ಗದಗ: ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ಎರಡು ಸಮುದಾಯ(ವಾಲ್ಮೀಕಿ - ಎಸ್ಸಿ) ಗಳ ನಡುವೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಪೊಲೀಸರು ಬುಧವಾರ 191 ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲಿಸಿದ್ದು, 21 ಜನರನ್ನು ಬಂಧಿಸಿದ್ದಾರೆ.
ಕಳೆದ ಸೋಮವಾರ ಸಂಜೆ ಬೇರೆ ಸಮುದಾಯಕ್ಕೆ ಸೇರಿದ ರೈತನ ಜಮೀನಿನಲ್ಲಿ ಯುವಕನೊಬ್ಬ ನೀರು ಕುಡಿದ ನಂತರ ಈ ಹಿಂಸಾಚಾರ ಭುಗಿಲೆದ್ದಿದೆ.
ವಾಲ್ಮೀಕಿ ಸಮುದಾಯಕ್ಕೆ ಸೇರಿದ ರೈತನ ಜಮೀನಿನಲ್ಲಿ ಯುವಕನೊಬ್ಬ ನೀರು ಕುಡಿದಿದ್ದಾನೆ. ನೀರು ಕುಡಿದ ವ್ಯಕ್ತಿ ಎಸ್ಸಿ ಸಮುದಾಯಕ್ಕೆ ಸೇರಿದವನಾಗಿದ್ದಾನೆ ಎಂಬ ಕಾರಣಕ್ಕೆ ರೈತ ಆಕ್ಷೇಪ ವ್ಯಕ್ತಪಡಿಸಿದ್ದಾನೆ ಎನ್ನಲಾಗಿದೆ.
ಆದಾಗ್ಯೂ, ಮುಂಡರಗಿ ಪೊಲೀಸರು ಹಿಂಸಾಚಾರಕ್ಕೆ ಜಾತಿ ವಿಚಾರವನ್ನು ನಿರಾಕರಿಸಿದ್ದು, ಸೋಮವಾರ ರಾತ್ರಿ ಶಿವರಾತ್ರಿಯ ಸಮಯದಲ್ಲಿ ಹಳೆಯ ದ್ವೇಷದ ಕಾರಣ ಸಣ್ಣಪುಟ್ಟ ಗಲಾಟೆ ನಡೆದಿತ್ತು ಎಂದು ಹೇಳಿದ್ದಾರೆ.
ಎಸ್ಸಿ ಸಮುದಾಯಗಳ 122 ಮತ್ತು ಎಸ್ಟಿ ಸಮುದಾಯದ 69 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಸೋಮವಾರ ರಾತ್ರಿಯಿಂದ ಭಾರೀ ಪೊಲೀಸ್ ಬಂದೋಬಸ್ತ್ ಇದ್ದರೂ ಬುಧವಾರವೂ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ಇತ್ತು.
ಹಿಂಸಾಚಾರದಲ್ಲಿ ಒಟ್ಟಾರೆಯಾಗಿ, 32 ಗ್ರಾಮಸ್ಥರು ಗಾಯಗೊಂಡಿದ್ದು, ಅವರಲ್ಲಿ 15 ಮಂದಿ ಗಂಭೀರವಾಗಿದ್ದು, ಅವರನ್ನು ಗದಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. "ನಾವು 191 ಗ್ರಾಮಸ್ಥರ ವಿರುದ್ಧ ಎಫ್ಐಆರ್ ದಾಖಲಿಸಿದ್ದೇವೆ ಮತ್ತು ಗ್ರಾಮದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಹಿಂಸಾಚಾರವನ್ನು ಮುಂದುವರಿಸದಂತೆ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗಿದೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ" ಎಂದು ಮುಂಡರಗಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.