ಪೆಟ್ರೋಲ್ ಬಂಕ್ 
ರಾಜ್ಯ

ರಷ್ಯಾದಿಂದ ತೈಲ ಪೂರೈಕೆ ಮುಂದುವರೆದಿದೆ, ಆತಂಕಪಡುವ ಅಗತ್ಯವಿಲ್ಲ; ಪೆಟ್ರೋಲ್ ಬಂಕ್'ಗಳಿಗೆ ಮುಗಿಬೀಳದಿರಿ; ಸವಾರರಿಗೆ ವ್ಯಾಪಾರಿಗಳ ಒಕ್ಕೂಟ ಸಲಹೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 'ಬ್ರೆಂಟ್' ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿದ್ದು, ಪ್ರತಿ ಬ್ಯಾರೆಲ್‌ಗೆ 150 ಡಾಲರ್ ದಾಟುವ ಸಾಧ್ಯತೆಗಳಿವೆ.

ಬೆಂಗಳೂರು: ಪಶ್ಚಿಮ ಏಷ್ಯಾದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವೆ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರಿದೆ. ಇದರಂತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರಬಹುದು ಅಥವಾ ಇಂಧನ ಪೂರೈಕೆಯೇ ಸ್ಥಗಿತಗೊಳ್ಳಬಹುದು ಎಂಬ ಭಯದಲ್ಲಿ ಸಾರ್ವಜನಿಕರು ಪೆಟ್ರೋಲ್ ಬಂಕ್'ಗಳಿಗೆ ಮುಗಿಬಿದ್ದು ಪೆಟ್ರೋಲ್ ಖರೀದಿಸುತ್ತಿದ್ದಾರೆ.

ಜನರು ಕೇವಲ ವಾಹನಗಳಿಗೆ ಇಂಧನ ತುಂಬಿಸುವುದಷ್ಟೇ ಅಲ್ಲದೆ, ಜನರು ಪ್ಲಾಸ್ಟಿಕ್ ಬಾಟಲಿಗಳು ಮತ್ತು ದೊಡ್ಡ ದೊಡ್ಡ ಕ್ಯಾನ್‌ಗಳಲ್ಲಿ ಪೆಟ್ರೋಲ್ ತುಂಬಿಸಿಕೊಳ್ಳುತ್ತಿದ್ದಾರೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 'ಬ್ರೆಂಟ್' ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿದ್ದು, ಪ್ರತಿ ಬ್ಯಾರೆಲ್‌ಗೆ 150 ಡಾಲರ್ ದಾಟುವ ಸಾಧ್ಯತೆಗಳಿವೆ. ಭಾರತವು ತನ್ನ ತೈಲದ ಅವಶ್ಯಕತೆಗೆ ಹೆಚ್ಚಿನ ಪ್ರಮಾಣದಲ್ಲಿ ಇರಾನ್ ಮತ್ತು ಗಲ್ಫ್ ರಾಷ್ಟ್ರಗಳನ್ನು ಅವಲಂಬಿಸಿರುವುದರಿಂದ, ಮುಂಬರುವ ದಿನಗಳಲ್ಲಿ ಪೆಟ್ರೋಲ್ ಬೆಲೆಯಲ್ಲಿ ಭಾರಿ ಏರಿಕೆಯಾಗುವ ಸಾಧ್ಯತೆ ಇದೆ. ಇದು ಜನಸಾಮಾನ್ಯರ ಆತಂಕ ಹೆಚ್ಚಾಗುವಂತೆ ಮಾಡಿದೆ.

