ದಾವಣಗೆರೆ: ಪೋಕ್ಸೊ (POCSO) ಪ್ರಕರಣದಲ್ಲಿ ಆರೋಪಿಯಾಗಿರುವ ಹರಿಹರದ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮಿಗೆ ಮಂಜೂರಾಗಿರುವ ನಿರೀಕ್ಷಣಾ ಜಾಮೀನು (Anticipatory Bail) ರದ್ದುಪಡಿಸುವ ಕುರಿತ ಅರ್ಜಿಯ ವಿಚಾರಣೆ ಹೈಕೋರ್ಟ್ನಲ್ಲಿ ಬಾಕಿ ಇರುವ ಹಿನ್ನೆಲೆಯಲ್ಲಿ, ಜಿಲ್ಲಾ ನ್ಯಾಯಾಲಯ ತನ್ನ ತೀರ್ಪಿನ ದಿನಾಂಕವನ್ನು ಜೂನ್ 30ಕ್ಕೆ ಮುಂದೂಡಿದೆ.
ಮೂಲ ವೇಳಾಪಟ್ಟಿಯ ಪ್ರಕಾರ, ಹರಿಹರ ಗ್ರಾಮಾಂತರ ಪೊಲೀಸರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ರದ್ದುಪಡಿಸುವ ಅರ್ಜಿಯ ಕುರಿತು ಜಿಲ್ಲಾ ನ್ಯಾಯಾಲಯ ಜೂನ್ 18ರಂದು ತೀರ್ಪು ಪ್ರಕಟಿಸಬೇಕಿತ್ತು. ಈ ಅರ್ಜಿಯ ವಿಚಾರಣೆ ಜೂನ್ 11ರಂದು ಪೂರ್ಣಗೊಂಡಿತ್ತು.
ವಚನಾನಂದ ಸ್ವಾಮಿ ಪರ ವಕೀಲ ಎಸ್.ವಿ. ಪಾಟೀಲ್ ಮಾತನಾಡಿ, “ಮೇ 2ರಂದು ನ್ಯಾಯಾಲಯ ವಚನಾನಂದ ಸ್ವಾಮಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ನಂತರ ತನಿಖಾಧಿಕಾರಿ ಹಾಗೂ ಸರ್ಕಾರಿ ಅಭಿಯೋಜಕರು ಜೂನ್ 6ರಂದು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿ ಜಾಮೀನು ರದ್ದುಪಡಿಸುವಂತೆ ಕೋರಿದ್ದರು” ಎಂದು ಹೇಳಿದರು.
“ಈ ಅರ್ಜಿಯ ವಿಚಾರಣೆ ಹೈಕೋರ್ಟ್ನಲ್ಲಿ ನಡೆಯುತ್ತಿರುವುದರಿಂದ ವಿಶೇಷ ಪೋಕ್ಸೊ ನ್ಯಾಯಾಲಯದಿಂದ ಯಾವುದೇ ಆದೇಶ ನೀಡುವುದು ಸೂಕ್ತವಲ್ಲ ಎಂದು ಪರಿಗಣಿಸಿ ತೀರ್ಪನ್ನು ಜೂನ್ 30ಕ್ಕೆ ಮುಂದೂಡಲಾಗಿದೆ.
ಇದೇ ವೇಳೆ ಜೂನ್ 23ರಂದು ಹೈಕೋರ್ಟ್ ಮುಂದೆ ಹಾಜರಾಗುವಂತೆ ವಚನಾನಂದ ಸ್ವಾಮಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ, “ಪೋಕ್ಸೊ ಪ್ರಕರಣವು ಸ್ವಾಮೀಜಿಯನ್ನು ಮಠದಿಂದ ಹೊರಹಾಕುವ ಉದ್ದೇಶದಿಂದ ರೂಪಿಸಲಾದ ಸಂಚಿನ ಭಾಗ” ಎಂದು ವಚನಾನಂದ ಸ್ವಾಮಿ ಪರ ವಕೀಲರು ಆರೋಪಿಸಿದ್ದಾರೆ.
ಇತ್ತ, ಪೋಕ್ಸೊ ಸಂತ್ರಸ್ತೆಯ ತಾಯಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಬುಧವಾರ ನಡೆಸಿದ ಕರ್ನಾಟಕ ಹೈಕೋರ್ಟ್, ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಿರುವ ವಿಷಯದ ಬಗ್ಗೆ ಆಘಾತ ವ್ಯಕ್ತಪಡಿಸಿರುವುದಾಗಿ ತಿಳಿದುಬಂದಿದೆ.
ಪ್ರಕರಣದ ಮುಂದಿನ ವಿಚಾರಣೆ ಹಾಗೂ ಜಾಮೀನು ರದ್ದುಪಡಿಸುವ ಅರ್ಜಿಯ ಮೇಲಿನ ಹೈಕೋರ್ಟ್ ತೀರ್ಮಾನ ಇದೀಗ ಎಲ್ಲರ ಗಮನ ಸೆಳೆದಿದೆ.