ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಿಂದ ಅವಕಾಶನೂ ಇದೆ, ಅಪಾಯನೂ ಇದೆ, ಮತದಾರರ ಪಟ್ಟಿಯನ್ನು ಹೊಸದಾಗಿ ಮಾಡಲಾಗುತ್ತದೆ, ವಿಶೇಷ ಪರಿಷ್ಕರಣೆಯಲ್ಲಿ ಬಿಎಲ್ ಒಗಳು ನಿಮ್ಮ ಮನೆ ಬಾಗಿಲಿಗೆ ಬಂದು ಫಾರ್ಮ್ ಕೊಟ್ಟಾಗ ಅದನ್ನು ಭರ್ತಿ ಮಾಡಿದರೆ ಮಾತ್ರ ಮತದಾರರಿಗೆ ಮತದಾನ ಹಕ್ಕು ಇರುತ್ತದೆ, ಇಲ್ಲದಿದ್ದರೆ ಮತದಾನ ಹಕ್ಕು ಕಳೆದುಕೊಳ್ಳುತ್ತಾರೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.
ನಿನ್ನೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಶೇಕಡಾ 90ರಷ್ಟು ಮ್ಯಾಪಿಂಗ್ ನಡೆದಿರುವುದು ನಮ್ಮ ಮುಂದೆ ನೆರೆ ರಾಜ್ಯಗಳ ಉದಾಹರಣೆಯಿದೆ. ಮತದಾರರ ಪಟ್ಟಿಯಿಂದ ಹೊರಹೋದರೆ ಸರ್ಕಾರದ ಸವಲತ್ತು, ಹಕ್ಕು ಸಿಗುವುದಿಲ್ಲ, ಅದನ್ನು ರಾಜ್ಯದ ಜನತೆ ಕಳೆದುಕೊಳ್ಳಬೇಡಿ ಎಂದು ಸಲಹೆ ನೀಡಿದರು.
ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ನಿಜವಾದ ಫಲಾನುಭವಿಗಳಿಂದ ಕಿತ್ತುಹಾಕುವುದಿಲ್ಲ. ಬೆಂಗಳೂರು ನಗರದಲ್ಲಿ 20 ಲಕ್ಷಕ್ಕೂ ಹೆಚ್ಚು ಜನ ಹೊರಗಿನವರಿದ್ದಾರೆ. ಅವರ ಮತದಾನ ಇಲ್ಲಿದೆಯೇ, ಅವರ ಊರುಗಳಲ್ಲಿದಿಯೇ ಎಂದು ಪರಿಶೀಲಿಸಬೇಕು, ಇಲ್ಲಿ ಮತದಾನ ಹಕ್ಕು ಇರುವವರಿಗೆ ಆದ್ಯತೆ, ರಕ್ಷಣೆ ನೀಡಬೇಕೆಂಬುದು ನಮ್ಮ ಉದ್ದೇಶ ಎಂದರು.
ಕರ್ನಾಟಕದಲ್ಲಿ ಮತದಾನ ಹಕ್ಕು ಇಲ್ಲದವರಿಗೆ ಸರ್ಕಾರದ ಗ್ಯಾರಂಟಿ ಯೋಜನೆ ಏಕೆ ಕೊಡಬೇಕು, ಒಂದೊಂದು ಮನೆಗೆ ಒಬ್ಬೊಬ್ಬರಿಗೆ ಮಾತ್ರ ಸರ್ಕಾರದ ಗ್ಯಾರಂಟಿ ಸವಲತ್ತು ಸಿಗಬೇಕು ಎಂಬ ಉದ್ದೇಶದಿಂದ ಮತ್ತೆ ಅರ್ಜಿ ಸಲ್ಲಿಸಲು ಹೇಳುತ್ತಿದ್ದೇವೆ ಎಂದರು. ಬಡವರಿಗೆ ನೀಡಿದ ಸವಲತ್ತುಗಳನ್ನು ಪಡೆಯಲು ಮೂಲ ಮತದಾನ ಹಕ್ಕು ಇರಬೇಕು, ಮತದಾನ ಹಕ್ಕು ಕಾಪಾಡಿಕೊಳ್ಳಿ ಎಂದು ಡಿ ಕೆ ಶಿವಕುಮಾರ್ ಸಲಹೆ ನೀಡಿದರು.