ಹಾರ್ಮುಜ್ ಜಲಸಂಧಿಯಲ್ಲಿ ತನ್ನ ಹಡಗಿನಿಂದ ನಾವಿಕನು ಸೆರೆಹಿಡಿದ ವಿಡಿಯೋದಲ್ಲಿನ ಸ್ಕ್ರೀನ್‌ಗ್ರಾಬ್‌ನಲ್ಲಿ ಕಾಣಿಸಿಕೊಂಡ ಡ್ರೋನ್‌ಗಳು 
ರಾಜ್ಯ

ಹಾರ್ಮುಜ್ ಜಲಸಂಧಿಯಲ್ಲಿ 20 ದಿನಗಳಿಂದ ಸಿಲುಕಿರುವ ಮಂಗಳೂರಿನ ನಾವಿಕನ ಭೀಕರ ಅನುಭವ: TNIE ಪ್ರತಿನಿಧಿಗೆ ವಿವರಿಸಿದ್ದು ಹೀಗೆ...

ಮಂಗಳೂರಿನ ನಮ್ಮ ಮನೆಗಳಲ್ಲಿ ಕುಟುಂಬದವರು ಆತಂಕದಲ್ಲಿದ್ದಾರೆ. ಕಳೆದ ಆರು ತಿಂಗಳಿಂದ ನಾನು ಮನೆಗೆ ಹೋಗಿಲ್ಲ. ಅವರು ನನ್ನ ಬರುವಿಕೆಗೆ ಕಾಯುತ್ತಿದ್ದಾರೆ ಎಂದು ನಾವಿಕ ಹೇಳಿದ್ದಾರೆ.

ಮಂಗಳೂರು: ಅಮೆರಿಕಾ-ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಭಾರತಕ್ಕೆ ಬರುತ್ತಿದ್ದ ಎಲ್‌ಪಿಜಿ ಸಾಗಣೆ ಹಡಗಿನಲ್ಲಿ ಮಂಗಳೂರಿನ ಮೂಲದ ಒಬ್ಬ ನಾವಿಕ ಸೇರಿದಂತೆ ಇತರೆ ಸಿಬ್ಬಂದಿ, ಪರ್ಷಿಯನ್ ಕೊಲ್ಲಿ, ಒಮಾನ್ ಕೊಲ್ಲಿ ಹಾಗೂ ಅರಬ್ಬಿ ಸಮುದ್ರವನ್ನು ಸಂಪರ್ಕಿಸುವ ಪ್ರಮುಖ ಸಮುದ್ರ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಕಳೆದ 20 ದಿನಗಳಿಂದ ಸಿಲುಕಿಕೊಂಡಿದ್ದಾರೆ.

ನಾವು ನಿರಂತರ ಅಪಾಯದ ನಡುವೆಯಿದ್ದೇವೆ. ನಮ್ಮನ್ನು ಹೊರತೆಗೆಯಲು ಭಾರತೀಯ ನೌಕಾಪಡೆ ಮಾರ್ಗದರ್ಶನ ಮತ್ತು ಸಹಾಯ ಮಾಡುತ್ತಿದೆ. ಇಲ್ಲಿ ಪರಿಸ್ಥಿತಿ ಹದಗೆಡುತ್ತಿದೆ. ಕ್ಷಿಪಣಿಗಳು ಮತ್ತು ಡ್ರೋನ್‌ಗಳು ನಮ್ಮ ಹಡಗಿನ ಪಕ್ಕದಿಂದ ನಿಯಮಿತವಾಗಿ ಹಾರುತ್ತಿರುವುದನ್ನು ನೋಡುತ್ತೇವೆ. ನನ್ನ ಕಣ್ಣೆದುರೇ ಒಂದು ಹಡಗು ಕ್ಷಿಪಣಿಯಿಂದ ಹೊಡೆದಿರುವುದನ್ನು ಸಮೀಪದಿಂದ ಕಂಡಿದ್ದೇನೆ ಎನ್ನುತ್ತಾರೆ.

