ಮಂಗಳೂರು: ಮಂಗಳೂರಿನ ಹೊರವಲಯದಲ್ಲಿ ಸೋಮವಾರ ಬೆಳಗಿನ ಜಾವ ಕೇರಳ ಮೂಲದ ವ್ಯಾಪಾರಿಯೊಬ್ಬರ ಕಾರನ್ನು ಅಡ್ಡಗಟ್ಟಿದ ಗ್ಯಾಂಗ್, ಅವರ ಪತ್ನಿ ಮತ್ತು ಮಗುವನ್ನು ಅಪಹರಿಸಿ, 20 ಲಕ್ಷ ರೂ ನಗದು, ಮತ್ತು ಚಿನ್ನವನ್ನು ದರೋಡೆ ಮಾಡಿ, ಬಳಿಕ ಅವರನ್ನು ಬಿಟ್ಟು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66 ರ ಬೈಕಂಪಾಡಿ ಬಳಿ ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಚಿನ್ನದ ವ್ಯಾಪಾರಿಯನ್ನು ಕೇರಳದ ಪಯ್ಯನೂರಿನ ವಿಕಾಸ್ ಎಂದು ಗುರುತಿಸಲಾಗಿದ್ದು, ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಮದುವೆ ಸಮಾರಂಭದಲ್ಲಿ ಭಾಗವಹಿಸಿ, ತನ್ನ ಕುಟುಂಬದೊಂದಿಗೆ ಮನೆಗೆ ಹಿಂತಿರುಗುತ್ತಿದ್ದರು.
ಉಡುಪಿ ಕಡೆಯಿಂದ ಸ್ವಿಫ್ಟ್ ಕಾರಿನಲ್ಲಿ ಕುಟುಂಬವು ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದಾಗ ಎರಡು ಟೊಯೋಟಾ ಇನ್ನೋವಾ ಕಾರಿನಲ್ಲಿ ಬಂದ ದುಷ್ಕರ್ಮಿಗಳು, ವಿಕಾಸ್ ಅವರ ಸ್ವಿಫ್ಟ್ ಕಾರನ್ನು ಅಡ್ಡಗಟ್ಟಿದೆ ಎಂದು ಆರೋಪಿಸಲಾಗಿದೆ.
ಈ ವೇಳೆ ಕೇರಳದಲ್ಲಿ ನೋಂದಣಿಯಾದ ನಂಬರ್ ಪ್ಲೇಟ್ ಇದ್ದ ಎರಡು ಕಾರು ಹಾಗೂ ಕರ್ನಾಟಕ ರಿಜಿಸ್ಟರ್ ಆದ ಒಂದು ಕಾರಿತ್ತು ಎಂದು ವಿಕಾಸ್ ದೂರಿನಲ್ಲಿ ತಿಳಿಸಿದ್ದಾರೆ.
ಬೈಕಂಪಾಡಿ ಗೇಟ್ ಬಳಿ ಅಪರಿಚಿತ ದುಷ್ಕರ್ಮಿಗಳು ವಾಹನವನ್ನು ನಿಲ್ಲಿಸಿ, ಸ್ವಿಫ್ಟ್ ಕಾರಿನಲ್ಲಿದ್ದ ವಿಕಾಸ್ ರನ್ನು ಹೊರಗೆ ಹಾಕಿ, ಆ ಕಾರನ್ನು ಅಪಹರಿಸಿದ್ದಾರೆ. ಮಗು- ಹಾಗೂ ಪತ್ನಿಗೆ ಕೂಳೂರು ಬಳಿ ಬೆದರಿಕೆ ಒಡ್ಡಿ, ಅವರ ಬಳಿಯಿದ್ದ 180 ಗ್ರಾಂ ಚಿನ್ನ ಮತ್ತು ನಗದು ದರೋಡೆ ಮಾಡಿ ಪರಾರಿಯಾಗಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪಣಂಬೂರು ಪೊಲೀಸ್ ಠಾಣೆಯ ಸಿಬ್ಬಂದಿ ತನಿಖೆ ಆರಂಭಿಸಿದ್ದಾರೆ.
ಆರೋಪಿಗಳನ್ನು ಗುರುತಿಸಲು ಮತ್ತು ಪತ್ತೆಹಚ್ಚಲು ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.