ಬೆಂಗಳೂರು: 20 ಲಕ್ಷ ರೂ. ದರೋಡೆ ಪ್ರಕರಣದಲ್ಲಿ ಬಂಧಿತರಾಗಿರುವ ಸಿಐಡಿ (CID) ಇನ್ಸ್ಪೆಕ್ಟರ್ ಮಹೇಶ್ ಕನಕಗಿರಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ವಿಚಾರಣೆ ವೇಳೆ ತಾನು ದರೋಡೆ ಪ್ರಕರಣದಲ್ಲಿ ಯಾವುದೇ ಪಾತ್ರ ಹೊಂದಿಲ್ಲ ಎಂದು ಅವರು ಪೊಲೀಸರಿಗೆ ತಿಳಿಸಿರುವುದಾಗಿ ಮೂಲಗಳು ತಿಳಿಸಿವೆ.
ಸಿಐಡಿಯ ನರಹತ್ಯೆ ಮತ್ತು ಕಳ್ಳತನ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹೇಶ್ ಕನಕಗಿರಿ ಅವರನ್ನು ರಿಯಲ್ ಎಸ್ಟೇಟ್ ಏಜೆಂಟರಾದ ಕುಪೇಂದ್ರ ರೆಡ್ಡಿ ಹಾಗೂ ವಸಂತ್ ಕುಮಾರ್ ಜೊತೆಗೆ ಶುಕ್ರವಾರ ಬಂಧಿಸಲಾಗಿತ್ತು.
ಕೇರಳ ಮೂಲದ ಮೂವರು ಉದ್ಯಮಿಗಳಿಂದ ಬೆಂಗಳೂರಿನ ಹೋಟೆಲ್ನಲ್ಲಿ 20 ಲಕ್ಷ ರೂ. ದರೋಡೆ ನಡೆಸಿದ ಆರೋಪ ಇವರ ಮೇಲಿದೆ.
ಶನಿವಾರ ಮಹೇಶ್ ಕನಕಗಿರಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ, ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ವಿಚಾರಣೆ ವೇಳೆ, “ನನಗೆ ಕುಪೇಂದ್ರ ರೆಡ್ಡಿ ಪರಿಚಯವಿದ್ದ ಕಾರಣ ಅವರೊಂದಿಗೆ ತೆರಳಿದ್ದೆ. ದರೋಡೆ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಪೊಲೀಸರು ತಿಳಿಸಿದ ಬಳಿಕವೇ ಘಟನೆಯ ಬಗ್ಗೆ ಗೊತ್ತಾಯಿತು,” ಎಂದು ಕನಕಗಿರಿ ಹೇಳಿರುವುದಾಗಿ ತಿಳಿದುಬಂದಿದೆ.
ಇದೇ ವೇಳೆ ತನ್ನ ಪೊಲೀಸ್ ಗುರುತಿನ ಚೀಟಿ ಕಾರಿನ ಡ್ಯಾಶ್ಬೋರ್ಡ್ನಲ್ಲಿ ಇಟ್ಟಿದ್ದು, ಅದನ್ನು ಆರೋಪಿಗಳು ತೆಗೆದುಕೊಂಡು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.
ಆದರೆ, ಉಳಿದ ಇಬ್ಬರು ಆರೋಪಿಗಳು ಮಾತ್ರ ದರೋಡೆ ಕುರಿತು ಇನ್ಸ್ಪೆಕ್ಟರ್ಗೆ ಸಂಪೂರ್ಣ ಮಾಹಿತಿ ಇತ್ತು ಹಾಗೂ ಅವರ ಸೂಚನೆಯ ಮೇರೆಗೆ ಕೃತ್ಯ ಎಸಗಿದ್ದೇವೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಪ್ರಕರಣದ ಸತ್ಯಾಸತ್ಯತೆ ಪತ್ತೆಹಚ್ಚಲು ಪೊಲೀಸರು ಇನ್ಸ್ಪೆಕ್ಟರ್ನ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದು, ಕರೆ ವಿವರಗಳು (Call Records) ಮತ್ತು ಚಾಟ್ಗಳ ಪರಿಶೀಲನೆ ನಡೆಸುತ್ತಿದ್ದಾರೆ. ತನಿಖೆ ಮುಂದುವರಿದಿದ್ದು, ಡಿಜಿಟಲ್ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.