ನಾನು 20ಕ್ಕೂ ಹೆಚ್ಚು ಬಾರಿ ಈ ಮಾರ್ಗದಲ್ಲಿ ಪ್ರಯಾಣಿಸಿದ್ದೇನೆ, ಆದರೆ ಈ ಬಾರಿ ಇಷ್ಟು ಕಷ್ಟಕರವಾಗಿ ಸಿಲುಕಿರುವುದು ಇದೇ ಮೊದಲ ಬಾರಿ ಎಂದು ಹಡಗಿನ ಪರಿಸ್ಥಿತಿಯನ್ನು ಮೆರೀನ್ ಇಂಜಿನಿಯರ್ ವಿವರಿಸುತ್ತಾರೆ. ಅವರು 2010ರಿಂದ ವ್ಯಾಪಾರ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದು ಭದ್ರತಾ ಕಾರಣಗಳಿಂದ ತಮ್ಮ ಹೆಸರು ಬಹಿರಂಗಪಡಿಸಬಾರದೆಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್(The New Indian Express) ಪ್ರತಿನಿಧಿಗೆ ಮನವಿ ಮಾಡಿಕೊಂಡಿದ್ದಾರೆ.

ಮಂಗಳೂರಿನ ನಮ್ಮ ಮನೆಗಳಲ್ಲಿ ಕುಟುಂಬದವರು ಆತಂಕದಲ್ಲಿದ್ದಾರೆ. ಕಳೆದ ಆರು ತಿಂಗಳಿಂದ ನಾನು ಮನೆಗೆ ಹೋಗಿಲ್ಲ. ಅವರು ನನ್ನ ಬರುವಿಕೆಗೆ ಕಾಯುತ್ತಿದ್ದಾರೆ ಎಂದು ನಾವಿಕ ಹೇಳಿದ್ದಾರೆ.

ತಮ್ಮ ಭಯಾನಕ ಅನುಭವವನ್ನು ವಿವರಿಸಿದ ಅವರು, ನಾವು ಮಧ್ಯಪೂರ್ವದ ಒಂದು ಬಂದರಿನಲ್ಲಿ ಸರಕು ತುಂಬುತ್ತಿದ್ದಾಗ, ನಮ್ಮ ಹಡಗಿನಿಂದ ಸುಮಾರು 200 ಮೀಟರ್ ದೂರದಲ್ಲಿ ಕ್ಷಿಪಣಿ ಮತ್ತು ಡ್ರೋನ್‌ಗಳು ಬೀಳುತ್ತಿವೆ. ಆದರೂ ನಾವು ನಮ್ಮ ಕರ್ತವ್ಯವೆಂದು ಸರಕು ತುಂಬುವ ಕಾರ್ಯ ಮುಂದುವರಿಸಿದ್ದೇವೆ. ನಂತರ ಹಾರ್ಮುಜ್‌ಗೆ ಎರಡು ದಿನಗಳ ಪ್ರಯಾಣದ ಬಳಿಕ, ನಮಗೆ ನಂಗುರ ಹಾಕಲು ಸೂಚಿಸಲಾಗಿದೆ. ವ್ಯಾಪಾರ ನೌಕಾಪಡೆ ನಮ್ಮ ದೇಶದ ಇಂಧನ ಭದ್ರತೆಯನ್ನು ಖಾತ್ರಿಪಡಿಸುತ್ತದೆ. ಇಂತಹ ಪರಿಸ್ಥಿತಿಗಳಿಗೆ ನಾವು ಸದಾ ಸಿದ್ಧರಾಗಿರುತ್ತೇವೆ ಎಂದು ಹೇಳಿದರು.

ಈ ವಾರ ಹಡಗು ಪ್ರಯಾಣ ಮುಂದುವರಿಸಲು ಸಿದ್ಧವಾಗಿದ್ದರೂ, ಗುಂಡಿನ ದಾಳಿ ಮತ್ತು ಪರಸ್ಪರ ದಾಳಿಗಳ ಕಾರಣ ಪರಿಸ್ಥಿತಿ ಹದಗೆಟ್ಟಿದ್ದು, ಹಡಗನ್ನು ನಂಗುರ ಹಾಕಲು ಸೂಚಿಸಲಾಗಿದೆ. ಭಾರತೀಯ ನೌಕಾಪಡೆ ಹತ್ತಿರದಿಂದ ಪರಿಸ್ಥಿತಿಯನ್ನು ಗಮನಿಸುತ್ತಿದ್ದು, ಹಡಗುಗಳನ್ನು ಸುರಕ್ಷಿತವಾಗಿ ಹೊರತೆಗೆದುಕೊಳ್ಳಲು ರಾಜತಾಂತ್ರಿಕ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ.

