ಬೆಂಗಳೂರು: ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡು 12 ವರ್ಷಗಳು ಕಳೆದಿವೆ. ಈ ವರೆಗೂ ಒಂದು ಬಾರಿಯೂ ಪತ್ರಿಕಾಗೋಷ್ಠಿ ನಡೆಸದೇ ಇರುವುದಕ್ಕೆ ವಿಪಕ್ಷಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.
ಪ್ರಧಾನಿ ಏಕೆ ಪತ್ರಿಕಾಗೋಷ್ಠಿ ನಡೆಸುವುದಿಲ್ಲ ಎಂಬ ಪ್ರಶ್ನೆಯನ್ನು, ಬೆಂಗಳೂರಿನ ಪ್ರತಿಷ್ಠಿತ ಕಾಲೇಜ್ ಒಂದರಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯೊಬ್ಬರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರಿಗೆ ಕೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಯಾವುದೇ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸದಿರುವ ಬಗ್ಗೆ ನಿಮ್ಮ ನಿಲುವೇನು?" ಅಂತ ವಿದ್ಯಾರ್ಥಿ ಪ್ರಶ್ನಿಸಿದ್ದಾರೆ. ನಾವು ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದರೂ, ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿಗಳು 10 ವರ್ಷಗಳಿಗೂ ಹೆಚ್ಚು ಕಾಲ ಯಾವುದೇ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸದಿರುವ ಬಗ್ಗೆ ನಿಮ್ಮ ನಿಲುವೇನು? ಎಂಬುದು ವಿದ್ಯಾರ್ಥಿಯ ಪ್ರಶ್ನೆಯಾಗಿತ್ತು.
ವಿದ್ಯಾರ್ಥಿ ಪ್ರಶ್ನೆಗೆ ಉತ್ತರಿಸಿದ ಸಂಸದ ತೇಜಸ್ವಿ ಸೂರ್ಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ನೇರ ಸಂವಹನವು ಸಾಂಪ್ರದಾಯಿಕ ಮಾಧ್ಯಮ ಸ್ವರೂಪಗಳ ಪ್ರಸ್ತುತತೆಯನ್ನು ಕಡಿಮೆ ಮಾಡಿದೆ ಎಂದು ಹೇಳಿದ್ದಾರೆ.
ನಾವು 24x7 ಸಾಮಾಜಿಕ ಮಾಧ್ಯಮದ ಯುಗದಲ್ಲಿದ್ದೇವೆ. ನಾನು ನನ್ನ ಮತದಾರರೊಂದಿಗೆ ನೇರವಾಗಿ ಮಾತನಾಡಬಲ್ಲೆ, ಹೀಗಾಗಿ ಪತ್ರಿಕಾಗೋಷ್ಠಿ ಅನಗತ್ಯ ಅಂತ ಹೇಳಿದ್ದಾರೆ.
ಪ್ರಧಾನಿ ಪ್ರತಿದಿನ ಜನತೆಯೊಂದಿಗೆ ಸಂವಹನ ನಡೆಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಸಂವಹನ ನಡೆಸುತ್ತಿಲ್ಲ ಎಂದಲ್ಲ. ಪ್ರಧಾನಿ ಪ್ರತಿದಿನ ಸಂವಹನ ನಡೆಸುತ್ತಾರೆ. ಡಿಜಿಟಲ್ ಮಾಧ್ಯಮ, ಸೋಶಿಯಲ್ ಮಾಧ್ಯಮದ ಮೂಲಕ ಮೋದಿ ಪ್ರತಿಯೊಬ್ಬರನ್ನೂ ತಲುಪುತ್ತಾರೆ. ಪ್ರತಿಯೊಬ್ಬರೊಂದಿಗೂ ಸಂವಹನ ನಡೆಸುತ್ತಾರೆ ಅಂತ ತೇಜಸ್ವಿ ಸೂರ್ಯ ಆ ವಿದ್ಯಾರ್ಥಿ ಪ್ರಶ್ನೆಗೆ ಉತ್ತರಿಸಿದ್ದಾರೆ.
ತೇಜಸ್ವಿ ಸೂರ್ಯ ಹಾಗೂ ಕಾಲೇಜ್ ವಿದ್ಯಾರ್ಥಿ ನಡುವಿನ ಸಂವಾದದ ವಿಡಿಯೋವನ್ನು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾತೆ ಮತ್ತು ಇತರರು ಟ್ವಿಟರ್ ಸೇರಿದಂತೆ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದು ಟೀಕಾ ಪ್ರಹಾರ ನಡೆಸಿದ್ದಾರೆ.