ಬೆಳಗಾವಿ: ಬಾಮೈದುನ ಮೇಲಿನ ಜಾರಿ ನಿರ್ದೇಶನಾಲಯ ದಾಳಿ ನನಗೆ ಅಚ್ಚರಿ ತಂದಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಅಬಕಾರಿ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರ ಮೇಲಿನ ಇಡಿ ದಾಳಿಗೆ ಪ್ರತಿಕ್ರಿಯಿಸಿದ ಅವರು, ಲೋಕಾಯುಕ್ತದಲ್ಲಿ ಅವರ ಮೇಲಿರುವ ಕೇಸ್ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಹಿಂದೆ ಹೈಕೋರ್ಟ್ ಒಂದು ಹಳೆಯ ಕೇಸ್ ಅನ್ನು ರದ್ದು ಮಾಡಿತ್ತು. ಹೀಗಿರುವಾಗ ಭ್ರಷ್ಟಾಚಾರದ ಆರೋಪದ ಮೇಲೆ ಇಡಿ ದಾಳಿ ಮಾಡಿರುವುದು ನನಗೂ ಅಚ್ಚರಿ ಮೂಡಿಸಿದೆ ಎಂದರು.
ಭ್ರಷ್ಟಾಚಾರದ ತನಿಖೆ ನಡೆಸಲು ರಾಜ್ಯ ಸರ್ಕಾರ ಹಾಗೂ ಎಸಿಬಿ/ಲೋಕಾಯುಕ್ತಗಳಿವೆ. ಕೇಂದ್ರ ಸರ್ಕಾರದ ಕೈಯಲ್ಲಿದ್ದರೆ ಸಿಬಿಐನವರು ತನಿಖೆ ಮಾಡಬೇಕಿತ್ತು. ಆದರೆ ಇಡಿ ದಾಳಿ ಮಾಡಿರುವುದರ ಹಿಂದೆ ರಾಜಕೀಯ ಪ್ರೇರಿತ ಸಂಚು ಇದೆಯೇ ಎಂಬುದನ್ನು ಕಾದು ನೋಡಬೇಕಿದೆ. ತನಿಖೆ ಯಾವ ದಿಕ್ಕಿನಲ್ಲಿ ಹೋಗುತ್ತದೆ ಎಂಬುದರ ಮೇಲೆ ಮುಂದಿನ ದಿನಗಳಲ್ಲಿ ಸ್ವರೂಪ ಮತ್ತು ಪರಿಣಾಮ ಗೊತ್ತಾಗಲಿದೆ ಎಂದು ಹೇಳಿದರು.
ಸತೀಶ್ ಜಾರಕಿಹೊಳಿ ಅವರ ಸಂಬಂಧಿ ಎಂಬ ಕಾರಣಕ್ಕೇ ದಾಳಿ ಮಾಡಲಾಗಿದೆಯೇ? ಮತ್ತು ಸಚಿವರ ಪ್ರಭಾವದಿಂದಲೇ ಇಷ್ಟೊಂದು ಆಸ್ತಿ ಸಂಪಾದಿಸಿದ್ದಾರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಆತ ಎಲ್ಲೇ ಇದ್ದರೂ ಒಬ್ಬ ಅಧಿಕಾರಿಯಷ್ಟೇ. ಅವರ ಇಲಾಖೆಯಲ್ಲಿ ನಮ್ಮ ಪ್ರಭಾವ ಏನೂ ಇರುವುದಿಲ್ಲ, ಅದು ಸೀಮಿತ ಪೋಸ್ಟ್ ಎಂದು ಉತ್ತರಿಸಿದ್ದಾರೆ.