ನಾವಿಕರ ಪ್ರಕಾರ, ಆಹಾರ, ಕುಡಿಯುವ ನೀರು ಮತ್ತು ಇಂಧನ ಸೇರಿದಂತೆ ಅಗತ್ಯ ಸಾಮಗ್ರಿಗಳು ಒಂದು ತಿಂಗಳಿಗೆ ಬೇಕಾಗುವಷ್ಟು ಸಂಗ್ರಹವಿದೆ ಎಂದರು.

ಮೂಲಗಳ ಪ್ರಕಾರ, ಒಟ್ಟು 22 ಹಡಗುಗಳು ಅಲ್ಲಿ ಸಿಲುಕಿಕೊಂಡಿದ್ದು, ಅವುಗಳಲ್ಲಿ ಏಳು ಎಲ್‌ಪಿಜಿ ಸಾಗಣೆ ಹಡಗುಗಳಾಗಿವೆ. ಇದರ ಮೊದಲು ಎರಡು ಹಡಗುಗಳು ಮಾತ್ರ ಹೊರಬಂದಿವೆ. ನಮ್ಮದು ಮೂರನೇ ಹಡಗು ಆಗಬೇಕಿತ್ತು, ಆದರೆ ಪರಿಸ್ಥಿತಿ ಹದಗೆಟ್ಟಿದೆ. ನಾವು ಸಿಲುಕಿರುವುದರಿಂದಲೇ ಭಾರತದಲ್ಲಿ ಎಲ್‌ಪಿಜಿ ಕೊರತೆ ಉಂಟಾಗಿದೆ ಎಂದು ನಾವಿಕರು ಹೇಳಿದ್ದಾರೆ.

ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿರುವ ಈ ಎಲ್‌ಪಿಜಿ ಸರಕು ಕರ್ನಾಟಕ, ಕೇರಳ ಮತ್ತು ಗೋವಾ ರಾಜ್ಯಗಳ ಜನರಿಗೆ 15ರಿಂದ 20 ದಿನಗಳವರೆಗೆ ಸಾಕಾಗುವಷ್ಟು ಇದೆ. ಸಾಮಾನ್ಯವಾಗಿ ಮಧ್ಯಪೂರ್ವದಿಂದ ಭಾರತಕ್ಕೆ ಪ್ರಯಾಣಕ್ಕೆ 6 ರಿಂದ 7 ದಿನಗಳು ಬೇಕಾಗುತ್ತದೆ.

ಕೆಲ ವರ್ಷಗಳ ಹಿಂದೆ ಬ್ಲ್ಯಾಕ್ ಸೀ ಪ್ರದೇಶದಲ್ಲೂ ಇಂತಹ ಸಮಸ್ಯೆಯಾಗಿದ್ದನ್ನು ಅವರು ನೆನಪಿಸಿಕೊಂಡರು. ಭೌಗೋಳಿಕ ರಾಜಕೀಯ ಸಂಘರ್ಷಗಳ ವೇಳೆ ವ್ಯಾಪಾರ ಹಡಗುಗಳು ಸುಲಭ ಗುರಿಯಾಗುತ್ತವೆ ಎಂದರು. ಆ ಪ್ರದೇಶದಲ್ಲಿ ಜಿಪಿಎಸ್ ಉಪಗ್ರಹ ವ್ಯವಸ್ಥೆ ಸ್ಥಗಿತಗೊಂಡಿರುವುದರಿಂದ ಸಮುದ್ರಯಾನ ಅಪಾಯಕಾರಿಯಾಗಿದೆ. ನೌಕಾಪಡೆಯ ರಕ್ಷಣೆಯಿಲ್ಲದೆ ಸಾಗುವುದು ಆತ್ಮಹತ್ಯೆಯಷ್ಟೇ ಅಪಾಯಕರ. ಕೆಲ ಸಿಬ್ಬಂದಿ ಭಯದಿಂದ ನಿದ್ದೆಯಿಲ್ಲದೆ ಕಳೆಯುತ್ತಿದ್ದಾರೆ ಎಂದರು.

