ಬೆಂಗಳೂರು: ಉದ್ಯಮಿ ಮತ್ತು ಆತನ ಚಾಲಕನನ್ನು ಅಪಹರಿಸಿ 1.09 ಕೋಟಿ ರೂ. ಮೌಲ್ಯದ ನಗದನ್ನು ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೂನ್ 15 ರಂದು ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.
ಐವರ ಬಂಧನದೊಂದಿಗೆ, 85.50 ಲಕ್ಷ ರೂ. ನಗದು, ಅಪರಾಧಕ್ಕೆ ಬಳಸಲಾದ ಆಟಿಕೆ ಪಿಸ್ತೂಲ್, ಮೂರು ಮೊಬೈಲ್ ಫೋನ್ಗಳು ಮತ್ತು ಎರಡು ಕಾರುಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.
ಆರೋಪಿಗಳಲ್ಲಿ ಒಬ್ಬರು ಈ ಹಿಂದೆ ಉದ್ಯಮಿಯ ಚಾಲಕರಾಗಿ ಕೆಲಸ ಮಾಡಿದ್ದರು ಮತ್ತು ದೂರುದಾರರು ಕಂಪನಿಯಲ್ಲಿ ಹೂಡಿಕೆ ಮಾಡಲು ದೊಡ್ಡ ಪ್ರಮಾಣದ ಹಣವನ್ನು ಸಾಗಿಸುತ್ತಿದ್ದಾರೆ ಎಂದು ತನ್ನ ಸಹಚರರಿಗೆ ಮಾಹಿತಿ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಉದ್ಯಮಿ ಶಿವಶಂಕರ್ ಎಂಬವರ ಕಾರನ್ನು ಜೂನ್ 15ರಂದು ಅಡ್ಡಗಟ್ಟಿ, ಅಪಹರಿಸಿ, ಅವರನ್ನು ಬೆದರಿಸಿ 1.09 ಕೋಟಿ ದರೋಡೆ ಮಾಡಿದ್ದ ಆರೋಪದಡಿ ದೂರುದಾರನ ಸ್ನೇಹಿತ ಚೇತನ್, ಚಿಕ್ಕಬಾಣವಾರ ಠಾಣೆ ರೌಡಿಶೀಟರ್ ಸೋಮ, ಕೆ.ಪಿ.ಅಗ್ರಹಾರ ಠಾಣೆಯ ರೌಡಿಶೀಟರ್ ಸೂರ್ಯ, ಸಹಚರರಾದ ವಿನಯ್ ಹಾಗೂ ಬಸವ ಎಂಬವರನ್ನು ಬಂಧಿಸಲಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಚೇತನ್ ಎಂಬಾತ ಕಮ್ಮನಹಳ್ಳಿ ನಿವಾಸಿಯಾಗಿದ್ದು, ಡಿಪ್ಲೋಮಾ ಇಂಜಿನಿಯರ್ ವ್ಯಾಸಂಗ ಮಾಡಿದ್ದ. ಕಳೆದ ಎರಡು ವರ್ಷಗಳಿಂದ ಶಿವಶಂಕರ್ ಬಳಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ರೈಸ್ ಪುಲ್ಲಿಂಗ್ ಸೇರಿದಂತೆ ಇನ್ನಿತರ ವ್ಯವಹಾರಗಳನ್ನು ಶಿವಶಂಕರ್ ಮಾಡುತ್ತಿದ್ದರು. ರೌಡಿಶೀಟರ್ ಸೋಮನಿಗೆ ಚೇತನ್ ಹಲವು ವರ್ಷಗಳಿಂದ ಪರಿಚಯ ಇದ್ದು, ಒಂದೇ ಏರಿಯಾ ನಿವಾಸಿಗಳಾಗಿದ್ದರು. ಮಾಲೀಕ ನಡೆಸುವ ರೈಸ್ ಪುಲ್ಲಿಂಗ್ ಸೇರಿದಂತೆ ಹಣಕಾಸು ವ್ಯವಹಾರಗಳ ಬಗ್ಗೆ ಮಾಹಿತಿ ನೀಡುತ್ತಿದ್ದ. 1.09 ಕೋಟಿ ನಗದು ಇರುವ ಕುರಿತು ರೌಡಿ ಗ್ಯಾಂಗ್ಗೆ ಚೇತನ್ ಮಾಹಿತಿ ನೀಡಿದ್ದಾನೆ. ಇದರಂತೆ ಸಂಚು ರೂಪಿಸಿ ಜೂನ್ 15ರಂದು ಆರೋಪಿಗಳು ಹಣ ದರೋಡೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕೃತ್ಯ ನಡೆದ ಬಳಿಕ ಚೇತನ್, ತಾನು ಏನು ಮಾಡಿಲ್ಲವೆಂಬಂತೆ ಓಡಾಡಿಕೊಂಡಿದ್ದ. ತಲೆಮರೆಸಿಕೊಂಡರೆ ತನ್ನ ಮೇಲೆ ಪೊಲೀಸರಿಗೆ ಅನುಮಾನ ಬರಬಹುದು ಎಂದು ಅಂದುಕೊಂಡಿದ್ದ. ಮತ್ತೊಂದೆಡೆ ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರು ಶೋಧ ನಡೆಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದ್ದರಿಂದ ಆರೋಪಿಗಳು ಪರಾರಿಯಾಗಿದ್ದರು. ತಾಂತ್ರಿಕ ಸುಳಿವು ಆಧರಿಸಿ ಚೇತನ್ನನ್ನು ವಶಕ್ಕ ಪಡೆದು ವಿಚಾರಣೆ ತೀವ್ರಗೊಳಿಸಿದಾಗ ಅಸಲಿ ಕಹಾನಿ ಬಿಚ್ಚಿಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.