ಭಟ್ಕಳ: ಇರಾನ್-ಇಸ್ರೇಲ್ ಯುದ್ಧ ಹಿನ್ನೆಲೆಯಲ್ಲಿ ತೈಲ ಬೆಲೆ ಏರಿಕೆ ಭೀತಿಯಿಂದ ಶುರುವಾಗಿದ್ದು, ಈ ಹಿನ್ನೆಲೆಯಲ್ಲಿ ಪೆಟ್ರೋಲ್ ಬಂಕ್ ಗಳಿಗೆ ಜನರು ಮುಗಿಬೀಳುತ್ತಿದ್ದಾರೆ.
ಪೆಟ್ರೋಲ್ ಬೆಲೆ ಏಕಾಏಕಿ ಹೆಚ್ಚಾಗಬಹುದು ಅಥವಾ ಪೂರೈಕೆ ಸ್ಥಗಿತಗೊಳ್ಳಬಹುದು ಎಂಬ ತಪ್ಪು ಗ್ರಹಿಕೆಯಿಂದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಜನರು ಹೆಚ್ಚುವರಿ ಪೆಟ್ರೋಲ್ ಸಂಗ್ರಹಕ್ಕೆ ಪೆಟ್ರೋಲ್ ಬಂಕ್ಗಳ ಮುಂದೆ ಸಾಲುಗಟ್ಟಿ ನಿಲ್ಲಿತ್ತಿರುವ ಬೆಳವಣಿಗೆಗಳು ಕಂಡು ಬಂದಿದೆ.
ಬಹಳಷ್ಟು ವಾಹನ ಸವಾರರು ಮುನ್ನೆಚ್ಚರಿಕೆ ಕ್ರಮವಾಗಿ ಕ್ಯಾನ್ಗಳನ್ನು ತೆಗೆದುಕೊಂಡು ಬಂದು ಪೆಟ್ರೋಲ್ ಸಂಗ್ರಹಿಸುತ್ತಿದ್ದಾರೆ.
ಸೋಮವಾರದಿಂದ ಈ ಬೆಳವಣಿಗೆ ಕಂಡು ಬಂದಿದ್ದು, ಬುಧವಾರ ರಾತ್ರಿಯವರೆಗೂ ಮುಂದುವರಿದಿದೆ. ಕೆಲ ಪೆಟ್ರೋಲ್ ಬಂಕ್ಗಳಲ್ಲಿ ಕೆಲವೇ ಗಂಟೆಗಳಲ್ಲಿ ಇಂಧನ ಖಾಲಿಯಾಗಿದ್ದು, ‘ನೋ ಸ್ಟಾಕ್’ ಫಲಕ ಹಾಕಿದ್ದ ಬೆಳವಣಿಗೆ ಕೂಡ ಕಂಡು ಬಂದಿತು.
ಜಾಗತಿಕ ತೈಲ ಸರಬರಾಜು ಮಾರ್ಗಗಳಲ್ಲಿ ವ್ಯತ್ಯಯ ಉಂಟಾಗಬಹುದು ಹಾಗೂ ಇಂಧನ ಬೆಲೆ ಏರಿಕೆಯಾಗಬಹುದು ಎಂಬ ವರದಿಗಳಿಂದ ಜನರು ಆತಂಕಗೊಂಡು ಪೆಟ್ರೋಲ್ ಸಂಗ್ರಹಿಸಲು ಮುಂದಾಗಿದ್ದಾರೆ ಎಂದು ಸ್ಥಳೀಯ ಸಮಾಜ ಸೇವಕ ಮತ್ತು ಪತ್ರಕರ್ತ ಇನಾಯತುಲ್ಲಾ ಅವರು ತಿಳಿಸಿದ್ದಾರೆ.
ಏತನ್ಮಧ್ಯೆ ಪೆಟ್ರೋಲ್ ಬಂಕ್ ಸಿಬ್ಬಂದಿ ಇಂಧನ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.