ಆದರೆ, ರಾಜ್ಯ ಪೆಟ್ರೋಲಿಯಂ ವ್ಯಾಪಾರಿಗಳ ಒಕ್ಕೂಟದ ಕೆಲವು ಸದಸ್ಯರು, ರಷ್ಯಾದಿಂದ ತೈಲ ಪೂರಕೆಯಾಗುತ್ತಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಒಡಿಶಾ ಮತ್ತು ಮಂಗಳೂರಿನಲ್ಲಿ ನಮಗೆ ಹೊಸ ಸಂಸ್ಕರಣಾಗಾರಗಳಿವೆಇದು ಒತ್ತಡವನ್ನು ಕಡಿಮೆ ಮಾಡುತ್ತದೆ. ವಾಹನ ಚಾಲಕರು ಪೆಟ್ರೋಲ್ ಬಂಕ್ ಗಳಿಗೆ ಮುಗಿಬೀಳುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನಂತಹ ತೈಲ ಪೂರೈಕೆ ಕಂಪನಿಗಳು ಬೆಲೆ ಏರಿಕೆಯ ಹೊರೆಯನ್ನು ಭರಿಸುತ್ತಿವೆ ಎಂದು ಸರ್ಕಾರ ಹೇಳಿದೆ.

ರಾಜ್ಯದಲ್ಲಿ ಸುಮಾರು 5,000ಕ್ಕೂ ಹೆಚ್ಚು ಪೆಟ್ರೋಲ್ ಬಂಕ್‌ಗಳು ಇದ್ದು, ಅವುಗಳಲ್ಲಿ ಸುಮಾರು 450 ಬಂಕ್‌ಗಳು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೆ, ಪಶ್ಚಿಮ ಏಷ್ಯಾದ ಯುದ್ಧ ಪರಿಸ್ಥಿತಿ ಮುಂದುವರಿದರೆ ಪೆಟ್ರೋಲ್, ಡೀಸೆಲ್ ಹಾಗೂ ಸೀಮೆ ಎಣ್ಣೆ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಪ್ರೊ. ಅಶೋಕ್ ಹಂಜಗಿ ಅವರ ಪ್ರಕಾರ, ಜಗತ್ತಿನ ಪೆಟ್ರೋಲಿಯಂ ಸರಬರಾಜಿನ ಸುಮಾರು ಐದನೇ ಭಾಗ ಹಾರ್ಮುಜ್ ಮೂಲಕ ಸಾಗುತ್ತದೆ. ಈ ಮಾರ್ಗವನ್ನು ಇರಾನ್ ನಿಯಂತ್ರಿಸುತ್ತಿದ್ದು, ಇರಾನ್–ಇಸ್ರೇಲ್ ನಡುವಿನ ಉದ್ವಿಗ್ನತೆ ಹೆಚ್ಚಾದರೆ ಈ ಮಾರ್ಗದಲ್ಲಿ ವ್ಯತ್ಯಯ ಉಂಟಾಗಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬೆಲೆ ಅಸ್ಥಿರತೆ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ,

ಭಾರತವು ಭೂಗತ ಕಾರ್ಯತಂತ್ರದ ನಿಕ್ಷೇಪಗಳಲ್ಲಿ ತುರ್ತು ತೈಲವನ್ನು ಸಂಗ್ರಹಿಸುತ್ತದೆ, ಅಡೆತಡೆಗಳ ಸಮಯದಲ್ಲಿ ವಾರಗಳವರೆಗೆ ಪೂರೈಕೆಯನ್ನು ಒದಗಿಸುತ್ತದೆ, ಆದರೆ, ದೀರ್ಘಾವಧಿಯ ಪೂರೈಕೆಗೆ ಅದು ಸಾಕಾಗುವುದಿಲ್ಲ. "ಈ ಪರಿಸ್ಥಿತಿಯು ಇಂಧನ ಮೂಲಗಳು ಮತ್ತು ಪೂರೈಕೆ ಮಾರ್ಗಗಳೆರಡನ್ನೂ ಉತ್ತಮಗೊಳಿಸುವ ಮಹತ್ವವನ್ನು ಒತ್ತಿಹೇಳುತ್ತದೆ. ಭಾರತವು ಆಫ್ರಿಕಾ, ರಷ್ಯಾ ಮತ್ತು ಅಮೆರಿಕದಂತಹ ಪ್ರದೇಶಗಳಿಂದ ಕಚ್ಚಾ ವಸ್ತುಗಳ ಖರೀದಿಯನ್ನು ವಿಸ್ತರಿಸಬೇಕು ಮತ್ತು ಕಡಲ ಲಾಜಿಸ್ಟಿಕ್ಸ್ ಅನ್ನು ಬಲಪಡಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

19 ವಿಮಾನಗಳು ರದ್ದು

ಏತನ್ಮಧ್ಯೆ ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿಗಳು ಕಡಿಮೆಯಾಗುವ ಯಾವುದೇ ಲಕ್ಷಣಗಳನ್ನು ಕಂಡು ಬಾರದ ಕಾರಣ, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಸೋಮವಾರ 19 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.

