ಬೆಂಗಳೂರು: ನದಿಗಳ ಜೋಡಣೆಯು ನೀರಿನ ಕೊರತೆಯ ಸಮಸ್ಯೆಯನ್ನು ಪರಿಹರಿಸಲು ಉತ್ತಮ ಪರಿಹಾರಗಳಲ್ಲಿ ಒಂದಾಗಿದೆ ಎಂದು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಶನಿವಾರ ಅಭಿಪ್ರಾಯಪಟ್ಟರು.
ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ರ 517 ನೇ ಜಯಂತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ಮತ್ತು ತಮಿಳುನಾಡು ನಡುವಿನ ನೀರಿನ ವಿವಾದ ಪರಿಹರಿಸಬೇಕು. ರೈತರಿಗೆ ನೀರನ್ನು ಸಮಾನವಾಗಿ ಹಂಚುವ ಮೂಲಕ ರಾಜ್ಯಗಳ ನಡುವಿನ ನೀರಿನ ವಿವಾದಗಳನ್ನು ಬಗೆಹರಿಸಬೇಕಿದೆ ಎಂದು ಹೇಳಿದರು.
ನಾಡಪ್ರಭು ಕೆಂಪೇಗೌಡರು ಭವಿಷ್ಯದ ದೃಷ್ಟಿಕೋನದಿಂದ ಬೆಂಗಳೂರನ್ನು ನಿರ್ಮಿಸಿದರು. ಕೆಂಪೇಗೌಡರು ತಮ್ಮ ಕಾಲಾವಧಿಯಲ್ಲಿ ಕೆರೆಗಳು ಮತ್ತು ಸರೋವರಗಳನ್ನು ನಿರ್ಮಿಸಿದರು. ಇಂದಿಗೂ ಜನರು ಈ ಕೆರೆಗಳು ಮತ್ತು ಸರೋವರಗಳಿಂದ ನೀರು ಕುಡಿಯುತ್ತಿದ್ದಾರೆ. ಎಲ್ಲಾ ಸಮುದಾಯಗಳಿಗೆ ಪ್ರಾಮುಖ್ಯತೆ ನೀಡಿದ ಕೆಂಪೇಗೌಡರು, ಯಾವುದೇ ಸಮುದಾಯವನ್ನ ವಿಭಜಿಸುವ ಕೆಲಸ ಮಾಡಲಿಲ್ಲ. ಅಂದು ವಿದ್ವಾಂಸರು, ಕುಶಲಕರ್ಮಿಗಳು, ಕಾರ್ಮಿಕರು, ಎಲ್ಲರೂ ಒಟ್ಟಿಗೆ ವಾಸಿಸುತ್ತಿದ್ದರು ಮತ್ತು ಸಮಾಜದಲ್ಲಿ ಸಮಾನ ಅವಕಾಶಗಳನ್ನು ಹೊಂದಿದ್ದರು ಎಂದು ತಿಳಿಸಿದರು.
ಕೆಂಪೇಗೌಡರು ಪರಿಸರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರಿಂದಾಗಿ, 500 ವರ್ಷಗಳ ನಂತರವೂ ಈಗಲೂ ಬೆಂಗಳೂರು ಹಸಿರು ನಗರವಾಗಿದೆ. ಹೆಚ್ಚು ಸುಸಂಸ್ಕೃತ ಸಮಾಜವನ್ನು ನಿರ್ಮಿಸಲು ಅವರು ಶ್ರಮಿಸಿದ್ದರು ಎಂದು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಶ್ಲಾಘಿಸಿದರು.
ಈ ವೇಳೆ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೆಂಪೇಗೌಡರು ಕೇವಲ ರಸ್ತೆಗಳು ಮತ್ತು ಕಟ್ಟಡಗಳನ್ನು ನಿರ್ಮಿಸಲಿಲ್ಲ. ಬದಲಾಗಿ ಸಮಗ್ರ ಸಮಾಜವನ್ನು ನಿರ್ಮಿಸಲು ಅವರು ಶ್ರಮಿಸಿದರು. ವಿಶೇಷವಾಗಿ ನೀರಿನ ಸಂರಕ್ಷಣೆಗೆ ಹಾಗೂ ಪರಿಸರ ಸಂರಕ್ಷಣೆಗೆ ಪ್ರಾಮುಖ್ಯತೆ ನೀಡಿದರು ಎಂದು ಸ್ಮರಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಕೆಂಪೇಗೌಡರ ದೂರದೃಷ್ಟಿಯಿಂದ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಯಲು ಕಾರಣವಾಯಿತು. ಬೆಂಗಳೂರಿನ ವಿವಿಧ ಭಾಗಗಳಲ್ಲಿ ಕೆಂಪೇಗೌಡರು ಕೆರೆಗಳನ್ನು ಕಟ್ಟಿಸಿದರು. ಆದರೆ ಭೂಗಳ್ಳರು ಮತ್ತು ಮನುಷ್ಯನ ಸ್ವಾರ್ಥದಿಂದಾಗಿ ಈಗ ಕೆರೆಗಳು ಕಾಣೆಯಾಗಿ, ಲೇಔಟ್ ಗಳು, ಕಟ್ಟಡಗಳು ನಿರ್ಮಾಣವಾಗಿವೆ. ಇದರಿಂದ ಬೆಂಗಳೂರಿನಲ್ಲಿ ನೀರಿನ ಅಭಾವ ಸೃಷ್ಟಿಯಾಗಲು ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೇಂದ್ರ ಸಚಿವ ವಿ.ಸೋಮಣ್ಣ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.