ಬೆಂಗಳೂರು: ಬೀಗ ಹಾಕಿ ಮನೆಗಳಿಗೆ ಕನ್ನ ಹಾಕುತ್ತಿದ್ದ ಕುಖ್ಯಾತ ಖದೀಮರನ್ನು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಮಂಗಳವಾರ ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತರನ್ನು ಮಳವಳ್ಳಿಯ ಸಿದ್ದು ಅಲಿಯಾಸ್ ನಾಗರಾಜ್ (32) ಮತ್ತು ಜೆಪಿ ನಗರ ಸಾರಕ್ಕಿಯ ಮುನಿರಾಜು (49) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 711 ಗ್ರಾಂ ಚಿನ್ನಾಭರಣಗಳು ಹಾಗೂ 19.5 ಲಕ್ಷ ರೂ.ನಗದು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ ವಶಪಡಿಸಿಕೊಳ್ಳಲಾದ ವಸ್ತುಗಳ ಮೌಲ್ಯ ರೂ.1.40 ಕೋಟಿ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಗಸ್ಟ್ 8, 2025ರಂದು ಪ್ರಕೃತಿ ಲೇಔಟ್ನಲ್ಲಿ ಕುಟುಂಬವೊಂದು ತಮಿಳುನಾಡಿಗೆ ತೆರಳಿದ್ದ ಸಂದರ್ಭದಲ್ಲಿ ಮನೆಗೆ ನುಗ್ಗಿದ್ದ ಆರೋಪಿಗಳು, 248 ಗ್ರಾಂ ಚಿನ್ನ ದೋಚಿದ್ದರು. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಬೈಕ್ನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಿದ ಪೊಲೀಸರು ಸ್ವಾಮಿ ಎಂಬಾತನನ್ನು ಮೊದಲಿಗೆ ಬಂಧನಕ್ಕೊಳಪಡಿಸಿದ್ದರು. ವಿಚಾರಣೆ ವೇಳೆ ಈತ ಇತರೆ ಇಬ್ಬರ ಕೈವಾಡ ಕುರಿತು ಬಾಯ್ಬಿಟ್ಟಿದ್ದ.
ಆರೋಪಿ ಸಿದ್ದು ಕಳವು ಮಾಡಿದ ಚಿನ್ನಾಭರಣಗಳನ್ನು ಗಿರವಿ ಇಟ್ಟು ನಗದು ಪಡೆಯುತ್ತಿದ್ದನು ಎಂಬುದು ವಿಚಾರಣೆ ವೇಳೆ ತಿಳಿದುಬಂದಿತ್ತು.
ಆರೋಪಿಗಳ ವಿರುದ್ಧ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ 13 ಮತ್ತು ನೆಲಮಂಗಲ ಟೌನ್ ಠಾಣಾ ವ್ಯಾಪ್ತಿಯಲ್ಲಿ 2 ಸೇರಿ ಒಟ್ಟು 15 ಮನೆ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ. ವಿಚಾರಣೆ ವೇಳೆ ಆರೋಪಿ ಸಿದ್ದು ಕಳೆದ 15 ವರ್ಷಗಳಿಂದ ಮನೆ ಕಳ್ಳತನಗಳಲ್ಲಿ ತೊಡಗಿದ್ದ ಎಂಬುದು ತಿಳಿದುಬಂದಿದೆ.
2011ರಲ್ಲಿ ಮೊದಲ ಬಾರಿಗೆ ಈತನ ವಿರುದ್ಧ ಪ್ರಕರಣ ದಾಖಲಾಗಿದ್ದು, ನಂತರ 31 ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದಾನೆಂದು ತಿಳಿದುಬಂದಿದೆ.
2021ರಲ್ಲಿ ಜೈಲಿನಿಂದ ಬಿಡುಗಡೆಯಾದ ಬಳಿಕ ನಾಲ್ಕು ವರ್ಷಗಳ ಕಾಲ ಪೊಲೀಸರ ಕಣ್ಣಿಸದೆ ಓಡಾಡಿಕೊಂಡಿದ್ದ ಈತ, 2025ರಲ್ಲಿ ಮುನಿರಾಜು ಜೊತೆ ಸೇರಿ ಮತ್ತೆ ಕಳ್ಳತನ ಆರಂಭಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.