ಬೆಂಗಳೂರು: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆ ವಾಯುಪ್ರದೇಶ ಬಂದ್ ಆಗಿರುವ ಕಾರಣ ದುಬೈ ಮತ್ತು ಬಹ್ರೈನ್'ನಲ್ಲಿ ಒಟ್ಟು 109 ಮಂದಿ ಕನ್ನಡಿಗರು ಸಿಲುಕಿದ್ದಾರೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ.
ದುಬೈನಲ್ಲಿ 100 ಮಂದಿ ಹಾಗೂ ಬಹ್ರೈನ್'ನಲ್ಲಿ 9 ಮಂದಿ ಇದ್ದಾರೆ. ಇವರಲ್ಲಿ 32 ಮಂದಿ ಬಳ್ಳಾರಿ ಜಿಲ್ಲೆಯವರು, 25 ಮಂದಿ ಬೆಂಗಳೂರಿನವರು, 9 ಮಂದಿ ದಾವಣಗೆರೆ ಜಿಲ್ಲೆಯವರು ಆಗಿದ್ದು, ಉಳಿದವರು ರಾಜ್ಯದ ಇತರ ಜಿಲ್ಲೆಗಳವರಾಗಿದ್ದಾರೆಂದು ತಿಳಿಸಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC) ಸಕ್ರಿಯಗೊಂಡಿದ್ದು, ಕೇಂದ್ರ ಸರ್ಕಾರ, ಭಾರತೀಯ ರಾಯಭಾರ ಕಚೇರಿಗಳು ಹಾಗೂ ವಿಮಾನಯಾನ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ನೆರವು ಹಾಗೂ ವಾಪಸ್ಸು ಕರೆತರುವ ಕ್ರಮಗಳ ಬಗ್ಗೆ ಚರ್ಚೆ ನಡೆಸುತ್ತಿದೆ.
ಮಾರ್ಚ್ 1 ರಂದು ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (KSDMA) ಆಯುಕ್ತೆ ಹೊನ್ನಾಂಬ ಎಸ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿದೆ.
ಇದೇ ವೇಳೆ ನಾಗರಿಕ ವಿಮಾನಯಾನ ಸಚಿವಾಲಯದ ಇತ್ತೀಚೆಗಿನ ಸೂಚನೆಯ ಪ್ರಕಾರ ಇರಾನ್, ಇಸ್ರೇಲ್, ಲೆಬನಾನ್, ಸೌದಿ ಅರೇಬಿಯಾ, ಬಹ್ರೈನ್, ಒಮನ್, ಇರಾಕ್, ಜೋರ್ಡನ್, ಕುವೈತ್, ಯುಎಇ ಹಾಗೂ ಖತಾರ್ ದೇಶಗಳ ವಾಯುಪ್ರದೇಶ ಇನ್ನೂ ಮುಚ್ಚಲ್ಪಟ್ಟಿದೆ ಎಂದು ತಿಳಿಸಲಾಗಿದೆ.
ಸೋಮವಾರ ಬೆಳಗ್ಗೆ 10 ಗಂಟೆಯ ವೇಳೆಗೆ ಸಿಲುಕಿರುವ 109 ಮಂದಿ ಕನ್ನಡಿಗರ ವಿವರಗಳನ್ನು SEOC ಮತ್ತು ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರಗಳು ಸಂಗ್ರಹಿಸಿದ್ದು, ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಹಾಗೂ ನವದೆಹಲಿಯ ಕರ್ನಾಟಕ ಭವನಕ್ಕೆ ರವಾನಿಸಿದೆ.
ಮುಖ್ಯಮಂತ್ರಿ ಹಾಗೂ ಕಂದಾಯ ಇಲಾಖೆ ಸಚಿವರ ಸೂಚನೆಯಂತೆ SEOC ಮತ್ತು ಎಲ್ಲಾ ಜಿಲ್ಲಾ ಕೇಂದ್ರಗಳು 24 ಗಂಟೆಯೂ ಕಾರ್ಯನಿರ್ವಹಿಸುತ್ತಿದ್ದು, ರಾಯಭಾರ ಕಚೇರಿಗಳ ಸಹಾಯವಾಣಿ ಸಂಖ್ಯೆ ಹಾಗೂ ಸೂಚನೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳಲಾಗುತ್ತಿದೆ. ವಿದೇಶಾಂಗ ಸಚಿವಾಲಯದ ರ್ಯಾಪಿಡ್ ರೆಸ್ಪಾನ್ಸ್ ಸೆಲ್ನೊಂದಿಗೆ ನಿಕಟ ಸಂಪರ್ಕದಲ್ಲಿರುವುದಾಗಿ ಮೂಲಗಳು ತಿಳಿಸಿವೆ.
ಇದೇ ವೇಳೆ ಸಂಕಷ್ಟದಲ್ಲಿರುವ ಕನ್ನಡಿಗರು ಸ್ಥಳೀಯ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು, ಭಾರತೀಯ ರಾಯಭಾರ ಕಚೇರಿಗಳ ಸಹಾಯವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಬೇಕು ಹಾಗೂ ‘ಸಾರಥಿ ಸಹಾಯತಾ’ ಸೇರಿದಂತೆ ಅಧಿಕೃತ ಪೋರ್ಟಲ್ಗಳಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಸರ್ಕಾರ ಸೂಚನೆ ನೀಡಿದೆ.
ವಿದೇಶಾಂಗ ಸಚಿವಾಲಯದಿಂದ ಸ್ಥಳಾಂತರ ಕಾರ್ಯಾಚರಣೆ ಪ್ರಾರಂಭವಾದಲ್ಲಿ ಅಗತ್ಯ ಕ್ರಮಗಳನ್ನು ಪ್ರಕಟಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.