ಬೆಂಗಳೂರು: ಇಸ್ರೇಲ್-ಇರಾನ್ ನಡುವಿನ ಯುದ್ಧದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾನುವಾರ ಹೇಳಿದ್ದಾರೆ.
ನಗರದ ತಮ್ಮ ನಿವಾಸದ ಬಳಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳ, ಕರ್ನಾಟಕ ಸೇರಿ ಎಲ್ಲಾ ಕಡೆಯಿಂದ ಇರಾನ್ ಗೆ ಹೋಗಿದ್ದಾರೆ. ಅವರೆಲ್ಲರ ರಕ್ಷಣೆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ದೆಹಲಿ ಕಮಿಷನರ್ ಗೆ ಸಂಪರ್ಕದಲ್ಲಿರಿ ಎಂದು ಹೇಳಿದ್ದೇವೆ ಎಂದರು.
ನಮ್ಮ ಇಬ್ಬರು ಶಾಸಕರಾದ ಬೋಜೇಗೌಡ, ಎಸಿ ಶ್ರೀನಿವಾಸ ಕೂಡ ಸಿಲುಕಿಕೊಂಡಿದ್ದಾರೆ. ಅವರ ಸಂಪರ್ಕಕ್ಕೆ ಪ್ರಯತ್ನಪಡುತ್ತಿದ್ದೇವೆ. ಎಲ್ಲಾ ನಾಗರಿಕರನ್ನ ರಕ್ಷಣೆ ಮಾಡಬೇಕು. ಇರಾನ್ ನಲ್ಲಿ ಈಗ ನಡೆಯುತ್ತಿರುವ ಯುದ್ಧ ಸರಿಯಿಲ್ಲ. ನಮ್ಮ ದೇಶ ಶಾಂತಿ ದೇಶ. ನಾವೆಲ್ಲಾ ಶಾಂತಿ , ನೆಮ್ಮದಿಯಿಂದ ಬಂದಿದ್ದೇವೆ. ಮಕ್ಕಳ ಶಾಲೆ ಮೇಲೆ ದಾಳಿ ಮಾಡಿದ್ದು ಖಂಡನೀಯ ಎಂದು ಹೇಳಿದರು.
ನಾವು ಆತಂಕ ಪಡಬೇಕಾಗಿಲ್ಲ. ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಬೇಕು. ಆ ಕೆಲಸ ಮಾಡುತ್ತೇವೆ. ಕನ್ನಡ ಸಂಘಟನೆಗಳಿಗೆ ಮನವಿ ಮಾಡುತ್ತೇವೆ. ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿ. ಅನೇಕರು ನಮಗೆ ಫೋನ್ ಮಾಡಿ ಗಾಬರಿ ಆಗಿದ್ದಾರೆ. ರಾತ್ರಿ ಏರ್ ಸ್ಟ್ರೈಕ್ ಆಗಿದೆ, ಜನ ಭಯ ಆಗಿದ್ದಾರೆ. ಅದರಿಂದ ನಾವು ಆತಂಕ ಪಡುವ ಹಾಗಿಲ್ಲ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಬೇರೆ ಹೆಲ್ಪ್ ಲೈನ್ ಮಾಡೋಕೆ ಆಗಲ್ಲ. ನಾವು ಕೂಡ ರಾಜ್ಯ ಸರ್ಕಾರದಿಂದ ನಿರ್ದೇಶನ ಕೊಟ್ಟಿದ್ದೇವೆ. ಏನೇ ಬಂದರೂ ವಿದೇಶಾಂಗ ಇಲಾಖೆಯಿಂದಲೇ ಮಾಡಬೇಕು. ನಾವು ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಡಿಕೆ ಶಿವಕುಮಾರ್ ತಿಳಿಸಿದರು.