ಮೈಸೂರು: ಕಳೆದ ಆರು ವರ್ಷಗಳಲ್ಲಿ ಖಾಸಗಿ ಬಸ್ ಅಪಘಾತಗಳ ಪ್ರಮಾಣ ಹೆಚ್ಚುತ್ತಿರುವುದು ಕರ್ನಾಟಕದಲ್ಲಿ ರಸ್ತೆ ಸುರಕ್ಷತೆ ಜಾರಿಗೊಳಿಸುವಿಕೆ, ವಾಹನಗಳ ನಿರ್ವಹಣೆ ಮತ್ತು ಆಪರೇಟರ್ಗಳ ಹೊಣೆಗಾರಿಕೆ ಬಗ್ಗೆ ಗಂಭೀರ ಚಿಂತೆಯನ್ನು ಹುಟ್ಟಿಸಿದೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ (The New Indian Express)ಗೆ ಲಭ್ಯವಿರುವ ಮಾಹಿತಿಯ ಪ್ರಕಾರ, 2020ರಿಂದ 2025ರವರೆಗೆ ಖಾಸಗಿ ಬಸ್ಗಳಿಗೆ ಸಂಬಂಧಿಸಿದಂತೆ ಒಟ್ಟು 3,823 ಅಪಘಾತಗಳು ವರದಿಯಾಗಿವೆ. ಈ ಅಂಕಿ-ಅಂಶಗಳು ಅಪಘಾತಗಳು, ಸಾವು-ನೋವುಗಳ ಸಂಖ್ಯೆಯಲ್ಲಿ ನಿರಂತರವಾಗಿ ಆತಂಕಕಾರಿ ಏರಿಕೆಯನ್ನು ತೋರಿಸುತ್ತವೆ. ಈ ಘಟನೆಗಳಲ್ಲಿ 1,127 ಜನರು ಪ್ರಾಣ ಕಳೆದುಕೊಂಡಿದ್ದು, 7,149 ಮಂದಿ ಗಾಯಗೊಂಡಿದ್ದಾರೆ. ಇದು ಸಾರ್ವಜನಿಕ ಸುರಕ್ಷತೆಗೆ ದೊಡ್ಡ ಸವಾಲಾಗುತ್ತಿದೆ.
2020ರಲ್ಲಿ 335 ಅಪಘಾತಗಳು ದಾಖಲಾಗಿದ್ದರೆ, 2025ರಲ್ಲಿ ಅದು 847ಕ್ಕೆ ಏರಿಕೆಯಾಗಿದೆ. ಅಂದರೆ 153 ಶೇಕಡಾ ಏರಿಕೆಯಾಗಿದೆ. ಸಾವಿನ ಪ್ರಮಾಣವು 120 ಶೇಕಡಾಕ್ಕಿಂತ ಹೆಚ್ಚಳ ಕಂಡಿದ್ದು, ಗಾಯಾಳುಗಳ ಸಂಖ್ಯೆ ಈ ಅವಧಿಯಲ್ಲಿ ಸುಮಾರು ಮೂರರಷ್ಟು ಹೆಚ್ಚಾಗಿದೆ. ಅಧಿಕಾರಿಗಳು ಮತ್ತು ರಸ್ತೆ ಸುರಕ್ಷತಾ ತಜ್ಞರು ಈ ಸಂಖ್ಯೆಯ ಏರಿಕೆಗೆ ಚಾಲಕರ ನಿರ್ಲಕ್ಷ್ಯ, ತಾಂತ್ರಿಕ ದೋಷಗಳು ಮತ್ತು ಟ್ರಾಫಿಕ್ ನಿಯಮ ಉಲ್ಲಂಘನೆಗಳನ್ನು ಕಾರಣವೆಂದು ಸೂಚಿಸಿದ್ದಾರೆ.
ಖಾಸಗಿ ಬಸ್ಗಳ ಮೇಲೆ ಕಟ್ಟುನಿಟ್ಟಿನ ಮೇಲ್ವಿಚಾರಣೆ ಅಗತ್ಯವಿದೆ. ರಿಯಲ್-ಟೈಮ್ ಟ್ರ್ಯಾಕಿಂಗ್, ಏಕಾಏಕಿ ಅಚ್ಚರಿಯ ತಪಾಸಣೆಗಳು ಮತ್ತು ಮತ್ತೆ ಮತ್ತೆ ತಪ್ಪು ಮಾಡುವವರ ಮೇಲೆ ಕಠಿಣ ದಂಡ ಕ್ರಮ ಜಾರಿಯಾಗಬೇಕು ಎಂದು ಮೈಸೂರು ಮೂಲದ ಸಾರಿಗೆ ತಜ್ಞ ಮಧು ಹೇಳುತ್ತಾರೆ. 2020ರಲ್ಲಿ 675 ಇದ್ದ ಗಾಯಾಳುಗಳ ಸಂಖ್ಯೆ 2025ರಲ್ಲಿ 1,803ಕ್ಕೆ ಏರಿಕೆಯಾಗಿದೆ ಎಂಬುದು ದಿನನಿತ್ಯ ಪ್ರಯಾಣಿಕರಿಗೆ ಹೆಚ್ಚುತ್ತಿರುವ ಅಪಾಯವನ್ನು ತೋರಿಸುತ್ತದೆ.
ಅತಿವೇಗ, ಹೆಚ್ಚು ಟ್ರಿಪ್ಗಳನ್ನು ಮಾಡಲು ಅಜಾಗರೂಕ ಚಾಲನೆ, ವಾಹನಗಳ ದುರ್ಬಲ ನಿರ್ವಹಣೆ ಮತ್ತು ಚಾಲಕರ ದಣಿವು ಪ್ರಮುಖ ಕಾರಣಗಳಾಗಿವೆ. ಜೊತೆಗೆ, ಅತಿಯಾದ ಭಾರ ಹೊರುವುದು, ಅನುಮತಿ ಇಲ್ಲದ ಮಾರ್ಗ ಬದಲಾವಣೆಗಳು ಮತ್ತು ನಿಯಮಿತ ಫಿಟ್ನೆಸ್ ಪರೀಕ್ಷೆಗಳ ಕೊರತೆ ಕೂಡ ಆತಂಕಕಾರಿಯಾಗಿದೆ—ವಿಶೇಷವಾಗಿ ಲಾಭದಾಸೆಯಿಂದ ಪ್ರಯಾಣಿಕರ ಸುರಕ್ಷತೆಯನ್ನು ಖಾಸಗಿ ಬಸ್ಸುಗಳು ಕಡೆಗಣಿಸುತ್ತಿವೆ. ಸಾರಿಗೆ ಮತ್ತು ಪೊಲೀಸ್ ಇಲಾಖೆಗಳ ಕಾಲಕಾಲದ ದಾಳಿಗಳಿದ್ದರೂ, ನಿಯಮ ಜಾರಿಯಲ್ಲಿ ಅಸ್ಥಿರತೆ ಕಾಣುತ್ತಿದೆ.