರಿ ಹುಡುಕಾಟ ನಡೆಸಿದರೂ ಕಡತಗಳು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ದಾಖಲೆಗಳ ನಿರ್ವಹಣೆಯ ಜವಾಬ್ದಾರಿ ಹೊಂದಿದ್ದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.

ಬೆಂಗಳೂರು: ಬೆಂಗಳೂರಿನ ಹೊರವಲಯದ ಆನೇಕಲ್ ನ್ಯಾಯಾಲಯ ಸಂಕೀರ್ಣದಿಂದ ಸುಮಾರು 28 ಪ್ರಕರಣಗಳ ಕಡತಗಳು ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಕಳ್ಳತನ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಆನೇಕಲ್ ಪಟ್ಟಣದ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ (JMFC) ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಯಾಂಗ ಅಧಿಕಾರಿ ಎಂ. ಮಾರುಸ್ವಾಮಿ (45) ಅವರು ಸೋಮವಾರ ಆನೇಕಲ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ದೂರಿನ ಪ್ರಕಾರ, ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಂಬಂಧಿಸಿದ 11 ಕಡತಗಳು, ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯದ 5 ಕಡತಗಳು ಹಾಗೂ ನಾಲ್ಕನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯದ 12 ಕಡತಗಳು ಸೇರಿ ಒಟ್ಟು 28 ಪ್ರಕರಣಗಳ ದಾಖಲೆಗಳು ನಾಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ನ್ಯಾಯಾಲಯದ ಸಿಬ್ಬಂದಿ ಹಲವು ಬಾರಿ ಹುಡುಕಾಟ ನಡೆಸಿದರೂ ಕಡತಗಳು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ದಾಖಲೆಗಳ ನಿರ್ವಹಣೆಯ ಜವಾಬ್ದಾರಿ ಹೊಂದಿದ್ದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕಳ್ಳತನ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಪ್ರಕರಣ ಹಿನ್ನೆಲೆಯಲ್ಲಿ ಇದೀಗ ನ್ಯಾಯಾಲಯದ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಮತ್ತು ವಕೀಲರನ್ನು ಹೊರತುಪಡಿಸಿ ದಾಖಲೆಗಳನ್ನು ಇರಿಸುವ ವಿಭಾಗಗಳಿಗೆ ಇತರರಿಗೆ ಪ್ರವೇಶ ಸಂಪೂರ್ಣ ನಿಷೇಧಿಸಲಾಗಿದೆ.

ದಾಖಲೆ ಕೊಠಡಿಗಳಿಗೆ ಕೇವಲ ಅಧಿಕೃತ ನ್ಯಾಯಾಂಗ ಸಿಬ್ಬಂದಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಸಾರ್ವಜನಿಕರಿಗೆ ವಿಚಾರಣೆಯ ವೇಳೆ ನ್ಯಾಯಾಲಯದ ಸಭಾಂಗಣದೊಳಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ನ್ಯಾಯಾಲಯಕ್ಕೆ ಕರೆತರಲಾಗುವ ಕೈದಿಗಳಿಗೂ ವಿಚಾರಣೆಯ ಸಮಯದಲ್ಲಿ ಮಾತ್ರ ಪ್ರವೇಶವಿರುತ್ತದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಾಪತ್ತೆಯಾಗಿರುವ ದಾಖಲೆಗಳು ಕ್ರಿಮಿನಲ್ ಪ್ರಕರಣಗಳು, ಖಾಸಗಿ ದೂರು ದಾಖಲಾತಿ (PCR) ಪ್ರಕರಣಗಳು ಹಾಗೂ ಸಿವಿಲ್ ವಿವಾದಗಳಿಗೆ ಸಂಬಂಧಿಸಿದ್ದಾಗಿವೆ.

ಈ ಪ್ರಕರಣದಲ್ಲಿ ಹೊಣೆಗಾರರನ್ನು ಗುರುತಿಸುವುದು ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಯಾಗಿದೆ. ಸ್ವಚ್ಛತಾ ಕಾರ್ಯ ಅಥವಾ ಇತರ ಆಡಳಿತಾತ್ಮಕ ಕೆಲಸಗಳ ವೇಳೆ ಕಡತಗಳು ತಪ್ಪಾಗಿ ಸ್ಥಳಾಂತರಗೊಂಡಿವೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ.

ಸಂಬಂಧಿತ ವಿಭಾಗಗಳ ಜವಾಬ್ದಾರಿ ಹೊಂದಿದ್ದ ನ್ಯಾಯಾಂಗ ಸಿಬ್ಬಂದಿಯನ್ನು ಅಗತ್ಯ ಅನುಮತಿ ಪಡೆದು ವಿಚಾರಣೆ ನಡೆಸಲಾಗುವುದು. ಅಲ್ಲದೆ, ಈ ಪ್ರಕರಣಗಳಿಗೆ ಸಂಬಂಧಿಸಿದ ವಕೀಲರು ಮತ್ತು ದಾವೆದಾರರನ್ನೂ ಪ್ರಶ್ನಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

US-Iran ಒಪ್ಪಂದ ಬೆನ್ನಲ್ಲೇ Hormuzನಲ್ಲಿ ತೈಲ ಸಾಗಣೆ ಪುನರಾರಂಭ: ಲೆಬನಾನ್'ನಲ್ಲಿ ಮುಂದುವರೆದ ಉದ್ವಿಗ್ನತೆ, ಮಧ್ಯಪ್ರಾಚ್ಯ ಶಾಂತಿಗೆ ಕಂಟಕ..!

ಶತ್ರು ಮುಂದೆ ಶರಣಾಗುವ ಪ್ರಶ್ನೆಯೇ ಇಲ್ಲ, ಹತಾಶೆಯಿಂದ ಒಪ್ಪಂದಕ್ಕೆ ಮುಂದಾಗಿದ್ದಾರೆ: ಇರಾನ್‌ ಪರಮೋಚ್ಛ ನಾಯಕ ಮೊಜ್ತಾಬಾ ಖಮೇನಿ

ಪರಿಷತ್ತಿನಲ್ಲಿ ಬಲ ಹೆಚ್ಚಿಸಿಕೊಂಡ ಕಾಂಗ್ರೆಸ್: ಗೋಹತ್ಯೆ ನಿಷೇಧ ಮಸೂದೆ ಪರಿಶೀಲಿಸುವತ್ತ ಸರ್ಕಾರದ ಚಿತ್ತ?

ಧರ್ಮಸ್ಥಳ ಪ್ರಕರಣ ತನಿಖೆ ಚುರುಕು: ನಾಪತ್ತೆಯಾಗಿರುವ 17 ಮಂದಿ DNA ಹೊಂದಾಣಿಕೆ ಪ್ರಕ್ರಿಯೆ ಆರಂಭ..!

ವಿಧಾನ ಪರಿಷತ್ ಚುನಾವಣೆ: ಯಾವುದೇ ತಂತ್ರ ರೂಪಿಸಿಲ್ಲ, ಅಡ್ಡ ಮತದಾನ ಬಗ್ಗೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್