ಈ ಪೈಕಿ ಒಂಬತ್ತು ಆಗಮನ ಮತ್ತು 10 ನಿರ್ಗಮನದ ವಿಮಾನಗಳಾಗಿದ್ದವು ಎಂದು ತಿಳಿದುಬಂದಿದೆ. ಅಬುಧಾಬಿ, ರಿಯಾದ್, ಜೆಡ್ಡಾ, ದಮ್ಮಾಮ್, ದುಬೈ ಮತ್ತು ದೋಹಾ ವಿಮಾನಗಳ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ ಮೂಲಗಳು ತಿಳಿಸಿವೆ. ಆದಾಗ್ಯೂ, ಕೆಲವು ವಿಮಾನಗಳು ನಿಯಮಿತವಾಗಿ ಸಂಚಾರ ನಡೆದಿವೆ, ಏರ್ ಇಂಡಿಯಾ ಎಕ್ಸ್‌ಪ್ರೆಸ್ IX6701 ಅನ್ನು ರಾಸ್ ಅಲ್ ಖೈಮಾ, ಇಂಡಿಗೊ 6E77 ಅನ್ನು ಜೆಡ್ಡಾಗೆ ಮತ್ತು ಎಮಿರೇಟ್ಸ್ EK569 ಮತ್ತು EK565 ದುಬೈಗೆ ಸಂಚರಿಸಿವೆ.

ಪಶ್ಚಿಮ ಏಷ್ಯಾದ ಉದ್ವಿಗ್ನತೆ ಮುಂದುವರೆದಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿಯೂ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ ಎಂದು ವಿಮಾನ ನಿಲ್ದಾಣ ಮೂಲಗಳು ಸೂಚಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾಕ್ ಕರಾವಳಿಯಲ್ಲಿ ತೈಲ ಟ್ಯಾಂಕರ್ ಮೇಲೆ ಆತ್ಮಾಹುತಿ ದಾಳಿ: ಭಾರತೀಯ ಪ್ರಜೆ ಸಾವು

20 ವರ್ಷಗಳಿಂದ ಆತನನ್ನು ಕೊಲ್ಲಲು ಬಯಸಿದ್ದೆ: ಫಾರೂಕ್ ಅಬ್ದುಲ್ಲಾ ಮೇಲೆ ದಾಳಿ ನಡೆಸಿದ ಶೂಟರ್ ಹೇಳಿಕೆ!

ಮೊಟ್ಟೆ ಪ್ರಿಯರಿಗೆ ಗುಡ್‌ ನ್ಯೂಸ್‌; ಬೆಲೆಯಲ್ಲಿ ಭಾರೀ ಇಳಿಕೆ, ಗ್ರಾಹಕರು ಸಂತಸ

ಕುವೈತ್ ನ ವಸತಿ ಕಟ್ಟಡಕ್ಕೆ ಶತ್ರು ರಾಷ್ಟ್ರದಿಂದ ಡ್ರೋನ್ ದಾಳಿ: ಭಾರಿ ಪ್ರಮಾಣದ ಹಾನಿ!

ಜಮ್ಮು: ಫಾರೂಕ್‌ ಅಬ್ದುಲ್ಲಾ ಹತ್ಯೆಗೆ ಯತ್ನ, ಮದುವೆ ಮನೆಯಲ್ಲೇ ಗುಂಡಿನ ದಾಳಿ; ಡಿಸಿಎಂಗೆ ಗಾಯ

SCROLL FOR NEXT