ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಯುವಕನೊಬ್ಬ ತನ್ನ 23 ವರ್ಷದ ಗೆಳತಿಯನ್ನು ಊಟಕ್ಕೆ ಕರೆದು, ನಂತರ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ ಘಟನೆ ಭಾನುವಾರ ರಾತ್ರಿ ನಡೆದಿದೆ.
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ನ ಪೈಪ್ ಲೈನ್ ರಸ್ತೆಯಲ್ಲಿ ನಿನ್ನೆ ರಾತ್ರಿ 9:30 ರ ಸುಮಾರಿಗೆ ಅಂಜಲಿ ಎಂಬ ಯುವತಿಯನ್ನು ಆಕೆಯ ಪ್ರಿಯಕರ ರಾಜೀವ್ ಕುತ್ತಿಗೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.
ಪೊಲೀಸರ ಪ್ರಕಾರ, ಅಂಜಲಿ ಮತ್ತು ಆರೋಪಿ ರಾಜೀವ್ ಒಂದೇ ಕಡೆ ಕೆಲಸ ಮಾಡುತ್ತಿದ್ದರು. ಕಳೆದ ಮೂರರಿಂದ ನಾಲ್ಕು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಅಂಜಲಿ ಮತ್ತು ರಾಜೀವ್ ಇಬ್ಬರ ಕುಟುಂಬಗಳಿಗೂ ಈ ವಿಚಾರ ತಿಳಿದಿತ್ತು. ಆದರೆ, ರಾಜೀವ್ಗೆ ಅಪರಾಧದ ಹಿನ್ನೆಲೆ ಇದ್ದಿದ್ದರಿಂದ ಅಂಜಲಿಯ ಕುಟುಂಬಸ್ಥರು ಅವರ ಮದುವೆಗೆ ಒಪ್ಪಿರಲಿಲ್ಲ.
ಅಂಜಲಿ ಸಹ ತನ್ನ ಕುಟುಂಬದವರ ನಿರ್ಧಾರಕ್ಕೆ ಮಣಿದು, ರಾಜೀವ್ನಿಂದ ಅಂತರ ಕಾಪಾಡಲಾರಂಭಿಸಿದ್ದಳು. ಆದರೆ, ರಾಜೀವ್ ಮಾತ್ರ ಅಂಜಲಿಯನ್ನು ಮದುವೆಯಾಗಲು ಪದೇ ಪದೇ ಒತ್ತಾಯಿಸುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ನಿನ್ನೆ ರಾತ್ರಿ ಅಂಜಲಿಯನ್ನು ರಾಜೀವ್ ಊಟಕ್ಕಾಗಿ ಪೈಪ್ ಲೈನ್ ರಸ್ತೆಗೆ ಕರೆತಂದಿದ್ದ. ಈ ಸಂದರ್ಭದಲ್ಲಿ ಮತ್ತೆ ಮದುವೆಯ ಬಗ್ಗೆ ಇಬ್ಬರ ನಡುವೆ ಮಾತುಕತೆ ಆರಂಭವಾಗಿದೆ. ಆದರೆ, ಅಂಜಲಿ ಮದುವೆಗೆ ಸಮ್ಮತಿಸಿಲ್ಲ. ಅದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿದೆ. ಕೋಪಗೊಂಡ ರಾಜೀವ್, ಚಾಕುವಿನಿಂದ ಅಂಜಲಿಯ ಕುತ್ತಿಗೆಗೆ ಇರಿದಿದ್ದಾನೆ. ತಕ್ಷಣವೇ ಸ್ಥಳೀಯರು ಅಂಜಲಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅಂಜಲಿ ಸಾವನ್ನಪ್ಪಿದ್ದಾಳೆ. ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ನಡೆದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಕೆಲವೇ ನಿಮಿಷಗಳಲ್ಲಿ ರಾಜೀವ್ ನನ್ನು ಬಂಧಿಸಿದ್ದಾರೆ.
ಸದ್ಯ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಯ ವಿಚಾರಣೆ ನಡೆಸುತ್ತಿರುವುದಾಗಿ ಮಹಾಲಕ್ಷ್ಮಿ ಲೇಔಟ್ ಪೊಲೀಸರು ತಿಳಿಸಿದ್ದಾರೆ.