ಭಾರತೀಯ ನೌಕಾಪಡೆಯ ಬೆಂಬಲ ನಮ್ಮ ಮನೋಬಲವನ್ನು ಹೆಚ್ಚಿಸುತ್ತಿದೆ. ನಾವು ನಮ್ಮ ದೈನಂದಿನ ಕೆಲಸಗಳನ್ನು ಮುಂದುವರಿಸುತ್ತಿದ್ದೇವೆ. ಸಿಬ್ಬಂದಿಯನ್ನು ಹೆಚ್ಚಿನ ಕೆಲಸಗಳಲ್ಲಿ ತೊಡಗಿಸಿಕೊಂಡು, ಒಳಾಂಗಣ ಕ್ರೀಡೆಗಳಂತಹ ಮನರಂಜನೆಗಳ ಮೂಲಕ ಅವರ ಮನೋಬಲವನ್ನು ಉಳಿಸಲು ಪ್ರಯತ್ನಿಸುತ್ತಿದ್ದೇವೆ. ನಾವು ಸುರಕ್ಷಿತವಾಗಿ ನಮ್ಮ ದೇಶಕ್ಕೆ ತಲುಪುವ ವಿಶ್ವಾಸದಲ್ಲಿದ್ದೇವೆ ಎಂದು ನಾವಿಕರು ಹೇಳುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia war: ಜಾಗತಿಕ ತೈಲ ಮಾರುಕಟ್ಟೆ ಅಸ್ಥಿರ; 48 ಗಂಟೆಗಳಲ್ಲಿ 'ಹಾರ್ಮುಜ್ ಜಲಸಂಧಿ' ತೆರೆಯದಿದ್ದರೆ ವಿದ್ಯುತ್ ಸ್ಥಾವರಗಳ ನಾಶ; ಇರಾನ್'ಗೆ ಟ್ರಂಪ್ ಕಠಿಣ ಎಚ್ಚರಿಕೆ

ಉಡುಪಿ: 'ಸಮಾಧಾನ ಮಹೋತ್ಸವ' ವಿರೋಧಿಸಿ ಪ್ರತಿಭಟನೆ; ಹಿಂದು ಜಾಗರಣಾ ವೇದಿಕೆಯ ಮುಖಂಡರು, ಕಾರ್ಯಕರ್ತರು ಸೇರಿ 38 ಮಂದಿ ವಶಕ್ಕೆ

ಚಿತ್ರದುರ್ಗದಲ್ಲಿ ಭೀಕರ ಆ್ಯಸಿಡ್ ದಾಳಿ: ಮಹಿಳೆ, ಮಕ್ಕಳು ಸೇರಿ ಐವರಿಗೆ ಗಂಭೀರ ಗಾಯ, ಆರೋಪಿಗಾಗಿ ಪೊಲೀಸರ ಶೋಧ

West Asia war: ಹಾರ್ಮುಜ್ ಜಲಸಂಧಿ 'ರೀ ಓಪನ್' ಮಾಡಲು 22 ರಾಷ್ಟ್ರಗಳು ಇರಾನ್ ಗೆ ಒತ್ತಾಯ! ಸೇನಾ ಕಾರ್ಯಾಚರಣೆ ಶೀಘ್ರ ಸ್ಥಗಿತ ಎಂದ ಅಮೆರಿಕ

IPL 2026: ಟಿಕೆಟ್ ಖರೀದಿಸುವಾಗ ನಕಲಿ ಲಿಂಕ್ ಗಳ ಬಗ್ಗೆ ಇರಲಿ ಎಚ್ಚರ- ಪೊಲೀಸರ ವಾರ್ನಿಂಗ್

SCROLL FOR NEXT