ಗಂಗಾವತಿ (ಕೊಪ್ಪಳ): ಇರಾನ್ ಸುಪ್ರೀಂ ನಾಯಕ ಆಯತೊಲ್ಲಾ ಅಲಿ ಖಮೆನೀ ಹತ್ಯೆ ಕುರಿತಾಗಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ ಹಿನ್ನೆಲೆ ಯುವಕನೋರ್ವನ ಮೇಲೆ ನಾಲ್ವರು ಹಲ್ಲೆ ನಡೆಸಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಮಂಗಳವಾರ ನಡೆದಿದೆ.
ಗಾಯಗೊಂಡ ಯುವಕನನ್ನು ಗಂಗಾವತಿ ನಿವಾಸಿ ಚಂದ್ರಶೇಖರ್ ಎಂದು ಗುರುತಿಸಲಾಗಿದೆ. ಯುವಕ ಡ್ರೈಫ್ರೂಟ್ಸ್ ವ್ಯಾಪಾರಿಯಾಗಿದ್ದು, ಪೂಲ್ವಾಮಾ ದಾಳಿಯ ವೇಳೆ ಮೌನವಾಗಿದ್ದವರು, ಇಂದು ಖಮೆನೀ ಹತ್ಯೆ ವಿಚಾರದಲ್ಲಿ ಮಾತ್ರ ಧ್ವನಿ ಎತ್ತುತ್ತಿದ್ದಾರೆಂದು ಪ್ರಶ್ನಿಸುವ ರೀತಿಯಲ್ಲಿ ಪೋಸ್ಟ್ ಮಾಡಿದ್ದ ಎನ್ನಲಾಗಿದೆ.
ಇದರ ಬೆನ್ನಲ್ಲೇ ಗಂಗಾವತಿಯಲ್ಲಿರುವ ಯುವಕನ ಅಂಗಡಿ ಬಳಿ ಬಂದಿರುವ ನಾಲ್ವರು ಪುಂಡರು ಯುವಕನಮೇಲೆ ಹಲ್ಲೆ ನಡೆಸಿ, ಇಂತಹ ಪೋಸ್ಟ್ಗಳನ್ನು ಮುಂದುವರೆಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಕುರಿತು ಗಂಗಾವತಿ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
ಮಂಗಳವಾರ ನಾನು ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಗ ನಾಲ್ವರು ಬಂದು ನನ್ನ ಮೇಲೆ ಹಲ್ಲೆ ನಡೆಸಿದರು. ನೀವು ನಮ್ಮ ಸಮುದಾಯದ ಬಗ್ಗೆ ಏಕೆ ಪೋಸ್ಟ್ ಮಾಡಿದ್ದೀರಿ ಎಂದು ಪ್ರಶ್ನಿಸಿ, ಪೋಸ್ಟ್ ಮುಂದುವರೆಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದರು ಎಂದು ಚಂದ್ರಶೇಖರ್ ತಿಳಿಸಿದ್ದಾರೆ.
ಈ ಘಟನೆ ಕುರಿತು ಮಾಹಿತಿ ಸಂಗ್ರಹಿಸಲಾಗಿದ್ದು, ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ ಎಂದು ಕೊಪ್ಪಳ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.